ಹಾಸನ: ಕೊರೊನಾ ಎಫೆಕ್ಟ್ನಿಂದಾಗಿ ಪ್ರವಾಸಿಗರ ಸಂಖ್ಯೆ ಇಳಿಮುಖ; ಪ್ರವಾಸಿ ಗೈಡ್ಗಳ ಪರದಾಟ
ಹಾಸನ, ಫೆಬ್ರವರಿ 3: ಹಾಸನ ಹೇಳಿಕೇಳಿ ಇತಿಹಾಸ ಪ್ರಸಿದ್ಧ ಊರು, ಶ್ರವಣಬೆಳಗೊಳ, ಬೇಲೂರು, ಹಲ್ಮಿಡಿ, ಹಳೇಬೀಡು ಸೇರಿದಂತೆ ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳಿರುವ ಜಿಲ್ಲೆ. ಇಲ್ಲಿಗೆ ದೇಶ- ವಿದೇಶ, ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಪ್ರತಿನಿತ್ಯ ಸಾವಿರಾರು ಜನರು ಚನ್ನಕೇಶವ, ಗೊಮ್ಮಟೇಶ್ವರ ಹಾಗೂ ಹೊಯ್ಸಳೇಶ್ವರ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ಪ್ರವಾಸಿಗರಿಗೆ ದೇವಾಲಯಗಳ ಹಾಗೂ ಪ್ರವಾಸಿ ತಾಣಗಳ ಇತಿಹಾಸದ ಬಗ್ಗೆ ಮಾಹಿತಿ ತಿಳಿಸಲು ನೂರಾರು ಗೈಡ್ಗಳು ಜಿಲ್ಲೆಯಲ್ಲಿ ಪ್ರತಿನಿತ್ಯ ಕೆಲಸ ಮಾಡುತ್ತಾರೆ. ಆದರೆ ಕೊರೊನಾದಿಂದ ಪ್ರವಾಸಿಗರು ಕಡಿಮೆ ಬರುತ್ತಿದ್ದು, ಮಾರ್ಗದರ್ಶಿಗಳು ಆರ್ಥಿಕವಾಗಿ ತುಂಬಾ ತೊಂದರೆಯಲ್ಲಿದ್ದಾರೆ. ಅಲ್ಲದೆ ತಮಗೆ ದಿನನಿತ್ಯ ಜೀವನ ನಡೆಸಲು ಸಾಕಷ್ಟು ಕಷ್ಟವಾಗುತ್ತಿದೆ ಎಂದು ಪ್ರವಾಸಿ ಗೈಡ್ಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.
ಪ್ರವಾಸಿ ಮಾರ್ಗದರ್ಶಿಗಳು, ಪ್ರವಾಸಿಗರು ನೀಡುವ ಅಷ್ಟೋ ಇಷ್ಟೋ ಹಣದಿಂದಲೇ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣ ದೇವಾಲಯಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಸಂಪೂರ್ಣ ಇಳಿಮುಖವಾಗಿದೆ. ಇದರಿಂದಾಗಿ ಮಾರ್ಗದರ್ಶಿಗಳಿಗೆ ದಿನದ ಸಂಪಾದನೆ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮೊದಲ ಲಾಕ್ಡೌನ್ ವೇಳೆ ಸರ್ಕಾರ ಐದು ಸಾವಿರ ಪರಿಹಾರ ನೀಡಿದ್ದನ್ನು ಬಿಟ್ಟರೆ ಇದುವರೆಗೂ ಇವರ ಕಷ್ಟವನ್ನು ಯಾರೂ ಕೇಳಿಲ್ಲ. ಈ ಹಿಂದೆ ಪ್ರತಿನಿತ್ಯ ಮೂವತ್ತು ಮಂದಿ ಗೈಡ್ ಕೆಲಸ ಮಾಡುತ್ತಿದ್ದರು. ಆದರೆ ಕೊರೊನಾದಿಂದ ಪ್ರವಾಸಿಗರ ಕೊರತೆ ಎದುರಾಗಿದ್ದು, ಹದಿನೈದು ಮಂದಿಯಂತೆ ಎರಡು ಬ್ಯಾಚ್ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದು ದಿನ ಒಂದು ತಂಡ ಕೆಲಸ ಮಾಡಿದರೆ ಮರು ದಿನ ಇನ್ನೊಂದು ಬ್ಯಾಚ್ ಕೆಲಸ ಮಾಡುತ್ತಿದೆ. ಒಬ್ಬರಿಗೆ ಆದಾಯ ಬಂದರೂ ಎಲ್ಲರೂ ಆ ಹಣವನ್ನು ಹಂಚಿಕೊಳ್ಳುತ್ತಿದ್ದಾರೆ. ಮಕ್ಕಳ ಶಾಲೆ ಫೀಸ್ ಕಟ್ಟಲು ಹಣವಿಲ್ಲದೆ ಪರದಾಡುವಂತಾಗಿದೆ ಎಂದು ಕಣ್ಣೀರುಡುತ್ತಿದ್ದಾರೆ.

ರಾಜ್ಯದಲ್ಲಿ ಸುಮಾರು 600 ಮಂದಿ ಗೈಡ್ಗಳಿದ್ದು, ಅವರ ಜೀವನ ನಿರ್ವಹಣೆ ಹೇಳತೀರದಾಗಿದೆ. ಈಗಾಗಲೇ ಸರ್ಕಾರಕ್ಕೆ, ಸಂಬಂಧಪಟ್ಟ ಪ್ರವಾಸೋದ್ಯಮ ಸಚಿವರಿಗೆ ಹತ್ತಾರು ಭಾರಿ ಮನವಿ ಸಲ್ಲಿಸಲಾಗಿದೆ. ಆದರೂ ಯಾರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ತಮ್ಮ ಕಷ್ಟವನ್ನು ತೋಡಿಕೊಳ್ಳುತ್ತಿದ್ದಾರೆ.
ಕುಟುಂಬ ನಿರ್ವಹಣೆಗೆ ಕೈಸಾಲ, ಬ್ಯಾಂಕ್ ಸಾಲ ಮಾಡಿದ್ದು, ಸಾಲ ಮರುಪಾವತಿಸುವಂತೆ ಒತ್ತಾಯಿಸುತ್ತಿದ್ದಾರೆ. ಈಗ ಕೊರೊನಾ ನಿಯಂತ್ರಣಕ್ಕೆ ಬಂದಿದ್ದು, ಪ್ರವಾಸಿಗರಿಗಾಗಿ ಕಣ್ಕಣ್ಣು ಬಿಟ್ಟು ಕಾಯುವಂತಾಗಿದೆ. ಇದು ಹೀಗೆಯೇ ಮುಂದುವರಿದರೆ ಕೆಲವೇ ದಿನಗಳಲ್ಲಿ ಗೈಡ್ಗಳೇ ಇಲ್ಲದಂತಾಗುತ್ತಾರೆ. ಇನ್ನಾದರೂ ಸರ್ಕಾರ ಹಾಗೂ ಪ್ರವಾಸೋದ್ಯಮ ಸಚಿವರು ಇತ್ತ ಗಮನಹರಿಸಿ ಗೈಡ್ಗಳ ಹಿತಕಾಯಬೇಕಿದೆ.

ಹಾಸನದ ಪ್ರವಾಸಿ ಗೈಡ್ ಒಬ್ಬರು ಒನ್ಇಂಡಿಯಾ ಕನ್ನಡ ಜೊತೆ ಮಾತನಾಡಿ, ಬಹಳ ದಿನಗಳಿಂದ ಇದೇ ಸಮಸ್ಯೆ ಎದುರಿಸುತ್ತಿದ್ದೇವೆ. ಒಂದು ಹೊತ್ತಿನ ಊಟಕ್ಕೂ ಹಣವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದೇವೆ. ಕೊರೊನಾ, ಲಾಕ್ಡೌನ್ಮ ವಾರಾಂತ್ಯ ಕರ್ಫ್ಯೂ ಹೀಗೆ ಹಲವು ಸಂದರ್ಭಗಳಲ್ಲಿ ನಮ್ಮ ಜೀವನ ಅಧೋಗತಿಗೆ ಹೋಗಿದೆ. ಈ ಕೊರೊನಾದಿಂದಾಗಿ ಸದ್ಯ ಐತಿಹಾಸಿಕ ತಾಣಗಳಿಗೆ ಜನರು ಬರುವುದು ಕಡಿಮೆ ಆಗಿದೆ. ಎಲ್ಲಾ ಗೈಡ್ಗಳ ಪರಿಸ್ಥಿತಿ ಇದೆ ಆಗಿದ್ದು, ಸರ್ಕಾರಗಳು ಕೂಡ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ದಿನನಿತ್ಯದ ಜೀವನ ನಡೆಸುವುದೂ ತುಂಬಾ ಕಷ್ಟವಾಗುತ್ತಿದೆ ಎಂದು ಹೇಳಿದರು.












Click it and Unblock the Notifications