ಕಸದ ಟ್ರಾಕ್ಟರ್ನಲ್ಲಿ ವರದಿಗಾರನ ಶವ ಸಾಗಿಸಿದವರಿಗೆ ನೊಟೀಸ್
ಹಾವೇರಿ, ಜನವರಿ 15: ಅಪಘಾತದಲ್ಲಿ ನಿಧನನಾದ ಶಿರಸಿ ಜಿಲ್ಲಾ ವರದಿಗಾರ ಮೌನೇಶ್ ಪೋತರಾಜ್ ಶವವನ್ನು ಕಸದ ಟ್ರಾಕ್ಟರ್ಗೆ ಹಾಕಿ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸರಿಗೆ ದೋಷಾರೋಪ ಪತ್ರ ನೀಡಲಾಗಿದೆ.
ಶಿರಸಿಯಲ್ಲಿ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ ಮೌನೇಶ್ ಪೋತರಾಜ್ ಶನಿವಾರ ರಾತ್ರಿ ತನ್ನ ಊರಾದ ಹಾವೇರಿಯ ಛಬ್ಬಿಗೆ ಹೊರಟಿದ್ದರು, ಆದರೆ ದುರಾದೃಷ್ಟವಶಾತ್ ಹಾನಗಲ್ ಬಳಿ ರಸ್ತೆ ಅಪಘಾತಕ್ಕೆ ಸಿಕ್ಕು ಮೃತಪಟ್ಟಿದ್ದರು.
ಆದರೆ ಅವರ ಶವವನ್ನು ಸ್ಥಳೀಯ ಪೊಲೀಸರು ಕಸ ತುಂಬುವ ಟ್ರಾಕ್ಟರಿಯಲ್ಲಿ ಹಾಕಿ, ಅಮಾನವೀಯ ನಡುವಳಿಕೆ ತೋರಿದ್ದು, ರಾಜ್ಯದ ಪತ್ರಕರ್ತರಿಂದ, ಸಾಮಾಜಿಕ ಜಾಲತಾಣದಲ್ಲಿ ತೀರ್ವ ಅಸಮಾಧಾನಕ್ಕೆ ಗುರಿಯಾಗಿತ್ತು.
ಪೊಲೀಸರ ಕ್ರಮಕ್ಕೆ ತೀರ್ವ ಆಕ್ಷೇಪ ವ್ಯಕ್ತವಾದಮೇಲೆ ಎಚ್ಚೆತ್ತುಕೊಂಡಿರುವ ಪೊಲೀಸರು ಮೌನೇಶ್ ಪೋತರಾಜ್ ಶವಕ್ಕೆ ಅಗೌರವ ತೋರಿದ ಹಾನಗಲ್ ಪಿ.ಎಸ್.ಐ.ಗುರುರಾಜ್ ಮೈಲಾರ ಹಾಗೂ ಘಟನೆ ಬಗ್ಗೆ ಸೂಕ್ತ ಮೇಲ್ವಿಚಾರಣೆ ಮಾಡುವಲ್ಲಿ ನಿರ್ಲಕ್ಷ ವಹಿಸಿದ ಸಿ.ಪಿ.ಐ.ರೇವಪ್ಪ ಎಚ್ .ಕಟ್ಟಿಮನಿ ಇಬ್ಬರಿಗೂ ಕೆ.ಎಸ್.ಡಿ.ಪಿ7 ಅಡಿಯಲ್ಲಿ ದೋಷರೊಪ ಪತ್ರವನ್ನ ಜಾರಿಮಾಡಿದ್ದಾರೆ.
ರಸ್ತೆ ಅಪಘಾತದಲ್ಲಿ ವರದಿಗಾರ ಮೌನೇಶ್ ಪೋತರಾಜ್ ನಿಧನ
ಪೊಲೀಸರ ನಿರ್ಲಕ್ಷದ ಬಗ್ಗೆ ಹಾವೇರಿ ಎಸ್.ಪಿ. ಕೆ.ಪರಶುರಾಮ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಘಟನೆಗೆ ಪೊಲೀಸ್ ಇಲಾಖೆ ವಿಷಾಧ ವ್ಯಕ್ತಪಡಿಸಿದೆ ಎಂದು ಹೇಳಿದ್ದಾರೆ.
ಬಡ ಕುಟುಂಬದ ವರದಿಗಾರ ಮೌನೇಶ್ ಪೋತರಾಜ್ ಅವರ ಕುಟುಂಬಕ್ಕೆ ನಟ ಪ್ರಕಾಶ್ ರೈ ಒಂದು ಲಕ್ಷ ರೂಪಾಯಿ ನೆರವು ನೀಡಿದ್ದಾರೆ.