ಶಿರಾಡಿ ಘಾಟ್ ಬಂದ್ ಮಾಡಲ್ಲ: ಸಚಿವ ಸಿ. ಸಿ. ಪಾಟೀಲ್
ಹಾಸನ, ಜುಲೈ 11: ಬೆಂಗಳೂರು ಮತ್ತು ಮಂಗಳೂರು ನಡುವಿನ ಪ್ರಮುಖ ಸಂಪರ್ಕ ಮಾರ್ಗವಾಗಿರುವ ಶಿರಾಡಿಘಾಟ್ ದುರಸ್ತಿಯ ನಿಮಿತ್ತವಾಗಿ ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ವಾಹನ ಸಂಚಾರ ನಿಷೇಧ ಮಾಡುವುದಿಲ್ಲ. ಆದರೆ ರಸ್ತೆ ದುರಸ್ತಿ ಕಾಮಗಾರಿ ಮುಂದುವರಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರು ಮತ್ತು ಶಿರಾಡಿ ಘಾಟ್ ನಡುವಿನ ಹೆದ್ದಾರಿ ಇತರ ಸೇತುವೆಗಳ ಕಾಮಗಾರಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಸಕಲೇಶಪುರ ಹಾಗೂ ಶಿರಾಡಿ ಘಾಟ್ನನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಶಿರಾಡಿಘಾಟ್ ಮೂಲಕ ಪ್ರತಿನಿತ್ಯ ಸರಾಸರಿ 30 ಸಾವಿರ ವಾಹನಗಳು ಸಂಚರಿಸುತ್ತವೆ.
ಒಂದು ವೇಳೆ ರಸ್ತೆ ಬಂದ್ ಮಾಡಿದರೆ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗುತ್ತದೆ. ಆದ್ದರಿಂದ ಒಂದು ಭಾಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟು, ಮತ್ತೊಂದು ಭಾಗದಲ್ಲಿ ದುರಸ್ತಿ ಕಾಮಗಾರಿಗಳಿಗೆ ಅವಕಾಶ ಮಾಡಿಕೊಡಲಾಗುವುದು, ತೀರಾ ಅನಿವಾರ್ಯವಾದರೆ ಮಾತ್ರ ಏಕಮುಖ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ಪರಿಶೀಲಿಸಲಾಗುವುದು. ಸದ್ಯಕ್ಕಂತೂ ಶಿರಾಡಿ ಘಾಟ್ನಲ್ಲಿ ವಾಹನ ಸಂಚಾರಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ" ಎಂದು ಸ್ಪಷ್ಟಪಡಿಸಿದರು.

"ಮಳೆ ಮತ್ತಿತರ ನೈಸರ್ಗಿಕ ಪ್ರಕೋಪಗಳಿಂದ ರಸ್ತೆಗಳು ಅಥವಾ ಸೇತುವೆಗಳು ಹಾನಿಗೊಳಗಾದರೆ ದುರಸ್ತಿ ಕಾಮಗಾರಿ ನಡೆಸುವುದಕ್ಕೆ ಯಾವುದೇ ಹಣಕಾಸು ತೊಂದರೆ ಇಲ್ಲ. ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಲಾಗುವುದು" ಎಂದು ಸಿ. ಸಿ. ಪಾಟೀಲ್ ತಿಳಿಸಿದರು.

ಈ ವೇಳೆ ಶಾಸಕ ಕುಮಾರಸ್ವಾಮಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಡಾ. ಕೃಷ್ಣ ರೆಡ್ಡಿ, ಮತ್ತಿತರ ಅಧಿಕಾರಿಗಳು ಜೊತೆಗಿದ್ದರು. ಶಿರಾಡಿ ರಸ್ತೆ ಕಾಮಗಾರಿ ನಡೆಸುವ ಸಲುವಾರಿ ಸುಮಾರು ನಾಲ್ಕು ತಿಂಗಳುಗಳ ಕಾಲ ಬಂದ್ ಮಾಡುವ ವಿಚಾರವಾಗಿ ಮತ್ತೆ ಚರ್ಚೆ ಶುರುವಾಗಿತ್ತು. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೋಣಿಗಾಲ್ನಿಂದ ಮಾರನಹಳ್ಳಿವರೆಗೆ ಸುಮಾರು 14 ಕಿಲೋಮೀಟರ್ ದೂರ ಶಿರಾಡಿ ಹೆದ್ದಾರಿ ಬಂದ್ ಮಾಡಿ, ಕಾಮಗಾರಿ ನಡೆಸಲು ಗುತ್ತಿಗೆದಾರರು ಮನವಿ ಮಾಡಿದ್ದಾರೆ ಎನ್ನಲಾಗಿತ್ತು.












Click it and Unblock the Notifications