ಹಾವೇರಿ ಜಿಲ್ಲೆಗೆ ಒಲಿದು ಬರಲಿದೆಯಾ ಸಿಎಂ ಕುರ್ಚಿ? ರೇಸ್ನಲ್ಲಿ ಯಾರು?
ಹಾವೇರಿ, ಜುಲೈ 27: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ಸೋಮವಾರದಂದು ರಾಜೀನಾಮೆ ನೀಡುತ್ತಿದ್ದಂತೆಯೇ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಸಿಎಂ ಕುರ್ಚಿ ರೇಸ್ನಲ್ಲಿ ರಾಜ್ಯದ ಹಲವು ನಾಯಕರ ಹೆಸರು ಕೇಳಿಬರುತ್ತಿದ್ದರೂ, ಆದರೆ ಈ ಬಗ್ಗೆ ಬಿಜೆಪಿ ಹೈಕಮಾಂಡ್ ಇನ್ನೂ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಯಾರನ್ನು ಸಿಎಂ ಮಾಡಬೇಕು ಎಂಬುದನ್ನು ಅತ್ಯಂತ ಗೌಪ್ಯವಾಗಿ ನಿರ್ವಹಿಸುತ್ತಿರುವ ಬಿಜೆಪಿ ವರಿಷ್ಠರು ಇಂದು ಅಥವಾ ನಾಳೆ ಘೋಷಿಸಬಹುದು.
ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಗೆ ಈ ಬಾರಿ ಮುಖ್ಯಮಂತ್ರಿ ಸ್ಥಾನ ಒಲಿದು ಬರುವ ಸಾಧ್ಯತೆಗಳಿವೆ. ಬಿಜೆಪಿ ಹೈಕಮಾಂಡ್ ಮಟ್ಟದಲ್ಲೂ ಜಿಲ್ಲೆಯ ಇಬ್ಬರ ಹೆಸರು ಓಡಾಡುತ್ತಿದೆ. ಅದರಲ್ಲಿ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಹಾಗೂ ಹಾವೇರಿ- ಗದಗ ಲೋಕಸಭಾ ಸಂಸದರಾಗಿರುವ ಶಿವಕುಮಾರ್ ಉದಾಸಿ.
ಬಸವರಾಜ ಬೊಮ್ಮಾಯಿ
ಇನ್ನು ಸಿಎಂ ರೇಸ್ನಲ್ಲಿ ಹಲವು ಹೆಸರು ಕೇಳಿ ಬರುತ್ತಿದ್ದು, ಬಿ.ಎಸ್. ಯಡಿಯೂರಪ್ಪ ಆಪ್ತ ಬಸವರಾಜ ಬೊಮ್ಮಾಯಿ ಹೆಸರೂ ಕೂಡ ಒಂದಾಗಿದೆ. ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಯ ಶಿಗ್ಗಾವಿ- ಸವಣೂರು ಕ್ಷೇತ್ರದ ಶಾಸಕರಾಗಿರುವ ಬಸವರಾಜ ಬೊಮ್ಮಾಯಿ ಅನುಭವಿ ರಾಜಕಾರಣಿಯಾಗಿದ್ದು, ಸಚಿವ ಸಂಪುಟದಲ್ಲಿ ಹಲವು ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಹೆಸರನ್ನು ಮುಖ್ಯಮಂತ್ರಿ ಕುರ್ಚಿಗೆ ಬಿ.ಎಸ್. ಯಡಿಯೂರಪ್ಪ ಸೂಚಿಸಬಹುದು. ಯಾಕೆಂದರೆ ಬಸವರಾಜ ಬೊಮ್ಮಾಯಿಯನ್ನು ಸಿಎಂ ಮಾಡಿದರೆ ಪುತ್ರ ಬಿ.ವೈ. ವಿಜಯೇಂದ್ರನ ಭವಿಷ್ಯಕ್ಕೆ ಯಾವುದೇ ಅಡ್ಡಿಯುಂಟಾಗುವುದಿಲ್ಲ ಎನ್ನಬಹುದು. ಅದೇ ರೀತಿ ಬೊಮ್ಮಾಯಿ ಸಿಎಂ ಅದರೆ ಎಲ್ಲ ಶಾಸಕರು ಒಪ್ಪಬಹುದು.
ಶಿವಕುಮಾರ್ ಉದಾಸಿ
ಮುಖ್ಯಮಂತ್ರಿ ಹುದ್ದೆಗೆ ಹಾವೇರಿ ಜಿಲ್ಲೆಯಿಂದ ಕೇಳಿಬರುವ ಮತ್ತೊಂದು ಹೆಸರು ಯಾವುದೆಂದರೆ ಸಂಸದ ಶಿವಕುಮಾರ್ ಉದಾಸಿ. ಹಾವೇರಿ- ಗದಗ ಲೋಕಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಸಂಸದಾರಗಿರುವ ಶಿವಕುಮಾರ್ ಉದಾಸಿ ಕ್ಲೀನ್ ಚಿಟ್ ಎಂದೇ ಬಿಂಬಿತರಾಗಿದ್ದಾರೆ.
ಬಿಜೆಪಿ ಹೈಕಮಾಂಡ್ ಯೋಚನೆಯಲ್ಲೂ ಶಿವಕುಮಾರ್ ಉದಾಸಿ ಹೆಸರು ಇದೆ ಎಂದು ಬಲ್ಲ ಮೂಲಗಳು ಹೇಳುತ್ತಿವೆ. ಮಾಜಿ ಸಚಿವ ದಿ. ಸಿ.ಎಂ. ಉದಾಸಿ ಪುತ್ರನೂ ಆಗಿರುವ ಶಿವಕುಮಾರ್ ಉದಾಸಿ ಬಿ.ಎಸ್. ಯಡಿಯೂರಪ್ಪ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಸಿಎಂ ಗಾದಿಗೆ ಶಿವಕುಮಾರ್ ಹೆಸರು ಮುನ್ನೆಲೆಗೆ ಬಂದರೆ ಬಿಎಸ್ವೈ ಬೆಂಬಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಹುದ್ದೆಗೆ ಹಾವೇರಿ ಜಿಲ್ಲೆಯಿಂದ ಬಸವರಾಜ ಬೊಮ್ಮಾಯಿ ಮತ್ತು ಶಿವಕುಮಾರ್ ಉದಾಸಿ ಹೆಸರು ಕೇಳಿಬರಲು ಕಾರಣ ಬಿ.ಎಸ್. ಯಡಯೂರಪ್ಪ ಆಪ್ತರು. ಅದಕ್ಕೂ ಮಿಗಿಲಾಗಿ ಈ ಇಬ್ಬರೂ ಲಿಂಗಾಯತ ಸಮುದಾಯಕ್ಕೆ ಸೇರಿದವರು.
ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕನೆಂದೇ ಬಿಂಬಿತವಾಗಿದ್ದ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ ಹಿನ್ನೆಲ್ಲೆಯಲ್ಲಿ ಅದೇ ಸಮುದಾಯದ ಮತ್ತೊಬ್ಬರನ್ನು ಸಿಎಂ ಮಾಡಬೇಕು, ಅದರಿಂದ ಲಿಂಗಾಯತ ಸಮುದಾಯದ ವೋಟ್ ಬ್ಯಾಂಕ್ ಉಳಿಸಿಕೊಳ್ಳಬಹುದು ಎಂಬ ಯೋಚನೆ ಬಿಜೆಪಿ ಹೈಕಮಾಂಡ್ಗೆ ಬಂದಿರಬಹುದು.
ಒಟ್ಟಾರೆ, ಮಂಗಳವಾರ ಸಂಜೆ ಬೆಂಗಳೂರಿನ ದಿ ಕ್ಯಾಪಿಟಲ್ ಹೋಟೆಲ್ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಈ ವೇಳೆ ಕೇಂದ್ರ ವೀಕ್ಷಕರ ತಂಡ ಆಗಮಿಸಿ, ಶಾಸಕರ ಅಭಿಪ್ರಾಯ ಕೇಳಲಿದ್ದಾರೆ. ಇಂದು ಅಥವಾ ನಾಳೆ(ಬುಧವಾರ) ಸಿಎಂ ಹೆಸರು ಬಹಿರಂಗಗೊಳ್ಳಲಿದೆ.