15 ಕ್ಷೇತ್ರದ ಉಪ ಚುನಾವಣೆ; ಮಹತ್ವದ ಸಭೆ ನಡೆಸಿದ ಬಿಎಸ್ವೈ, ಕಟೀಲ್
ಹುಬ್ಬಳ್ಳಿ, ಅಕ್ಟೋಬರ್ 27 : 15 ಕ್ಷೇತ್ರಗಳ ಉಪ ಚುನಾವಣೆಗೆ ಉಸ್ತುವಾರಿಗಳನ್ನು ನೇಮಕ ಮಾಡಲು ಬಿಜೆಪಿ ತೀರ್ಮಾನಿಸಿದೆ. ಡಿಸೆಂಬರ್ 5ರಂದು ಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ. ಅನರ್ಹ ಶಾಸಕರಿಗೆ ಉಪ ಚುನಾವಣೆ ಟಿಕೆಟ್ ಬಹುತೇಕ ಖಚಿತವಾಗಿದೆ.
ಹುಬ್ಬಳ್ಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಶನಿವಾರ ಉಪ ಚುನಾವಣೆ ಬಗ್ಗೆ ಮಹತ್ವದ ಸಭೆ ನಡೆಯಿತು. ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಲು ತೀರ್ಮಾನ ಕೈಗೊಳ್ಳಲಾಯಿತು.
ಅನರ್ಹ ಶಾಸಕರ ಅರ್ಜಿ ವಿಚಾರಣೆ ಅಂತ್ಯ: ತೀರ್ಪು ಕಾಯ್ದಿರಿಸಿದ ಸುಪ್ರೀಂ
"ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಅನರ್ಹ ಶಾಸಕರಿಗೆ ಟಿಕೆಟ್ ನೀಡುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ. ಅವರು ಪಕ್ಷಕ್ಕೆ ಬಂದರೆ ಸ್ವಾಗತಿಸಲಾಗುತ್ತದೆ" ಎಂದು ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದರು.
ಅನರ್ಹರಿಗೆ ಆತಂಕ ತಂದ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆ
"ಉಪ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಯನ್ನು ಚುರುಕುಗೊಳಿಸಬೇಕು. ಎಲ್ಲರೂ ಒಗ್ಗಟ್ಟಾಗಿ ಪಕ್ಷದ ಹೈಕಮಾಂಡ್ ತೀರ್ಮಾನಿಸುವ ಅಭ್ಯರ್ಥಿ ಗೆಲ್ಲಿಸಬೇಕು" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕರೆ ನೀಡಿದರು.
ಅನರ್ಹ ಶಾಸಕರಲ್ಲಿ ಯಾರ್ಯಾರು ಕಾಂಗ್ರೆಸ್ಗೆ ವಾಪಸಾಗುವ ಸಾಧ್ಯತೆ
ಉಸ್ತುವಾರಿಗಳ ನೇಮಕ
ಡಿಸೆಂಬರ್ 5ರಂದು ಉಪ ಚುನಾವಣೆ ನಡೆಯುವ ಎಲ್ಲಾ 15 ಕ್ಷೇತ್ರಗಳಿಗೂ ಉಸ್ತುವಾರಿಗಳನ್ನು ಬಿಜೆಪಿ ಭಾನುವಾರ ನೇಮಕ ಮಾಡಲಿದೆ. ನವೆಂಬರ್ 4ರೊಳಗೆ ಎಲ್ಲಾ ಉಸ್ತುವಾರಿಗಳು ಆಯಾ ಕ್ಷೇತ್ರಗಳಲ್ಲಿ ಸಭೆಗಳನ್ನು ನಡೆಸಿ ಚುನಾವಣೆ ತಯಾರಿ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ. ಸೂಚನೆಗಳನ್ನು ನೀಡಲಿದ್ದಾರೆ.
ಯಡಿಯೂರಪ್ಪ ಹೇಳಿದ್ದೇನು?
ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, "ನ್ಯಾಯಾಲಯದ ತೀರ್ಪಿನ ಬಳಿಕ ಅನರ್ಹರ ಜತೆಗೆ ಪಕ್ಷದ ಇತರ ಟಿಕೆಟ್ ಆಕಾಂಕ್ಷಿಗಳನ್ನು ಸೇರಿಸಿ ಸಭೆ ಮಾಡಲಾಗುವುದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು" ಎಂದು ಹೇಳಿದರು.
ಟಿಕೆಟ್ ಆಕಾಂಕ್ಷಿಗಳು ಗೈರು
ಉಪ ಚುನಾವಣೆ ಬಗ್ಗೆ ಚರ್ಚಿಸಲು ಕರೆದಿದ್ದ ಸಭೆಗೆ ಕಾಗವಾಡದ ಟಿಕೆಟ್ ಆಕಾಂಕ್ಷಿ ರಾಜು ಕಾಗೆ, ಗೋಕಾಕ್ ಕ್ಷೇತ್ರದ ಅಶೋಕ ಪೂಜಾರಿ, ವಿಜಯನಗರದ ಎಚ್. ಆರ್. ಗವಿಯಪ್ಪ ಗೈರಾಗಿದ್ದರು. ಅನರ್ಹ ಶಾಸಕರಿಗೆ ಟಿಕೆಟ್ ನೀಡಬಾರದು ಎಂದು ಮೂವರು ಒತ್ತಾಯ ಮಾಡುತ್ತಿದ್ದಾರೆ.
ಅಥಣಿ ಟಿಕೆಟ್ ಡಿಸಿಎಂಗೆ ಇಲ್ಲ
ಅಥಣಿ ಕ್ಷೇತ್ರದ ಉಪ ಚುನಾವಣೆ ಟಿಕೆಟ್ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಸಿಗುವುದು ಇನ್ನೂ ಖಚಿತವಾಗಿಲ್ಲ. ಅನರ್ಹ ಶಾಸಕ ಮಹೇಶ್ ಕಮಟಳ್ಳಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಕಳೆದ ಚುನಾವಣೆಯಲ್ಲಿ ಮಹೇಶ್ ಕಮಟಳ್ಳಿ ವಿರುದ್ಧ ಸೋತಿದ್ದ ಲಕ್ಷ್ಮಣ ಸವದಿ ಈಗ ಉಪ ಮುಖ್ಯಮಂತ್ರಿಯಾಗಿದ್ದಾರೆ.