ರಾಜೀನಾಮೆ ವದಂತಿ ನಡುವೆ 'ಯಾವುದೇ ಹುದ್ದೆ ಶಾಶ್ವತವಲ್ಲ' ಎಂದ ಬೊಮ್ಮಾಯಿ!

ಹಾವೇರಿ, ಡಿಸೆಂಬರ್‌ 20: ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತನ್ನ ಮುಖ್ಯಮಂತ್ರಿ ಸ್ಥಾನವನ್ನು ತೊರೆಯಲಿದ್ದಾರೆ, ಶೀಘ್ರ ರಾಜೀನಾಮೆ ನೀಡಲಿದ್ದಾರೆ ಎಂಬ ಬಗ್ಗೆ ಊಹಾಪೋಹಗಳು ಹಬ್ಬುತ್ತಿದೆ. ಈ ನಡುವೆ ಈ ವದಂತಿಗೆ ಪುಷ್ಢಿ ನೀಡುವಂತಹ ಹೇಳಿಕೆಯನ್ನು ಬಸವರಾಜ ಬೊಮ್ಮಾಯಿ ನೀಡಿದ್ದಾರೆ.

ತನ್ನ ವಿಧಾನಸಭೆ ಕ್ಷೇತ್ರವಾದ ಶಿಗ್ಗಾಂವಿಯಲ್ಲಿ ಆಯೋಜಿಸಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮ ಪುತ್ಥಳಿ ಲೋಕಾರ್ಪಣೆ ಹಾಗೂ ಸಮುದಾಯ ಭವನದ ಅಡಿಗಲ್ಲು ಸಮಾರಂಭದಲ್ಲಿ ಭಾವುಕರಾಗಿ ಮಾತನಾಡಿದ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ನಮ್ಮ ಜೀವನದಲ್ಲಿ ಯಾವುದೂ ಕೂಡಾ ಶಾಶ್ವತವಲ್ಲ. ಯಾವುದೇ ಸ್ಥಾನ, ಹುದ್ದೆ ಶಾಶ್ವತವಲ್ಲ. ಸಿಎಂ ಸ್ಥಾನದಲ್ಲಿ ಎಲ್ಲಿಯವರೆಗೆ ಇರಲಿದ್ದೇನೆ ಎಂದು ತಿಳಿದಿಲ್ಲ," ಎಂದು ಹೇಳುವ ಮೂಲಕ ಈ ವದಂತಿಗೆ ತುಪ್ಪ ಸುರಿದಿದ್ದಾರೆ.

"ಈ ವಿಶ್ವದಲ್ಲಿ ಯಾವುದೂ ಕೂಡಾ ಶಾಶ್ವತವಲ್ಲ. ಈ ಜೀವನವೇ ಶಾಶ್ವತವಲ್ಲ. ನಾವು ಇಂತಹ ಸಂದರ್ಭದಲ್ಲಿ ಎಲ್ಲಿಯವರೆಗೆ ಇಲ್ಲಿ ಇರಲಿದ್ದೇವೆ ಎಂಬುವುದು ನಮಗೆ ತಿಳಿದಿಲ್ಲ. ಈ ಹುದ್ದೆ, ಈ ಮುಖ್ಯಮಂತ್ರಿ ಸ್ಥಾನದಲ್ಲಿ ನಾವು ಎಷ್ಟು ಸಮಯ ಇರಲಿದ್ದೇವೆ ತಿಳಿದಿಲ್ಲ, ಅಧಿಕಾರವೂ ಕೂಡಾ ಎಂದಿಗೂ ಶಾಶ್ವತವಲ್ಲ. ನಾನು ಈ ಬಗ್ಗೆ ಸರಿಯಾಗಿ ತಿಳಿದಿದ್ದೇನೆ," ಎಂದು ತಮ್ಮ ವಿಧಾನಸಭೆ ಕ್ಷೇತ್ರದಲ್ಲಿ ಭಾವುಕರಾಗಿ ನುಡಿದಿದ್ದಾರೆ.

"ನನ್ನ ಹೆಸರು ಮಾತ್ರ ಶಾಶ್ವತ ಹುದ್ದೆಯಲ್ಲ"

ಇನ್ನು ತನ್ನ ಕ್ಷೇತ್ರದಲ್ಲಿ ಜನರಿಗೆ ಧನ್ಯವಾದವನ್ನು ಹೇಳಿದ ಬಸವರಾಜ ಬೊಮ್ಮಾಯಿ, "ನಾನು ನಿಮಗೆ ಕೇವಲ ಬಸವರಾಜ, ಮುಖ್ಯಮಂತ್ರಿ ಅಲ್ಲ," ಎಂದಿದ್ದಾರೆ. "ನಾನು ಈ ಹಿಂದೆ ಗೃಹ ಮಂತ್ರಿ ಮತ್ತು ನೀರಾವರಿ ಸಚಿವನಾಗಿದ್ದೆ ಎಂದು ನಾನು ಯಾವಾಗಲೂ ಹೇಳುತ್ತೇನೆ. ಆದರೆ ನಾನು ನಿಮ್ಮೆಲ್ಲರಿಗೂ ಕೇವಲ ಬಸವರಾಜನಾಗಿ ಉಳಿದಿದ್ದೇನೆ. ನಾನು ಈಗ ಮುಖ್ಯಮಂತ್ರಿಯಾಗಿ ಇಲ್ಲಿಗೆ ಬಂದಿರಬಹುದು, ಆದರೆ ನಾನು ನಿಮ್ಮ ನಡುವೆ ಬಸವರಾಜ ಆಗಿಯೇ ಉಳಿಯುತ್ತೇನೆ. ಏಕೆಂದರೆ ಬಸವರಾಜ ಎಂಬ ನನ್ನ ಹೆಸರು ಮಾತ್ರ ಶಾಶ್ವತವಾಗಿರಲಿದೆ. ಬದಲಾಗಿ ನನ್ನ ಹುದ್ದೆ ಶಾಶ್ವತವಲ್ಲ," ಎಂದು ತಿಳಿಸಿದ್ದಾರೆ.

ಸಿಎಂ ಬದಲಾವಣೆ ವದಂತಿ

ಸಿಎಂ ಬದಲಾವಣೆ ವದಂತಿ

ಮುಖ್ಯಮಂತ್ರಿ ಸ್ಥಾನದಿಂದ ಬಸವರಾಜ ಬೊಮ್ಮಾಯಿಯನ್ನು ಕೆಳಗಿಳಿಸಲಿದ್ದಾರೆ. ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಮಾಡಲಿದ್ದಾರೆ ಎಂಬ ಸುದ್ದಿಯು ಹರಡುತ್ತಿದೆ. ಈ ನಡುವೆ ಮುಖ್ಯಮಂತ್ರಿ ಭಾವುಕರಾಗಿ ಸ್ಥಾನ ಶಾಶ್ವತವಲ್ಲ ಎಂದಿರುವುದು ಈ ವದಂತಿಗೆ ಮತ್ತಷ್ಟು ಪುಷ್ಠಿ ತುಂಬಿದೆ. ಈ ಮಧ್ಯೆ ಮುಖ್ಯಮಂತ್ರಿ ಮೊಣಕಾಲು ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವರದಿಯು ಹೇಳಿದೆ. ವಿದೇಶದಲ್ಲಿ ಚಿಕಿತ್ಸೆ ಪಡೆಯುವ ಸಾಧ್ಯತೆಗಳು ಇದೆ ಎಂದು ಮಾಹಿತಿ ಲಭ್ಯವಾಗಿದೆ.

"ಪ್ರೀತಿ, ವಿಶ್ವಾಸಕ್ಕಿಂತ ಯಾವುದೇ ಶಕ್ತಿ ದೊಡ್ಡದಲ್ಲ"

ಇನ್ನು ತನ್ನ ಕ್ಷೇತ್ರದಲ್ಲಿ ಮಾಡಿದ ಭಾಷಣದಲ್ಲಿ ಮತ್ತೆ ಭಾವುಕರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ನಾನು ನನ್ನ ಕ್ಷೇತ್ರಕ್ಕೆ ಬಂದಾಗಲೆಲ್ಲಾ, ಜನರು ಎಷ್ಟು ಪ್ರೀತಿಯಿಂದ ರೊಟ್ಟಿ (ಜೋಳದ ರೊಟ್ಟಿ) ಮತ್ತು ನವಣೆ ಅನ್ನ ತಿನ್ನಿಸುತ್ತಿದ್ದರು," ಎಂದು ಸ್ಮರಿಸಿಕೊಂಡಿದ್ದಾರೆ. "ನನ್ನಲ್ಲಿ ಹೇಳಲು ದೊಡ್ಡ ವಿಷಯಗಳಿಲ್ಲ, ನಿಮ್ಮ ನಿರೀಕ್ಷೆಗೆ ತಕ್ಕಂತೆ ನಾನು ಬದುಕಲು ಸಾಧ್ಯವಾದರೆ, ನನಗೆ ಸಾಕು. ನಿಮ್ಮ ಪ್ರೀತಿ ಮತ್ತು ವಿಶ್ವಾಸಕ್ಕಿಂತ ಯಾವುದೇ ಶಕ್ತಿ ದೊಡ್ಡದಲ್ಲ ಎಂದು ನಾನು ನಂಬುತ್ತೇನೆ," ಎಂದು ಕೂಡಾ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

"ನಿಮ್ಮನ್ನು ನೋಡಿದಾಗ ನಾನು ಭಾವುಕನಾಗುತ್ತೇನೆ"

"ನಾನು ನಿಮ್ಮೊಂದಿಗೆ ಭಾವನಾತ್ಮಕವಾಗಿ ಮಾತನಾಡದಿರಲು ನನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತೇನೆ. ಆದರೆ ನಿಮ್ಮನ್ನು ನೋಡಿದ ಬಳಿಕ ನಾನು ಭಾವುಕನಾಗುತ್ತೇನೆ," ಎಂದು ತೀರಾ ಭಾವುಕರಾಗಿ ನುಡಿದ ಬಸವರಾಜ ಬೊಮ್ಮಾಯಿ, "ರಾಜ್ಯದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸುವ ಹಾಗೂ ಪ್ರತಿ ಸಮುದಾಯದ ಬೇಡಿಕೆ ಹಾಗೂ ಮನವಿಗಳಿಗೆ ಸ್ಪಂದಿಸುವ ಗುರುತರ ಜವಾಬ್ದಾರಿ ನನ್ನ ಹೆಗಲ ಮೇಲಿದೆ," ಎಂದಿದ್ದಾರೆ.

ಜುಲೈ 28 ರಂದು ಬಿಎಸ್ ಯಡಿಯೂರಪ್ಪ ತನ್ನ ಎರಡು ವರ್ಷಗಳ ಅಧಿಕಾರವನ್ನು ಪೂರ್ಣಗೊಳಿಸಿ ಆ ದಿನವೇ ರಾಜೀನಾಮೆ ನೀಡಿದ್ದಾರೆ. ಆ ಬಳಿಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ. ಆದರೆ ಈಗ ಬಸವರಾಜ ಬೊಮ್ಮಾಯಿ ಕೂಡಾ ರಾಜೀನಾಮೆ ನೀಡುವ ಊಹಾಪೋಹಗಳು ಹರಡಿದೆ. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+