ಹಾಸನ: ಪ್ರಜ್ವಲ್, ಭವಾನಿ ರೇವಣ್ಣಗೆ ಸಂಸ್ಕಾರದ ಪಾಠ ಮಾಡಿದ ಪ್ರೀತಂಗೌಡ
ಹಾಸನ, ನವೆಂಬರ್, 02: ಹಾಸನದಲ್ಲಿ ರೇವಣ್ಣ ಕುಟುಂಬ ಹಾಗೂ ಶಾಸಕ ಪ್ರೀತಂಗೌಡ ನಡುವಿನ ವಾಕ್ಸಮರ ಮುಂದುವರೆದಿದೆ. "ಶಾಸಕರ ತಂದೆ ಹಳ್ಳಿಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದಾಗ, ಹೆಂಡತಿ ಮಕ್ಕಳನ್ನು ಸಾಕಲು ಆಗದೆ ಬಿಬಿಎಂಪಿಗೆ ಹಾಕಿಸಿಕೊಂಡು ಕೆಲಸ ಮಾಡಿದ್ದಾರೆ. ಇವತ್ತು ರೇವಣ್ಣ ಅವರ ಬಗ್ಗೆ ಮಾತಾನಾಡುತ್ತಾನೆ" ಎಂದು ಏಕವಚನದಲ್ಲಿ ಪ್ರೀತಂಗೌಡ ವಿರುದ್ಧ ಭವಾನಿ ರೇವಣ್ಣ ಹರಿಹಾಯ್ದಿದ್ದಾರೆ. ಇದಕ್ಕೆ ಪ್ರತಿಯಾಗಿ ಶಾಸಕ ಪ್ರೀತಂಗೌಡ, ಭವಾನಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಟಾಂಗ್ ಕೊಟ್ಟಿದ್ದಾರೆ. "ಭವಾನಿ ಅಕ್ಕ, ಸಂಸದರು ನಶೆಯಲ್ಲಿ ಮಾತನಾಡುತ್ತಿದ್ದಾರೆ. 30, 60 ಅಲ್ಲ ಅವರು ಎರಡು ಬಾಟಲಿ ಎಣ್ಣೆ ಕುಡಿಯುತ್ತಾರೆ. ತಾಯಿ, ಮಗ ಇಬ್ಬರು ಎರಡು ಗಂಟೆಯವರೆಗೆ ನಶೆ ಏರಿಸಿಕೊಂಡಿರುತ್ತಾರೆ. ಬೆಳಗ್ಗೆ ಬಂದು ತಾವು ಏನು ಮಾತಾಡುತ್ತೇವೆ ಅಂತಾ ಅವರಿಗೆ ಗೊತ್ತಾಗುವುದಿಲ್ಲ," ಎಂದು ಭವಾನಿ ರೇವಣ್ಣ ವಿರುದ್ದ ಟೀಕಾಪ್ರಹಾರ ನಡೆಸಿದ್ದಾರೆ.
ಹಾಸನದಲ್ಲಿ ಪ್ರತಿಯೊಬ್ಬರೂ ದೇವೇಗೌಡರ ಹೆಸರೇಳಿ ರಾಜಕಾರಣ ಮಾಡುತ್ತಿದ್ದಾರೆ: ಪ್ರಜ್ವಲ್ ರೇವಣ್ಣ
"ಹಳ್ಳಿಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದ ಇಂಜಿನಿಯರ್, ಹೆಂಡತಿ ಮಕ್ಕಳನ್ನು ಸಾಕಲು ಆಗದೆ ರೇವಣ್ಣನವರ ಬಳಿ ಬಂದು ಬಿಬಿಎಂಪಿಗೆ ಹಾಕಿಸಿಕೊಂಡು ಕೆಲಸ ಮಾಡಿದ್ದಾರೆ. ಅವರ ಮಗ ಇವತ್ತು ಶಾಸಕನಾಗಿ ಏಳನೇ ಕ್ಲಾಸ್ ಓದಿದವರು ಅಂತಾ ರೇವಣ್ಣ ಬಗ್ಗೆ ಮಾತನಾಡುತ್ತಾನೆ," ಎಂದು ಶಾಸಕ ಪ್ರೀತಂಗೌಡ ವಿರುದ್ಧ ಭವಾನಿರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
ಭವಾನಿ ರೇವಣ್ಣ ವಿರುದ್ಧ ಪ್ರೀತಂ ಕಿಡಿ
ಹಾಸನ ಜಿಲ್ಲೆ, ಹೊಳೆನರಸೀಪುರದಲ್ಲಿ ನಡೆದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಪ್ರೀತಂಗೌಡ ವಿರುದ್ಧ ಭವಾನಿ ರೇವಣ್ಣ ಹರಿಹಾಯ್ದರು. "ಒಬ್ಬ ಶಾಸಕರು ಕೆಲವು ವಿಷಯಗಳಲ್ಲಿ ರೇವಣ್ಣ ಅವರನ್ನು ತಳ್ಳಿ ಹಾಕುತ್ತಾರೆ. ಎಲ್ಲವನ್ನೂ ನಾನೇ ಕಟ್ಟಿದೆ, ನಾನೇ ಮಾಡಿದೆ ಅಂತಾ ಕೊಚ್ಚಿಕೊಳ್ಳುತ್ತಾರೆ. ಆ ಮಾತು ಅವರಿಗೆ ಎಷ್ಟು ಸರಿ ಅಂತಾ ಗೊತ್ತಿಲ್ಲ. ಅವರು ವಿದ್ಯಾವಂತರೋ, ಅವಿದ್ಯಾವಂತರೋ ಗೊತ್ತಿಲ್ಲ. ಇಷ್ಟೊಂದು ಕೆಲಸ ಆಗಿದ್ದರೆ ರೋಡ್ನಲ್ಲಿ ಹೋಗುವ ಎಂತಹ ಅವಿದ್ಯಾವಂತರೂ ಕೂಡ ಇದು ರೇವಣ್ಣ ಅವರು ಮಾಡಿರುವ ಕೆಲಸ ಅಂತಾ ತೋರುಸುತ್ತಾರೆ. ರಸ್ತೆಯಲ್ಲಿ ಓಡಾಡುವಂತಹ ಶಾಸಕರಿಗೆ ಈ ಬಿಲ್ಡಿಂಗ್ ಯಾರು ಕಟ್ಟಿಸಿದ್ದು ಎಂದು ಗೊತ್ತಾಗುವುದಿಲ್ಲವಾ? ಏಳನೇ ತರಗತಿ ಓದಿದವರೆಂದು ರೇವಣ್ಣ ಅವರನ್ನು ಖಂಡಿಸುತ್ತಾರೆ. ರೇವಣ್ಣ ಅವರ ವಿದ್ಯಾಭ್ಯಾಸವನ್ನು ಜನರಿಗೆ ತೋರಿಸಿಕೊಂಡು ಕೆಲಸ ಮಾಡಬೇಕಾ? ಎಂಟನೇ ತರಗತಿ ಪಾಸ್ ಆಗಿರುವವರ ಬಳಿಯೇ ಅವರ ಅಪ್ಪ ಇಂಜಿನಿಯರ್ ಆಗಿದ್ದರು. ನಂತರ ಕೈಮುಗುದು ಬಿಬಿಎಂಪಿಗೆ ವರ್ಗಾವಣೆ ಮಾಡಿಸಿಕೊಂಡರು," ಎಂದು ಹರಿಹಾಯ್ದರು.
ಎರಡು ಬಾಟಲಿ ಎಣ್ಣೆ ಕುಡಿಯುತ್ತಾರೆ
ಭವಾನಿ ರೇವಣ್ಣನ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪ್ರೀತಂಗೌಡ, "ಭವಾನಿ ಅಕ್ಕ, ಸಂಸದ ಪ್ರಜ್ವಲ್ ರೇವಣ್ಣ ನಶೆಯಲ್ಲಿ ಮಾತನಾಡುತ್ತಾರೆ. ಅವರು 30, 60 ಅಲ್ಲ, ಎರಡು ಬಾಟಲಿ ಎಣ್ಣೆ ಕುಡಿಯುತ್ತಾರೆ. ತಾಯಿ, ಮಗ ಇಬ್ಬರು ಎರಡು ಗಂಟೆಯವರೆಗೆ ನಶೆ ಏರಿಸಿಕೊಂಡು, ಬೆಳಗ್ಗೆ ಬಂದು ಏನ್ ಮಾತನಾಡುತ್ತೇವೆ ಅಂತಾ ಗೊತ್ತಾಗುವುದಿಲ್ಲ. ನಾನು ಏನಕ್ಕೆ ಐದನೇ ಕ್ಲಾಸ್, ಏಳನೇ ಕ್ಲಾಸ್ ಅಂತಿದ್ದೇನೆ ಅನ್ನುವುದು ಅವರಿಗೆ ಗೊತ್ತಿಲ್ಲದ ವಿಷಯವಾಗಿದೆ. ವಿಚಾರ ಗೊತ್ತಿಲ್ಲದೆ ಮಾತನಾಡುತ್ತಾರೆ. ಹುಟ್ಟುಗುಣ ಸುಟ್ಟರೂ ಹೋಗುವುದಿಲ್ಲ ಎಂದು ಅಜ್ಜಿ ಒಬ್ಬರು ನನ್ನ ಬಳಿ ಹೇಳಿದ್ದರು. ಯಡಿಯೂರು ಗ್ರಾಮಕ್ಕೆ ಹೋದ ವೇಳೆ ವ್ಯಕ್ತಿಯೊಬ್ಭರ ಹೇಳಿದ್ದರು. ಅಣ್ಣಾ ಇಬ್ಬರಿಗೂ ರಾತ್ರಿ ನಶೆ ಜಾಸ್ತಿ ಆಗಿರುತ್ತದೆ. ಬೆಳಗ್ಗೆ ಆದರೂ ನಶೆ ಇಳಿದಿರುವುದಿಲ್ಲ. ಹಾಗಾಗಿ ಏನೆನೋ ಮಾತನಾಡುತ್ತಾರೆ," ಎಂದು ವಾಗ್ದಾಳಿ ನಡೆಸಿದರು.
ಪ್ರಜ್ವಲ್, ಭವಾನಿ ರೇವಣ್ಣಗೆ ಸಂಸ್ಕಾರದ ಪಾಠ
ರೇವಣ್ಣ ಅವರು ಮಾತನಾಡಿಲ್ಲ, ಅವರು ಬಹಳ ಸಂಸ್ಕಾರ ಹೊಂದಿದವರಾಗಿದ್ದಾರೆ. ದೇವೇಗೌಡರು, ಚನ್ನಮ್ಮ ಅವರಿಗೆ ಸಂಸ್ಕಾರ ಕೊಟ್ಟಿದ್ದಾರೆ. ಆದರೆ "ಪ್ರಜ್ವಲ್ ರೇವಣ್ಣ, ಭವಾನಿ ರೇವಣ್ಣಗೆ ಸಂಸ್ಕಾರ ಇದೆಯೋ, ಇಲ್ಲವೋ ಗೊತ್ತಿಲ್ಲ. ಸಂಸದರಿಗೆ ಸಂಸ್ಕಾರ ಕಲಿಸಬೇಕಿರುವವರು ತಾಯಿ. ತಾಯಿನೇ ಆ ರೀತಿ ಮಾತನಾಡಿದರೆ ಹೇಗೆ? ನಮ್ಮ ತಾಯಿ ಹುಟ್ಟುವ ಮುಂಚೆಯೇ ನೂರು ಹೆಕ್ಟೇರ್ ಖಾತೆದಾರರು, ನಮ್ಮ ತಂದೆ ಹುಟ್ಟುವ ಮುಂಚೆಯೇ ಹತ್ತಾರು ಹೆಕ್ಟೇರ್ ಖಾತೆದಾರರು, ಸಾಲಿಗ್ರಾಮಕ್ಕೆ ಹೋಗಿ ಅಕ್ಕ ಅವರ ಮನೆಯಲ್ಲಿ ಎಷ್ಟು ಗುಂಟೆ ಜಾಗ ಇತ್ತು ಅಂತ ಕೇಳಿ. ಹೊಳೆನರಸೀಪುರಕ್ಕೆ ಸೊಸೆಯಾಗಿ ಬರುವ ಮುಂಚೆ ಮನೆಯ ಪರಿಸ್ಥಿತಿ ಹೇಗಿತ್ತು ಎಂದು ಅವರ ಆತ್ಮ ವಿಮರ್ಶೆ ಮಾಡಿಕೊಳ್ಳಲಿ. ಮೈಸೂರು ಮಹಾರಾಜರು ಏನಾದರೂ ಸಾಲ ಕೊಟ್ಟು ಅವರಿಗೆ ಆಗರ್ಭ ಶ್ರೀಮಂತರಾಗಿದ್ದರಾ ಭವಾನಿ ಅಕ್ಕ? ಮಾತನಾಡುವ ಶೈಲಿಯನ್ನು ನೋಡಿದರೆ ಅವರು ಆಗರ್ಭ ಶ್ರೀಮಂತರು ಅನಿಸುತ್ತದೆ," ಎಂದು ಟೀಕಿಸಿದರು.
ಸಂಸದರ ಸಹವಾಸ ಮಾಡದಂತೆ ಮನವಿ
"ಆಲ್ಕೋಮೀಟರ್ ಇಟ್ಟುಕೊಂಡಿರಿ, ಸುದ್ದಿಗೋಷ್ಠಿ ಬಂದಾಗ ಚೆಕ್ಮಾಡಿದಾಗ ನಶೆ ಇದ್ದರೆ ಏನು ಅಂದುಕೊಳ್ಳಬೇಡಿ. ರೇವಣ್ಣ ಅವರು ಮಾತನಾಡಲ್ಲ. ಯಾಕೆ ಅಂದರೆ ಅವರು ನಶೆ ಏರಿಸಿಕೊಳ್ಳಲ್ಲ ಎಂದು ವ್ಯಂಗ್ಯವಾಡಿದರು. ಭವಾನಿ ಅಕ್ಕ, ಸಂಸದರು ನಶೆ ಮೇಲೆ ಮಾತನಾಡಿದ್ದಾರೆ. ಈ ಬಗ್ಗೆ ಹಾಸನ ಕ್ಷೇತ್ರ ಮತ್ತು ಇಡೀ ರಾಜ್ಯದ ಜನರು ಮಾತನಾಡುತ್ತಿದ್ದಾರೆ. ರೇವಣ್ಣ ಈ ನಶೆಯ ಮಧ್ಯೆ ಸಿಲುಕಿಕೊಂಡು ನರಳಿ ಹೋಗಿದ್ದಾರೆ. ನಮ್ಮ ತಾಯಿ ಬಿಎ, ತಂದೆ ಬಿಇ ಓದಿದ್ದಾರೆ. ಅವರು ನಮಗೆ ಸಂಸ್ಕಾರ ಕಲಿಸಿಕೊಟ್ಟಿದ್ದಾರೆ. ಎಲ್ಲಾ ಅಧಿಕಾರಿಗಳಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಆ ಕುಟುಂಬದ ಹತ್ತಿರ ಹೋಗಬೇಡಿ. ಸಹಾಯ ಪಡೆಯದಿರುವ ಶಾಸಕರ ತಂದೆ ಬಗ್ಗೆನೇ ಮಾತನಾಡುತ್ತಾರೆ ಎಂದರೆ ಸಾಮಾನ್ಯ ನೌಕರರ ಪಾಡು ಏನಾಗಬೇಕು. ನಿಮ್ಮ ಜೀವನ ನಡಿತಿರುವುದೇ ಅವರಿಂದ ಅನ್ನುತ್ತಾರೆ. ಸರ್ಕಾರಿ ನೌಕರರು ಬಹಳ ಸ್ವಾಭಿಮಾನಿಗಳು," ಎಂದು ಹರಿಹಾಯ್ದರು.
ಇನ್ನು "ಅನಿತಾ ಅಕ್ಕನನ್ನು ನೋಡಿದರೆ ಎರಡು ಕೈ ಮುಗಿದು ಬನ್ನಿ ಅಕ್ಕ ಅಂತಾ ಕರಿಬೇಕು ಅನಿಸುತ್ತದೆ. ತುಂಬಿದ ಕೊಡ ತುಳುಕುವುದಿಲ್ಲ. ಅನಿತಾ ಅಕ್ಕನ ಬಗ್ಗೆ ಮಾತನಾಡಲು ಆಗುತ್ತದೆಯಾ? ಅವರು ಸಂಸ್ಕಾರವಂತರಿದ್ದಾರೆ. ದೇವೇಗೌಡರು ಮಾಜಿಪ್ರಧಾನಿಗಳು, ಅವರ ಸೊಸೆ ನಾನೇ ಮಾಜಿ ಪ್ರಧಾನಿ ಅಂತಾ ತಲೆಯಲ್ಲಿ ಇಟ್ಟುಕೊಂಡಿದ್ದಾರೆ. ಅವರ ಮೊಮ್ಮಗ ನಾನೇ ಮಾಜಿ ಪ್ರಧಾನಿ ಎನ್ನುವ ರೀತಿ ಮಾತನಾಡುತ್ತಾರೆ," ಎಂದು ವ್ಯಂಗ್ಯವಾಡಿದರು. ಒಟ್ಟಿನಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಇಬ್ಬರು ನಾಯಕರೂ ನಾಲಗೆಯನ್ನು ಹರಿಯಬಿಟ್ಟು ಬಾಯಿಗೆ ಬಂದಂತೆ ವಾಕ್ಸಮರಕ್ಕೆ ಇಳಿದಿದ್ದಾರೆ.