ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು: ಗೃಹ ಸಚಿವ ಬೊಮ್ಮಾಯಿ ಜನಮೆಚ್ಚುವ ಕೆಲಸ
ಹಾವೇರಿ, ಮೇ 18: ಬೆಡ್, ಐಸಿಯು ಬೆಡ್ ಸಮಸ್ಯೆಗಳ ನಡುವೆ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಮ್ಮ ಸ್ವಕ್ಷೇತ್ರ ಶಿಗ್ಗಾವಿಯಲ್ಲಿ ಜನಮೆಚ್ಚುವ ಕೆಲಸವನ್ನು ಮಾಡಿದ್ದಾರೆ. ತಮ್ಮ ಮನೆಯ ಆವರಣವನ್ನು ಬೊಮ್ಮಾಯಿ ಅವರು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದ್ದಾರೆ.
Recommended Video
ಜಿಲ್ಲೆಯಲ್ಲಿ ಕೊರೊನಾ ಕೇಸುಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಬೊಮ್ಮಾಯಿ, ತಮ್ಮ ಮನೆಯ ಆವರಣದಲ್ಲಿ ಐವತ್ತು ಹಾಸಿಗೆಗಳ ಕೋವಿಡ್ ಸೆಂಟರ್ ಅನ್ನು ತೆರೆದಿದ್ದಾರೆ. ಇದೇ ಮೊದಲ ಬಾರಿಗೆ ಸಚಿವರೊಬ್ಬರ ಮನೆ ಕೋವಿಡ್ ಕೇಂದ್ರವಾಗಿ ಬದಲಾಗಿದೆ.
ಸದ್ಯ ಹದಿನೈದು ಜನ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶುಚಿತ್ವಕ್ಕೆ ಆದ್ಯತೆ ನೀಡಲಾಗುವುದು ಮತ್ತು ಖಾಸಗಿ ಆಸ್ಪತ್ರೆಯ ವೈದ್ಯರೂ ಸೋಂಕಿತರ ತಪಾಸಣೆಗೆ ಬರುತ್ತಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಲ್ಲಿ ಕೋವಿಡ್ ಸೆಂಟರ್ ತೆರೆದ ನಂತರ ತಾಲೂಕು ಆಸ್ಪತ್ರೆಗೆ ಒತ್ತಡ ಕಮ್ಮಿಯಾಗಲಿದೆ. ಬೊಮ್ಮಾಯಿಯವರ ಕುಟುಂಬ ಹುಬ್ಬಳ್ಳಿಯಲ್ಲಿ ನೆಲೆಸಿದ್ದರೂ, ಶಿಗ್ಗಾವ್ ಭೇಟಿ ನೀಡಿದಾಗ ಇಲ್ಲೇ ಇವರು ವಾಸ್ತವ್ಯ ಹೂಡುತ್ತಾರೆ.

ಇದು ಆಸ್ಪತ್ರೆಯಲ್ಲ, ಮನೆ ಎಂದು ಭಾವಿಸಿ, ವೈದ್ಯರು ಆರೋಗ್ಯ ವಿಚಾರಣೆ ಮಾಡುತ್ತಾರೆ
"ಇದು ಆಸ್ಪತ್ರೆಯಲ್ಲ, ಮನೆ ಎಂದು ಭಾವಿಸಿ. ಇಲ್ಲಿ ವೈದ್ಯರು ನಿಮ್ಮ ಆರೋಗ್ಯ ವಿಚಾರಣೆ ಮಾಡುತ್ತಾರೆ. ಸೋಂಕಿತರಿಗೆ ಮಾತ್ರೆ ನೀಡುತ್ತಾರೆ. ಆಕ್ಸಿಜನ್ ವ್ಯವಸ್ಥೆ ಇದೆ. ಮೂರು ಹೊತ್ತು ಊಟದ ವ್ಯವಸ್ಥೆ ಇರುತ್ತದೆ. ನಿಶ್ಚಿಂತೆಯಿಂದ ಗುಣಮುಖರಾಗಿ ಮನೆಗೆ ತೆರಳಿ" ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೋಂಕಿತರಲ್ಲಿ ಮನವಿ ಮಾಡಿದ್ದಾರೆ.

ಸರ್ಕಾರಿ ವೈದ್ಯರಿಗೂ ಸಹ ನಾನು ಮನವಿ ಮಾಡಿದ್ದೇನೆ
"ಸದ್ಯ ಹದಿನೈದು ಸೋಂಕಿತರು ಇಲ್ಲಿ ಭರ್ತಿಯಾಗಿದ್ದಾರೆ. ಅವರಿಗೆ ಆಕ್ಸಿಜನ್ ಕಾನ್ಸೆಂಟ್ರೇಟರ್ ಗಳನ್ನು ಅಳವಡಿಸಲಾಗಿದೆ. ಪ್ರತಿದಿನ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಹಣ್ಣು ಹಂಪಲು ನೀಡಲಾಗುತ್ತದೆ. ಸರ್ಕಾರಿ ವೈದ್ಯರಿಗೂ ಸಹ ನಾನು ಮನವಿ ಮಾಡಿದ್ದೇನೆ. ಅವರು ಕೂಡ ಇಲ್ಲಿಗೆ ಭೇಟಿ ನೀಡಿ ವೈದ್ಯೋಪಚಾರ ನೀಡಲಿದ್ದಾರೆ" ಎಂದು ಬೊಮ್ಮಾಯಿ ಹೇಳಿದ್ದಾರೆ.

ಸರ್ಕಾರದ ವತಿಯಿಂದ ಆಕ್ಸಿಜನ್ ಜನರೇಟರ್ ಕೇಂದ್ರ ಸ್ಥಾಪನೆಗೆ ಒಪ್ಪಿಗೆ
"ಮುಂದಿನ ದಿನಗಳಲ್ಲಿ ಎದುರಾಗಬಹುದಾದ 3ನೇ ಅಲೆಯನ್ನು ಎದುರಿಸಲು ನಾವು ಈಗಲೇ ಸಜ್ಜಾಗಬೇಕಾಗಿದೆ. ಹೀಗಾಗಿ ಆಕ್ಸಿಜನ್ ಜನರೇಟರುಗಳು ನಿರ್ಮಾಣ ಮಾಡಬೇಕಾದ ಅಗತ್ಯವಿದೆ. ಶಿಗ್ಗಾವಿ, ಹಾನಗಲ್, ಹಾವೇರಿ ತಾಲೂಕಿನಲ್ಲಿ ಸರ್ಕಾರದ ವತಿಯಿಂದ ಆಕ್ಸಿಜನ್ ಜನರೇಟರ್ ಕೇಂದ್ರ ಸ್ಥಾಪನೆಗೆ ಒಪ್ಪಿಗೆ ಸಿಕ್ಕಿದೆ. ಪ್ರಲ್ಹಾದ್ ಜೋಶಿಯವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ" ಎಂದು ಬಸವರಾಜ ಬೊಮ್ಮಾಯಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

ನನ್ನ ಕ್ಷೇತ್ರದ ಜನತೆಗೆ ನಾನು ಮಾಡುತ್ತಿರುವ ಅಳಿಲು ಸೇವೆ
"ನನ್ನ ಮನೆಯ ಆವರಣದಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಿದ್ದು ನನ್ನ ಕ್ಷೇತ್ರದ ಜನತೆಗೆ ನಾನು ಮಾಡುತ್ತಿರುವ ಅಳಿಲು ಸೇವೆ. ಕಷ್ಟಕಾಲದಲ್ಲಿ ನಮ್ಮ ಜನರ ಕೈಹಿಡಿಯಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಈ ಕೇಂದ್ರ ಸ್ಥಾಪನೆಗೆ ನನಗೆ ಸಿದ್ದೇಶ್ವರ ಸ್ವಾಮೀಜಿಗಳು ಪ್ರೇರಣೆ"ಎಂದು ಬೊಮ್ಮಾಯಿ ಅವರನ್ನು ನೆನಪಿಸಿಕೊಂಡರು.












Click it and Unblock the Notifications