ಹುಬ್ಬಳ್ಳಿಯಲ್ಲಿ ಬಾಳಿ ಬದುಕಬೇಕಾದ 8 ವರ್ಷದ ಬಾಲಕನನ್ನು ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು, ಮುಗಿಲು ಮುಟ್ಟಿದ್ದ ಆಕ್ರಂದನ
ಹುಬ್ಬಳ್ಳಿ, ಮಾರ್ಚ್, 31: ಶಾಲೆ ರಜೆ ಇದೆಯೆಂದು 8 ವರ್ಷದ ಬಾಲಕನೊಬ್ಬ ಅಜ್ಜಿ ಮನೆಗೆ ಬಂದಿದ್ದ. ಈ ವೇಳೆ ಇನ್ನೂ ಬಾಳಿ ಬದುಕಬೇಕಾದ ಬಾಲಕನ ತಲೆಯ ಮೇಲೆ ಯಾರೋ ದುಷ್ಕರ್ಮಿಗಳು ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಪೈಶಾಚಿಕ ಕೃತ್ಯ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಮುಳ್ಳಿನ ಕಂಟಿಯಲ್ಲಿ ಎಂಟು ವರ್ಷದ ನದೀಂ ಹಸನಸಾಬ್ ಎಂಬ ಬಾಲಕನನ್ನು ಯಾರೋ ದುಷ್ಕರ್ಮಿಗಳು ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಹುಬ್ಬಳ್ಳಿಯ ಶ್ರೀನಗರ ನಿವಾಸಿಯಾದ ಈ ಬಾಲಕ ಶಾಲೆಗೆ ರಜೆ ಕೊಟ್ಟಿದ್ದರಿಂದ ಬೆಂಡಿಗೇರಿ ಪೊಲೀಸ್ ಠಾಣೆ ಹತ್ತಿರ ಇರುವ, ಕ್ರಿಶ್ಚಿಯನ್ ಕಾಲೋನಿಯ ದೊಡ್ಮನೆ ಚಾಳದ ಅಜ್ಜಿ ಮನೆಗೆ ಬಂದಿದ್ದ.

ಈ ಸಂದರ್ಭದಲ್ಲಿ ಯಾರೋ ದುಷ್ಕರ್ಮಿಗಳು ನಿನಗೆ ಹಣ ಕೊಡುತ್ತೇವೆ ಬಾ ಎಂದು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಬಾಲಕ ನದೀಂ ನಿನ್ನೆಯಿಂದ ನಾಪತ್ತೆ ಆಗಿದ್ದು, ಪೋಷಕರು ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇಂದು ಮಧ್ಯಾಹ್ನ ನದೀಂ ಅಜ್ಜ ಪಾಳು ಬಿದ್ದ ಗ್ರೌಂಡ್ನಲ್ಲಿ ಹುಡುಕುತ್ತಾ ಹೋಗಿದ್ದರು. ಈ ವೇಳೆ ಮುಳ್ಳಿನ ಕಂಟಿಯಲ್ಲಿ ನದೀಂ ಶವ ಪತ್ತೆಯಾಗಿದ್ದು, ಇದೀಗ ಬಾಲಕನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬೆಂಡಿಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಬಾಲಕನನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾರೆಂದು ಶಂಕೆ ವ್ಯಕ್ತವಾಗಿದ್ದು, ಬಾಲಕನ ಮೈಮೇಲಿದ್ದ ಬಟ್ಟೆಯನ್ನು ತೆಗೆದಿದ್ದಾರೆ. ಇದರಿಂದ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ ಎನ್ನುವುದು ಬಾಲಕನ ಪೋಷಕರ ಅಳಲಾಗಿದೆ. ಡಿಸಿಪಿ ರಾಜೀವ್ ಎಂ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೃತ್ಯ ಎಸುಗಿದವರನ್ನು ಪತ್ತೆ ಮಾಡುತ್ತೆವೆ ಎಂದು ಹೇಳಿದ್ದಾರೆ.

ಇನ್ನು ಶಾಲೆಯ ರಜೆ ದಿನಗಳನ್ನು ಸಂತೋಷದಿಂದ ಕಳೆಯಬೇಕೆಂದು ಅಜ್ಜಿ ಮನೆಗೆ ಬಂದಿದ್ದ ನದೀಂ ಬಾಲಕನ ಕೊಲೆಯಾಗಿದ್ದು, ಇಡೀ ಕುಟುಂಬವೇ ದುಃಖದಲ್ಲಿ ಮುಳುಗಿದೆ. ಆದಷ್ಟು ಬೇಗೆ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಕೊಲೆಯಾದ ಬಾಲಕನ ಕುಟುಂಬಸ್ಥರು ಪೊಲೀಸರಿಗೆ ಆಗ್ರಹಿಸಿದ್ದಾರೆ.
ಪತಿಯ ಕಾಟಕ್ಕೆ ಬೇಸತ್ತು ತವರು ಸೇರಿದ ಪತ್ನಿ
ಇನ್ನು ಮದ್ಯಪಾನ ವ್ಯಸನಿ ಗಂಡನ ಕಾಟ ತಾಳಲಾರದೇ ತವರು ಮನೆ ಸೇರಿದ್ದ ಪತ್ನಿಯನ್ನು ಪತಿಯೇ ಕೊಲೆ ಮಾಡಲು ಯತ್ನಿಸಿದ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದ ಭೋವಿ ಕಾಲೋನಿಯಲ್ಲಿ ಇತ್ತೀಚೆಗಷ್ಟೇ ನಡೆದಿತ್ತು. ರಮೇಶ ಪತ್ನಿಯನ್ನು ಕೊಲೆ ಮಾಡಲು ಮುಂದಾಗಿದ್ದ ಆರೋಪಿ ಎಂದು ಗುರುತಿಸಲಾಗಿದೆ.
ಹೊಸಪೇಟೆ ಮೂಲದ ರಮೇಶ್ ಕಳೆದ 8 ವರ್ಷಗಳ ಹಿಂದೆ ಹಗರಿಬೊಮ್ಮನಹಳ್ಳಿ ಪಟ್ಟಣದ ಭೋವಿ ಕಾಲೋನಿಯ ಆಶಾ ವನಜಾ ಅವರನ್ನು ಮದುವೆಯಾಗಿದ್ದನು. ಗಂಡ ರಮೇಶನ ಮದ್ಯ ಸೇವನೆ ಚಟ ಹೆಚ್ಚಿದ ಹಿನ್ನೆಲೆಯಲ್ಲಿ ಬೇಸತ್ತ ಪತ್ನಿ ಆಶಾ ವನಜಾ, ಗಂಡನ ಜೊತೆ ಸಂಸಾರ ಮಾಡಲು ನಿರಾಕರಿಸಿ, ಇತ್ತೀಚಿಗೆ ತವರು ಮನೆ ಸೇರಿದ್ದರು ಎನ್ನಲಾಗಿದೆ.
ತವರು ಮನೆಯಲ್ಲಿರುವ ಪತ್ನಿ ಆಶಾ ವನಜಾಳನ್ನು ವಾಪಸ್ ಕರೆ ತರಲು ರಮೇಶ ಸಾಕಷ್ಟು ಬಾರಿ ಪ್ರಯತ್ನಿಸಿದ್ದು, ಪತಿಯ ವರ್ತನೆಯಿಂದ ಬೇಸತ್ತ ಆಕೆ ಪುನಃ ಗಂಡನ ಮನೆಗೆ ಬರುವುದಿಲ್ಲ ಎಂದು ಪಟ್ಟುಹಿಡಿದಿದ್ದರು. ತವರು ಮನೆಗೆ ಹೋಗಿ ವರ್ಷವಾದ್ರೂ ಬಾರದ ಪತ್ನಿಯ ಮೇಲೆ ಕುಪಿತಗೊಂಡ ಪತಿ ರಮೇಶ್, ಗುರುವಾರ ಮಧ್ಯಾಹ್ನದ ವೇಳೆಗೆ ಮಚ್ಚು ಹಿಡಿದು ತವರು ಮನೆಗೆ ಬಂದಿದ್ದಾನೆ.
ಆಶಾ ವನಜಾಳನ್ನು ಮನೆಗೆ ಬರುವಂತೆ ಕರೆದ ರಮೇಶ್ ಒಂದು ವೇಳೆ ಬರದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಈ ವೇಳೆ ಮಧ್ಯೆ ಪ್ರವೇಶಿಸಿದ ಸ್ಥಳೀಯರು, ಮಚ್ಚು ಕಸಿದುಕೊಂಡು ಮಹಿಳೆಯನ್ನು ರಕ್ಷಿಸಿದ್ದಾರೆ. ರಮೇಶ್ಗೆ ಬುದ್ದಿವಾದ ಹೇಳಿದ್ದಾರೆ. ಅಲ್ಲದೇ ಕೂಡಲೇ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದು,ಗಂಡ ರಮೇಶನನ್ನು ಮಚ್ಚು ಸಮೇತ ಪೊಲೀಸರಿಗೆ ಒಪ್ಪಿಸಿದ್ದಾರೆ.












Click it and Unblock the Notifications