Karnataka Elections: ಟಿಕೆಟ್ ನಿರಾಕರಣೆ- ಬಿಜೆಪಿ ತೊರೆದ ಹಾವೇರಿ ಶಾಸಕ ನೆಹರು ಓಲೇಕಾರ್
ಹಾವೇರಿ, ಏಪ್ರಿಲ್ 13: ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ( Karnataka Assembly Elections 2023 ) ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ನೆಹರು ಓಲೇಕಾರ ಗುರುವಾರ ಪಕ್ಷ ತೊರೆದಿದ್ದಾರೆ. 65 ವರ್ಷ ವಯಸ್ಸಿನ ನೆಹರು ಓಲೇಕಾರ ಪರಿಶಿಷ್ಟ ಜಾತಿ ಸಮುದಾಯದವರು. ಹಾವೇರಿ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದ ಅವರು ಕೇಸರಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು ಕೇಸರಿ ಪಕ್ಷವು ತಮ್ಮನ್ನು ಕಡೆಗಣಿಸಿದೆ ಎಂದು ಆರೋಪಿಸಿದ್ದಾರೆ. ತಮ್ಮ ಬೆಂಬಲಿಗರೊಂದಿಗೆ ಹಾವೇರಿ ನಗರದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಅವರ ಬದಲಿಗೆ ಹಾವೇರಿ (ಎಸ್ಸಿ) ಕ್ಷೇತ್ರದಲ್ಲಿ ಗವಿಸಿದ್ದಪ್ಪ ದ್ಯಾಮಣ್ಣನವರ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ.

ಅವರನ್ನು ಬೆಂಬಲಿಸುತ್ತಿರುವ ಸಾವಿರಾರು ಬಿಜೆಪಿ ಕಾರ್ಯಕರ್ತರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದಾರೆ ಎಂದು ಓಲೇಕಾರ ಹೇಳಿದ್ದಾರೆ. 'ನಾವು ನಮ್ಮ ಕಾರ್ಯಕರ್ತರ ಅಭಿಪ್ರಾಯಕ್ಕಾಗಿ ಕಾಯುತ್ತೇವೆ. ಅವರೊಂದಿಗಿನ ಸಭೆಯ ಫಲಿತಾಂಶದ ಆಧಾರದ ಮೇಲೆ ನಾವು ನಿರ್ಧಾರವನ್ನು (ಭವಿಷ್ಯದ ಕ್ರಮ) ತೆಗೆದುಕೊಳ್ಳುತ್ತೇವೆ' ಎಂದು ಓಲೇಕಾರ್ ಹೇಳಿದ್ದಾರೆ.
ಜೆಡಿಎಸ್ ಮತ್ತು ಇನ್ನೊಂದು ಪಕ್ಷದಿಂದ ನನಗೆ ಆಫರ್ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ವರ್ಷದ ಆರಂಭದಲ್ಲಿ, ಓಲೇಕಾರ್ ತಮ್ಮ ಗುತ್ತಿಗೆದಾರ ಪುತ್ರರಿಗೆ ಸರ್ಕಾರದ ಹಣವನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದಕ್ಕೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪದ ಮೇಲೆ ಎರಡು ವರ್ಷಗಳ ಸರಳ ಜೈಲು ಶಿಕ್ಷೆಗೆ ನೆಹರು ಓಲೆಕಾರ್ ಗುರಿಯಾಗಿದ್ದರು. ನಂತರ ಈ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.

ಬಿಜೆಪಿ ಎರಡನೇ ಪಟ್ಟಿಯಲ್ಲಿ ಏಳು ಹಾಲಿ ಶಾಸಕರನ್ನು ಕೈಬಿಡಲಾಗಿದೆ. ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ಏಳು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಹಾವೇರಿ ಹಾಗೂ ಬೈಂದೂರಿನಲ್ಲಿ ಹಾಲಿ ಶಾಸಕರಾದ ನೆಹರು ಓಲೇಕಾರ್ ಮತ್ತು ಬಿ ಸುಕುಮಾರ್ ಶೆಟ್ಟಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಶಾಸಕರಾದ ಎಂ.ಪಿ.ಕುಮಾರಸ್ವಾಮಿ, ಸಿ.ಎಂ.ನಿಂಬಣ್ಣನವರ್, ಎಸ್.ಎ.ರವೀಂದ್ರನಾಥ್, ಎನ್.ಲಿಂಗಣ್ಣ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.
ಬಿಜೆಪಿಯ ಎರಡನೇ ಪಟ್ಟಿಯಲ್ಲಿ ನಾಲ್ವರು ಪರಿಶಿಷ್ಟ ಜಾತಿ, ಒಬ್ಬರು ಪರಿಶಿಷ್ಟ ಪಂಗಡ ಮತ್ತು ಇಬ್ಬರು ಮಹಿಳಾ ಅಭ್ಯರ್ಥಿಗಳು ಇದ್ದಾರೆ. ಹಾವೇರಿಯಲ್ಲಿ ಗವಿಸಿದ್ದಪ್ಪ ದ್ಯಾಮಣ್ಣನವರ್ ಅವರಿಗೆ ಟಿಕೆಟ್ ನೀಡಲಾಗಿದೆ. ಬೈಂದೂರಿನಲ್ಲಿ ಗುರುರಾಜ ಗಂಟಿಹೊಳೆಗೆ ಟಿಕೆಟ್ ನೀಡಲಾಗಿದೆ.
ಮೂಡಿಗೆರೆಗೆ ದೀಪಕ್ ದೊಡ್ಡಯ್ಯ, ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಪಕ್ಷಕ್ಕೆ ಸೇರ್ಪಡೆಗೊಂಡ ನಾಗರಾಜ್ ಛಬ್ಬಿಗೆ ಕಲಘಟಗಿ, ಮಾಯಕೊಂಡದಲ್ಲಿ ಬಸವರಾಜ ನಾಯ್ಕ್ ಅವರಿಗೆ ಟಿಕೆಟ್ ನೀಡಲಾಗಿದೆ. ದಾವಣಗೆರೆ ಉತ್ತರದಲ್ಲಿ ಲೋಕಿಕೆರೆ ನಾಗರಾಜ ಅವರಿಗೆ ಟಿಕೆಟ್ ನೀಡಲಾಗಿದೆ.
ಪ್ರಸ್ತುತ ಮಾಜಿ ಮುಖ್ಯಮಂತ್ರಿ ಹಾಗೂ ಆರು ಬಾರಿ ಶಾಸಕರಾಗಿರುವ ಜಗದೀಶ ಶೆಟ್ಟರ್ ಪ್ರತಿನಿಧಿಸುತ್ತಿರುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ.
ಬಿಜೆಪಿ ಇದುವರೆಗೆ 212 ಅಭ್ಯರ್ಥಿಗಳನ್ನು ಘೋಷಿಸಿದೆ. ಒಟ್ಟಾರೆ 18 ಹಾಲಿ ಶಾಸಕರಿಗೆ ಪಕ್ಷ ಟಿಕೆಟ್ ನೀಡಿಲ್ಲ. ಏತನ್ಮಧ್ಯೆ, ವರುಣಾದಲ್ಲಿ ಕಾಂಗ್ರೆಸ್ ಮುಖಂಡ ಮತ್ತು ಕರ್ನಾಟಕದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಲಿರುವ ವಸತಿ ಸಚಿವ ವಿ ಸೋಮಣ್ಣ ಅವರು ತಮ್ಮ ಪುತ್ರ ಅರುಣ್ ಅವರನ್ನು ತುಮಕೂರು ಜಿಲ್ಲೆಯ ಗುಬ್ಬಿಯಿಂದ ಕಣಕ್ಕಿಳಿಸಬೇಕು ಎಂದು ಬಯಸಿದ್ದರು. ಆದರೆ ಟಿಕೆಟ್ ಎಸ್ಡಿ ದಿಲೀಪ್ ಕುಮಾರ್ ಪಾಲಾಗಿದೆ ಆದರೆ, ಸೋಮಣ್ಣ ಪ್ರತಿನಿಧಿಸುವ ಗೋವಿಂದರಾಜ್ ನಗರ ಇನ್ನೂ ಘೋಷಣೆಯಾಗಬೇಕಿದೆ.
ಗಣಿ ಉದ್ಯಮಿ ಜನಾರ್ದನ ರೆಡ್ಡಿ ಅವರ ಹಿರಿಯ ಸಹೋದರ ಜಿ ಕರುಣಾಕರ್ ರೆಡ್ಡಿ ಅವರಿಗೆ ಪ್ರಸ್ತುತ ಅವರು ಪ್ರತಿನಿಧಿಸುವ ಹರಪನಹಳ್ಳಿ ಕ್ಷೇತ್ರದ ಟಿಕೆಟ್ ನೀಡಲಾಗಿದೆ.












Click it and Unblock the Notifications