ಬಿಜೆಪಿ ನಾಯಕಿ ಸುಶೀಲಾ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಗಣ್ಯರು
ಹಾಸನ, ನವೆಂಬರ್, 08: ಸುಶೀಲಕ್ಕಾ ಎಂದೇ ಚಿರ ಪರಿಚಿತರಾಗಿದ್ದ ಬಿಜೆಪಿ ಹಿರಿಯ ನಾಯಕ ಬಿ.ಬಿ.ಶಿವಪ್ಪ ಅವರ ಧರ್ಮಪತ್ನಿ ಸುಶೀಲಾ ಶಿವಪ್ಪ (90) ಅವರು ಸೋಮವಾರ ಬೆಳಗ್ಗೆ ತಾಲೂಕಿನ ಕುಂಬ್ರಹಳ್ಳಿಯಲ್ಲಿರುವ ನಿವಾಸದಲ್ಲಿ ಕೊನೆಯುಸಿರೆಳೆದಿದ್ದರು. ಇಂದು ಕುಂಬ್ರಹಳ್ಳಿಯಲ್ಲಿಯೇ ಸುಶೀಲಮ್ಮ ಅವರ ಅಂತ್ಯಕ್ರಿಯೆ ನೆರವೇರಲಿದೆ. ಕುಂಬ್ರಹಳ್ಳಿಗೆ ಗಣ್ಯರು ಆಗಮಿಸಿ ಸುಶೀಲಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕುಂಬ್ರಹಳ್ಳಿ ಗ್ರಾಮಕ್ಕೆ ಆಗಮಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಹಾಸನ ಶಾಸಕ ಪ್ರೀತಂ ಗೌಡ ಸುಶೀಲಮ್ಮ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಅನಾರೋಗ್ಯದಿಂದ ಬಳಲುತ್ತಿದ್ದ ಸುಶೀಲಾ
ಕಳೆದ ಹಲವು ತಿಂಗಳಿನಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಸುಶೀಲಾ ಶಿವಪ್ಪ, ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಮಾಜಿ ಸಿಎಂ ಬಿ.ಎಸ್.ಯಡಿಯುರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಹಲವು ಬಿಜೆಪಿ ನಾಯಕರು ಮನೆಗೆ ಭೇಟಿ ನೀಡಿ ಸುಶೀಲಾ ಶಿವಪ್ಪ ಅವರ ಆರೋಗ್ಯವನ್ನು ವಿಚಾರಿಸಿದ್ದರು. ಸುಶೀಲಕ್ಕ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದರು. ರಾಜ್ಯ ಮಹಿಳಾ ಘಟಕದಲ್ಲೂ ತಮ್ಮದೇ ಛಾಪು ಮೂಡಿಸಿದ್ದ ಸುಶೀಲಮ್ಮ, ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಪತಿ ಬಿ.ಬಿ.ಶಿವಪ್ಪ ಅವರ ಜೊತೆ ಜಿಲ್ಲೆ ಮಾತ್ರವಲ್ಲದೆ ರಾಜ್ಯದಲ್ಲೂ ಸಂಚರಿಸಿ ಕಮಲ ಪಕ್ಷ ಸಂಘಟನೆಗೆ ಕೈ ಜೋಡಿಸಿ ತಮ್ಮದೇ ಸೇವೆಯನ್ನು ಸಲ್ಲಿಸಿದ್ದರು.
ಸದಾ ನಗುಮೊಗದ ಸುಶೀಲಮ್ಮ ಅವರು, ಅಪಾರ ಜನರ ಪ್ರೀತಿ ವಿಶ್ವಾಸ ಸಂಪಾದನೆ ಮಾಡಿದ್ದರು. ಇನ್ನು ಸುಶಿಲಮ್ಮ ಅವರ ಅಂತ್ಯಕ್ರಿಯೆ ಮಂಗಳವಾರ (ನವೆಂಬರ್ 08)ರಂದು ಅವರ ಸ್ವಗ್ರಾಮದಲ್ಲಿ ನೆರವೇರಲಿದೆ. ಈ ಸಂದರ್ಭದಲ್ಲಿ ಪಕ್ಷದ ಹಲವು ಮುಖಂಡರು ಭಾಗಿಯಾಗುವ ಸಾಧ್ಯತೆ ಇದೆ. ಈಗಾಗಲೇ ಸುಶೀಲಮ್ಮ ಅವರ ನಿಧನಕ್ಕೆ ಜಿಲ್ಲೆ ಹಾಗೂ ರಾಜ್ಯದ ಹಲವು ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.
ಸೋತರೂ ಕುಗ್ಗದ ಸುಶೀಲಾ ಶಿವಪ್ಪ
1998ರ ಹಾಸನ ಲೋಕಸಭೆ ಚುನಾವಣೆಯಲ್ಲಿ ಘಟನಾಘಟಿ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಚಿವ ಹೆಚ್.ಸಿ.ಶ್ರೀಕಂಠಯ್ಯ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸುಶೀಲಾ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದರು. ಹಾಗೂ ಇವರು ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಮೊದಲ ಮಹಿಳಾ ಅಭ್ಯರ್ಥಿ ಆಗಿದ್ದರು. ಇವರ ಪತಿ ಬಿ.ಬಿ.ಶಿವಪ್ಪ ಅವರು 1980, 1991 ಸೇರಿದಂತೆ ಮೂರು ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದರೂ, ಒಂದೂವರೆ ಲಕ್ಷಕ್ಕಿಂತ ಅಧಿಕ ಮತ ಪಡೆದಿರಲಿಲ್ಲ ಎನ್ನುವ ಮಾಹಿತಿಯೂ ಇದೆ.
ಶಾಲಾ ವಿದ್ಯಾರ್ಥಿಗಳಿದ್ದ ಬಸ್ ಅಪಘಾತ
ಬೇಲೂರು ತಾಲೂಕಿನ ಬಳ್ಳೂರು-ಕೋನೆರಲು ಬಳಿ ಶಾಲಾ ವಿದ್ಯಾರ್ಥಿಗಳಿದ್ದ ಬಸ್ ಅಪಘಾತವಾಗಿದೆ. ಭಾನುವಾರ ತಡರಾತ್ರಿ 2:45ರ ಸುಮಾರಿಗೆ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಚಾಲಕ, ನಿರ್ವಾಹಕ, ಶಾಲೆಯ ಪ್ರಾಂಶುಪಾಲರು, ಆರು ವಿದ್ಯಾರ್ಥಿಗಳು ಸೇರಿದಂತೆ ಹತ್ತು ಜನರು ಗಂಭೀರ ಗಾಯಗೊಂಡಿದ್ದರು.
ಮೈಸೂರು ಮಾನಸ ಗಂಗೋತ್ರಿ ಪ್ರೌಢಶಾಲಾ ವಿದ್ಯಾರ್ಥಿಗಳು ಹೊರನಾಡಿಗೆ ಪ್ರವಾಸ ಹೊರಟಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಬಸ್ನಲ್ಲಿ ವಿದ್ಯಾರ್ಥಿಗಳು ಸೇರಿ ಒಟ್ಟು 40 ಜನರು ಇದ್ದರು ಎನ್ನುವ ಮಾಹಿತ ಲಭ್ಯವಾಗಿದೆ. ಗಾಯಾಳುಗಳಿಗೆ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಉಳಿದ ವಿದ್ಯಾರ್ಥಿಗಳಿಗೆ ಲಾಡ್ಜ್ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನಡೆಸಿದ್ದಾರೆ. ಇನ್ನು ಬೇಲೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಚಿಕೊಪ್ಪ ಬಳಿ ಭೀಕರ ರಸ್ತೆ ಅಪಘಾತ
ಭೀಕರ ರಸ್ತೆ ಅಪಘಾತದಲ್ಲಿ ನಾಲ್ಕು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಸಮೀಪದ ಮಂಚಿಕೊಪ್ಪ ಬಳಿ ನಡೆದಿದೆ. ಹಲುಗಿನಕೊಪ್ಪ ನಿವಾಸಿಗಳಾದ ಜ್ಯೋತಿ (30), ಗಂಗಮ್ಮ (50) ಮತ್ತು ಸೌಜನ್ಯ (4) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ನಿನ್ನೆ (ನವೆಂಬರ್6)ರ ರಾತ್ರಿ ಹಲುಗಿನಕೊಪ್ಪ ನಿವಾಸಿ ಮಲ್ಲಿಕಾರ್ಜುನ್ ಎನ್ನುವವರು ಮಗಳು ಸೌಜನ್ಯ, ಪತ್ನಿ ಜ್ಯೋತಿ, ಅವರ ತಾಯಿ ಗಂಗಮ್ಮ ಅವರೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದರು. ಮಲ್ಲಿಕಾರ್ಜುನ್ ಹಾಗೂ ಕುಟುಂಬಸ್ಥರು ಶಿರಾಳಕೊಪ್ಪದಿಂದ ಹಲುಗಿನಕೊಪ್ಪದಲ್ಲಿರುವ ಮನೆಗೆ ತೆರಳುತ್ತಿದ್ದರು.
ಈ ವೇಳೆ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಸಮೀಪದ ಮಂಚಿಕೊಪ್ಪ ಬಳಿ ಬರುತ್ತಿದ್ದಂತೆ, ಹಿರೆಕೆರೂರು ಕಡೆಯಿಂದ ಶಿರಾಳಕೊಪ್ಪ ಕಡೆಗೆ ತೆರಳುತ್ತಿದ್ದ ಕಾರು ಏಕಾಏಕಿ ಬೈಕ್ಗೆ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ನಾಲ್ಕು ವರ್ಷದ ಸೌಜನ್ಯ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇನ್ನು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಲ್ಲಿಕಾರ್ಜುನ, ಜ್ಯೋತಿ ಹಾಗೂ ಗಂಗಮ್ಮ ಅವರನ್ನು ಕೂಡಲೇ ಶಿಕಾರಿಪುರದ ಆಸ್ಪತ್ರೆಗೆ ರವಾನಿಸಲಾಗಿತ್ತು. ದುರಾದೃಷ್ಟವಶಾತ್ ಜ್ಯೋತಿ ಶಿಕಾರಿಪುರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.