ಹಾಸನ; ಜೆಡಿಎಸ್ ಮುಖಂಡನ ಕೊಲೆ, ಇಬ್ಬರ ಬಂಧನ
ಹಾಸನ, ಜೂನ್ 02; ಜೆಡಿಎಸ್ ಮುಖಂಡ, ಹಾಸನ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ ಕೊಲೆ ಪ್ರಕರಣದ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬುಧವಾರ ಸಂಜೆ ಕೊಲೆಯಾದ ಪ್ರಶಾಂತ್ ನಾಗರಾಜ ಅಂತ್ಯಕ್ರಿಯೆ ಗುರುವಾರ ರಾತ್ರಿ ನಡೆಯಿತು.
ಹಾಸನ ನಗರಸಭೆಯ ಹಾಲಿ ಸದಸ್ಯ ಪ್ರಶಾಂತ್ ನಾಗರಾಜ ಬುಧವಾರ ಕೆಲಸ ಮುಗಿಸಿಕೊಂಡು ತನ್ನ ಮನೆಯತ್ತ ಹೊರಟಿದ್ದರು. ಈ ವೇಳೆ ಲಕ್ಷ್ಮಿಪುರ ಬಡಾವಣೆ ಜವನಹಳ್ಳಿ ಮಠದ 3ನೇ ಕ್ರಾಸ್ ಬಳಿ ಆಟೋದಲ್ಲಿ ಬಂದ ಪೂರ್ಣ ಚಂದ್ರ, ಅರುಣ್ ಹಾಗೂ ಸಹಚರರು ಪ್ರಶಾಂತ್ ಚಾಲನೆ ಮಾಡುತ್ತಿದ್ದ ದ್ವಿಚಕ್ರವಾಹನವನ್ನು ಅಡ್ಡಗಟ್ಟಿದ್ದರು.
ತಾವು ತಂದಿದ್ದ ಮಾರಕಾಸ್ತ್ರಗಳಿಂದ ಮನಸೋಇಚ್ಛೆ ಹಲ್ಲೆ ಮಾಡಿದ್ದರು. ಪ್ರಶಾಂತ್ ನಾಗರಾಜ ಹತ್ಯೆ ಹಾಸನದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಪ್ರಕರಣದ ಬಳಿಕ ಜೆಡಿಎಸ್ ನಾಯಕ ಎಚ್. ಡಿ. ರೇವಣ್ಣ ಹಾಗೂ ಕಾರ್ಯಕರ್ತರುಗಳು, ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಅಲ್ಲಿಯತನಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸದಂತೆ ಪಟ್ಟುಹಿಡಿದಿದ್ದರು. ಗುರುವಾರ ಬೆಳಗ್ಗೆ ಕೂಡ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮೃತರ ಕುಟುಂಬಕ್ಕೆ ಸಾಂತ್ವನ ಹೇಳುವ ಮೂಲಕ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಅಂತ ಆಗ್ರಹ ಮಾಡಿದ್ದರು.
ಕೊಲೆ ಆರೋಪಿಗಳ ಪತ್ತೆಗೆ ಬುಧವಾರ ರಾತ್ರಿಯೇ ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು. 24 ಗಂಟೆಯೊಳಗೆ ಇಬ್ಬರು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಏನಿದು ಪ್ರಕರಣ?; ಆರೋಪಿ ಪೂರ್ಣಚಂದ್ರ ಕೆರೆಯಲ್ಲಿ ಮೀನು ಹಿಡಿಯುವ ಕೆಲಸ ಮಾಡುತ್ತಿದ್ದ. ಕೊಲೆ ಪ್ರಕರಣದ ಮತ್ತೊಬ್ಬ ಆರೋಪಿಯ ಪತ್ನಿಗೂ ಕೊಲೆಯಾದ ನಗರಸಭಾ ಸದಸ್ಯ ಪ್ರಶಾಂತ್ ನಾಗರಾಜಗೂ ಸಂಬಂಧ ಇತ್ತು ಎನ್ನುವ ಆರೋಪವಿದೆ.
ಇತ್ತೀಚಿಗೆ ಆರೋಪಿಯ ಪತ್ನಿ ಹೆಸರಲ್ಲಿದ್ದ ಸೈಟ್ ಮಾರಾಟ ಮಾಡಿಸಿದ್ದು, ಈ ವಿಚಾರವಾಗಿ ಪೂರ್ಣಚಂದ್ರ ಮತ್ತು ಪ್ರಶಾಂತ್ ನಡುವೆ ವೈಮನಸ್ಸು ಏರ್ಪಟ್ಟಿತ್ತು. ಇದಾದ ಬಳಿಕ ಕೆಲವರುಗಳ ಸಮ್ಮುಖದಲ್ಲಿ, ರಾಜಿ ಪಂಚಾಯಿತಿ ನಡೆದು ತೀರ್ಮಾನ ಮಾಡಿದ ಮಾಡಿದ್ದರು ಎನ್ನುವ ಸುದ್ದಿ ಇದೆ.
ಪಂಚಾಯಿತಿಯ ತೀರ್ಮಾನಕ್ಕೆ ಬದ್ಧವಾಗದ ಪ್ರಮುಖ ಆರೋಪಿ ಪೂರ್ಣಚಂದ್ರ ಸೇಡುತೀರಿಸಿಕೊಳ್ಳಲು ಆತನನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ. ವಾರಗಟ್ಟಲೇ ಆತನ ಚಲನವಲನಗಳನ್ನು ವೀಕ್ಷಣೆ ಮಾಡಿ ಬುಧವಾರ ಪ್ರಶಾಂತ್ ಒಂಟಿಯಾಗಿ ಮನೆಕಡೆಗೆ ಹೋಗುವಾಗ ಜವನಹಳ್ಳಿ ಮಠದ ರಸ್ತೆಯಲ್ಲಿ ಯಾರು ಇಲ್ಲದ ವೇಳೆ ಬೈಕ್ ಅಡ್ಡಗಟ್ಟಿ ತನ್ನ ಸಹಚರರೊಂದಿಗೆ ಹಲ್ಲೆ ಮಾಡಿ ಸ್ಥಳದಲ್ಲಿಯೇ ಬರ್ಬರವಾಗಿ ಕೊಚ್ಚಿ ಪರಾರಿಯಾಗಿದ್ದರು.
ಇನ್ನು ಈ ಸಂಬಂಧ ಪ್ರಮುಖ ಆರೋಪಿಯಾಗಿ ಪೂರ್ಣಚಂದ್ರ ಹಾಗೂ ಅರುಣ್ ಎಂಬಾತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನುಳಿದ ಆರೋಪಿಗಳನ್ನು ಕೂಡಲೇ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಹೆಣ್ಣು, ಹೊನ್ನು, ಮಣ್ಣು ಅದಾಗಿಯೇ ಒಲಿದು ಬರಬೇಕು. ನಾವುಗಳೇ ಅದರ ಹಿಂದೆ ಬಿದ್ದರೆ ಜೀವ ಮಣ್ಣುಪಾಲಾಗುತ್ತದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ.












Click it and Unblock the Notifications