ಹಾಸನ : ನಿರ್ಮಾಣ ಹಂತದ ರೈಲ್ವೆ ಫ್ಲೈ ಓವರ್ ಕುಸಿತ
ಹಾಸನ, ಮಾರ್ಚ್ 12 : ಹಾಸನ ನಗರದ ಹೊಸ ಬಸ್ ನಿಲ್ದಾಣದ ಮುಂಭಾಗದಲ್ಲಿ ನಡೆಯುತ್ತಿದ್ದ ರೈಲ್ವೆ ಫ್ಲೈ ಓವರ್ ಕಾಮಗಾರಿಗೆ ವಿಘ್ನ ಎದುರಾಗಿದೆ. ಕಾಮಗಾರಿಗೆ ಬಳಕೆ ಮಾಡಿದ್ದ ಸಿಮೆಂಟ್ ಕಂಬಗಳು ಕುಸಿದು ಬಿದ್ದಿದ್ದು, ಕಳಪೆ ಕಾಮಗಾರಿ ಎಂಬ ಆರೋಪ ಕೇಳಿ ಬಂದಿದೆ.
ಗುರುವಾರ ಕಾಮಗಾರಿಗೆ ಜೋಡಣೆ ಮಾಡಿದ್ದ ನಾಲ್ಕು ಭಾರಿ ಗಾತ್ರದ ಸಿಮೆಂಟ್ ಕಂಬಗಳು ಕುಸಿದು ಬಿದ್ದಿವೆ. ಘಟನೆಯಲ್ಲಿ ಯಾವುದೇ ಸಾವು, ನೋವು ಸಂಭವಿಸಿಲ್ಲ. ಸುಮಾರು 1 ವರ್ಷದಿಂದ ಫ್ಲೈ ಓವರ್ ಕಾಮಗಾರಿ ನಡೆಯುತ್ತಿತ್ತು.
ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಫ್ಲೈ ಓವರ್ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಈ ಯೋಜನೆಯ ವೆಚ್ಚ ಸುಮಾರು 42 ಕೋಟಿ ರೂ.ಗಳು. ಸಿಮೆಂಟ್ ಕಂಬ ಕುಸಿದು ಬೀಳುತ್ತಿದ್ದಂತೆ ಜನರು ಆಕ್ರೋಶ ವ್ಯಕ್ತಪಡಿಸಿದರು. ಕಳಪೆ ಕಾಮಗಾರಿಯೇ ಕಾರಣ ಎಂದು ಆರೋಪಿಸಿದರು.
ಹಾಸನ ಜಿಲ್ಲೆಯ ಜನರು ರೈಲ್ವೆ ಫ್ಲೈ ಓವರ್ ಬೇಕು ಎಂದು ಎರಡು ದಶಕಗಳಿಂದ ಬೇಡಿಕೆ ಇಟ್ಟಿದ್ದರು. ಕಳೆದ ವರ್ಷ ಕಾಮಗಾರಿಯನ್ನು ಆರಂಭಿಸಲಾಗಿತ್ತು. ನಿರ್ಮಾಣ ಹಂತದಲ್ಲಿರುವಾಗಲೇ ಫ್ಲೈ ಓವರ್ ಕುಸಿದು ಬಿದ್ದಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.

ರೇವಣ್ಣ ಕಾರ್ಯ ಚುರುಕುಗೊಳಿಸಿದ್ದರು
ಮೈತ್ರಿ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದಾಗ ಎಚ್. ಡಿ. ರೇವಣ್ಣ ಹಾಸನ ನಗರದ ಎನ್. ಆರ್. ವೃತ್ತದಿಂದ ನೂತನ ಬಸ್ ನಿಲ್ದಾಣದ ವರೆಗಿನ ರೈಲ್ವೆ ಫ್ಲೈ ಓವರ್ ನಿರ್ಮಿಸಲು ಯೋಜನೆಯನ್ನು ಚುರುಕುಗೊಳಿಸಿದ್ದರು. ಸ್ಥಳ ಪರಿಶೀಲನೆ ನಡೆಸಿ, ರೈಲ್ವೆ ಇಲಾಖೆಗೆ ಒಪ್ಪಿಗೆಗಾಗಿ ಕಳಿಸಿದ್ದರು.

ಎರಡು ದಶಕಗಳ ಬೇಡಿಕೆ
ಹಾಸನ, ಹೊಳೆ ನರಸಿಪುರ, ಹಂಗರಹಳ್ಳಿ , ಚನ್ನರಾಯಪಟ್ಟಣ ಮಾರ್ಗಗಳ ರೈಲ್ವೆ ಮೇಲು ಸೇತುವೆ ನಿರ್ಮಾಣಕ್ಕೆ ಎರಡು ದಶಕಗಳ ಹಿಂದೆಯೇ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕಳೆದ ವರ್ಷ ಟೆಂಡರ್ ಪ್ರಕ್ರಿಯೆ ಎಲ್ಲಾ ಮುಗಿದು ಕಾಮಗಾರಿ ಆರಂಭವಾಗಿತ್ತು.

20 ತಿಂಗಳ ಗುಡುವು
ರೈಲ್ವೆ ಫ್ಲೈ ಓವರ್ ಕಾಮಗಾರಿಯನ್ನು 20 ತಿಂಗಳಿನಲ್ಲಿ ಮುಗಿಸಲು ಗಡುವು ನೀಡಲಾಗಿತ್ತು. ಕಾಮಗಾರಿ ಪೂರ್ಣಗೊಂಡ ಬಳಿಕ ಬಸ್ ನಿಲ್ದಾಣದಿಂದ ಜಿಲ್ಲಾ ಆಸ್ಪತ್ರೆಗೆ ಮೇಲು ಸೇತುವೆ ಹಾಗೂ ರಸ್ತೆ ನಿರ್ಮಾಣ ಮಾಡಿ ರೋಗಿಗಳು ಉಚಿತವಾಗಿ ಸಂಚಾರ ನಡೆಸಲು ವಿದ್ಯುತ್ ಚಾಲಿತ ವಾಹನ ವ್ಯವಸ್ಥೆ ಮಾಡುವ ಪ್ರಸ್ತಾವನೆಯೂ ಇತ್ತು.

ತನಿಖೆಗೆ ಜನರ ಒತ್ತಾಯ
ನಿರ್ಮಾಣ ಹಂತದ ಕಾಮಗಾರಿ ನಡೆಯುತ್ತಿರುವಾಗಲೇ ರೈಲ್ವೆ ಫ್ಲೈ ಓವರ್ ಕುಸಿದು ಬಿದ್ದಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಳಪೆ ಕಾಮಗಾರಿ ಕಾರಣ, ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications