Basavaraj Bommai: ಮಾಜಿ ಸಿಎಂಗೆ ಹಾವೇರಿ ಟಿಕೆಟ್, ಈಶ್ವರಪ್ಪಗೆ ಆಘಾತ
ಹಾವೇರಿ, ಮಾರ್ಚ್ 13: ಕರ್ನಾಟಕ ಲೋಕಸಭಾ ಚುನಾವಣೆಯ ಬಹುನಿರೀಕ್ಷೆಯ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗಿದೆ. ಇದರಲ್ಲಿ ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Haveri Basavaraj Bommai) ಅವರಿಗೆ ಟಿಕೆಟ್ ಘೋಷಣೆ ಆಗಿದೆ. ಇದು ಈ ಭಾಗದ ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದೆ.
ಹಾವೇರಿ ಜಿಲ್ಲೆಯಲ್ಲಿ ಬಿಜೆಪಿ ಟಿಕೆಟ್ಗೆ ಭಾರಿ ಪೈಪೋಟಿ ನಡೆದಿತ್ತು, ಕರ್ನಾಟಕ ನಾಯಕರ ಸಹಾಯದಿಂದ ದೆಹಲಿ ಮಟ್ಟದಲ್ಲಿ ಲಾಭಿ ನಡೆದಿತ್ತು. ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು ತಮ್ಮ ಪುತ್ರ ಕಾಂತೇಶ ಅವರಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದರು.

ಜಿಲ್ಲೆಯ ಮಾಜಿ ಸಚಿವ ಬಿಸಿ ಪಾಟೀಲ್ ಅವರು ಸೇರಿದಂತೆ ಹಲವರು ಬಿಜೆಪಿಯಿಂದ ಹಾವೇರಿಯ ಟಿಕೆಟ್ ಬಯಸಿದ್ದರು. ಆದರೆ ಅಂತಿಮವಾಗಿ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಮೂಲಕ ಜಗದೀಶ್ ಶೆಟ್ಟರ್ ಅವರಿಗೂ ಆಘಾತ ನೀಡಲಾಗಿದೆ. ಕಾರಣ ಅವರು ಹಾವೇರಿ ಇಲ್ಲವೇ ಧಾರವಾಡದಿಂದ ಟಿಕೆಟ್ ಬಯಸಿದ್ದರು. ಆದರೆ ಯಾವ ಕ್ಷೇತ್ರದಿಂದಲೂ ಅವರಿಗೆ ಈ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಆಗಿಲ್ಲ.
ಹಾವೇರಿ: ಬಿಜೆಪಿ-ಕಾಂಗ್ರೆಸ್ ಮಧ್ಯೆ ತೀವ್ರ ಪೈಪೋಟಿ
ಸದ್ಯ ಹಾವೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಆನಂದ್ ಗಡ್ಡದೇವರಮಠ ಅವರಿಗೆ ನೀಡಲಾಗಿದೆ. ಬಸವರಾಜ ಬೊಮ್ಮಾಯಿ ಅವರನ್ನು ಕಣ್ಣಕಿಳಿಸುವ ಮೂಲಕ ಬಿಜೆಪಿ ಭದ್ರಕೋಟೆಯಾದ ಹಾವೇರಿಯ ಹಿಡಿತ ಬಿಟ್ಟುಕೊಡದಿರಲು ನಿರ್ಧರಿಸಿದೆ.
ಅಲ್ಲದೇ ಹಾವೇರಿ ವ್ಯಾಪ್ತಿಯ ಆರು ಕ್ಷೇತ್ರಗಳಲ್ಲಿ ಕಳೆದ ವಿಧಾನಸಭಾ ಕ್ಷೇತ್ರಗಳಲ್ಲಿ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾಂವ್ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆಲುವು ಕಂಡಿತ್ತು. ಅಲ್ಲದೇ ಕಳೆದ ಮೂರು ಭಾರಿ ಬಿಜೆಪಿಯ ಶಿವಕುಮಾರ್ ಉದಾಸಿ ಅವರೇ ಹಾವೇರಿ ಗೆದ್ದು ಬೀಗಿದ್ದರು. ಹ್ಯಾಟ್ರಿಕ್ ಬಾರಿಸುವ ಮೂಲಕ ಹಾವೇರಿಯನ್ನು ಕಾಂಗ್ರೆಸ್ಗೆ ಕಬ್ಬಿಣ ಕಡಲೆಯಂತೆ ಮಾಡಿದ್ದರು.
ಆದರೆ ಈ ಬಾರಿ ಶಿವಕುಮಾರ್ ಉದಾಸಿ ಅವರು ಲೋಕಸಭಾ ಚುಣಾವಣೆಯಲ್ಲಿ ಪಾಲ್ಗೊಳ್ಳದೇ ಇರಲು ನಿರ್ಧರಿಸಿದ್ದರು. ಈ ಬಗ್ಗೆ ಅವರು ಪಕ್ಷದ ನಾಯಕರಿಗೂ ತಿಳಿಸಿದ್ದರು. ಇದೆಲ್ಲ ಬೆಳವಣಿಗೆ ನೋಡಿಕೊಂಡು ಬಿಜೆಪಿಯು ಹಾವೇರಿ ಭಾಗದಲ್ಲಿ ವರ್ಚಸ್ಸು ಇರುವ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಿದೆ.












Click it and Unblock the Notifications