ಹಾಸನ ಡಿಸಿ ರೋಹಿಣಿ ವಿರುದ್ಧ ಸಿದ್ದರಾಮಯ್ಯಗೆ ದೂರು
Recommended Video

ಹಾಸನ, ಜನವರಿ 06: ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮತ್ತೆ ಸುದ್ದಿಯಲ್ಲಿದ್ದಾರೆ. ಖಡಕ್ ಅಧಿಕಾರಿ ಎದುರು ಕೈಕಟ್ಟಿ ನಿಲ್ಲಲು ಸಾಧ್ಯವಿಲ್ಲ, ನಾನೊಬ್ಬ ಜನಪ್ರತಿನಿಧಿ ಎಂದು ಮತ್ತೆ ಗುಡುಗಿದ್ದಾರೆ. ಈ ಬಾರಿ ಸಿಎಂ ಸಿದ್ದರಾಮಯ್ಯ ಅವರ 'ಕಿವಿ ಕಚ್ಚಿದ್ದಾರೆ' ಕೂಡಾ.
ಹೌದು, ದಕ್ಷ ಆಡಳಿತ ನಡೆಸುತ್ತಾ ಸುಧಾರಣೆಯತ್ತ ಜಿಲ್ಲೆಯನ್ನು ಕೊಂಡೊಯ್ಯಲು ಶ್ರಮಿಸುತ್ತಿರುವ ರೋಹಿಣಿ ಸಿಂಧೂರಿ ವಿರುದ್ಧ ಸಿಎಂಗೆ ದೂರು ನೀಡಲಾಗಿದೆ. ಸಿಎಂ ಅವರು ಕೂಡಾ ಕಿವಿಮಾತು ಹೇಳಿದ್ದಾರೆ ಎಂಬ ಸುದ್ದಿ ಬಂದಿದೆ.
ಸರ್ಕಾರಿ ಸಭೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಆರೋಪ ಹೊರೆಸಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ದೂರು ದಾಖಲಿಸಿದ್ದ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿಯವರ ಬೆಂಬಲಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಅರಕಲಗೂಡು ಮಂಜು ಕೂಡಾ ನಿಂತಿದ್ದಾರೆ.
ಈ ಹಿಂದೆ ಕೂಡಾ ಹಾಸನಾಂಬೆ ದೇಗುಲದ ಸಿದ್ಧತಾ ಕಾರ್ಯ, ಕಾಮಗಾರಿ ಪ್ರಗತಿ ಸಭೆಗಳಿಗೆ ಜನ ಪ್ರತಿನಿಧಿಗಳನ್ನು ಆಹ್ವಾನಿಸುತ್ತಿಲ್ಲ. ಜನಪ್ರತಿನಿಧಿಗಳ ಸಲಹೆ ಕೇಳುತ್ತಿಲ್ಲ ಎಂದು ರೋಹಿಣಿ ವಿರುದ್ಧ ದೂರುಗಳು ಕೇಳಿ ಬಂದಿತ್ತು. ರೋಹಿಣಿ ವಿರುದ್ಧ ಸಭಾಪತಿಗಳಿಗೆ ದೂರು ನೀಡಿದ್ದ ಶಾಸಕ ಗೋಪಾಲಯ್ಯ ಈಗ ಸಿಎಂ ಸಿದ್ದರಾಮಯ್ಯ ಅವರಿಗೆ ದೂರಿದ್ದಾರೆ.

ಸಭಾಪತಿಗೆ ದೂರಿದ್ದ ಗೋಪಾಲಸ್ವಾಮಿ
ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ರೋಹಿಣಿ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಕೋರಿ ಇದೇ ಗೋಪಾಲಸ್ವಾಮಿ ಅವರು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರಿಗೆ ಲಿಖಿತ ದೂರು ಸಲ್ಲಿಸಿದ್ದರು. ಇಷ್ಟಕ್ಕೆ ಸುಮ್ಮನಾಗದ ಶಾಸಕರು, ಸಿಎಂ ಅವರು ಹಾಸನ ಜಿಲ್ಲಾ ಪ್ರವಾಸ ಕೈಗೊಳ್ಳುವುದನ್ನೇ ಕಾದು, ಅರಕಲಗೂಡು ಪ್ರವಾಸಿ ಮಂದಿರದಲ್ಲಿ ಕೆಲ ಕಾಲ ವಿಶ್ರಾಂತಿ ಪಡೆಯಲು ಬಂದ ಸಿಎಂ ಅವರಿಗೆ ದೂರು ಸಲ್ಲಿಸಿದ್ದಾರೆ.

'ಜನಪ್ರತಿನಿಧಿಗಳಿಗೆ ಗೌರವ ನೀಡುತ್ತಿಲ್ಲ'
ಕಾಂಗ್ರೆಸ್ ಪಕ್ಷದ ಚುನಾಯಿತ ಪ್ರತಿನಿಧಿಗಳಿಗೆ ಡಿಸಿ ರೋಹಿಣಿ ಗೌರವ ನೀಡುತ್ತಿಲ್ಲ, ಸಭೆಗೆ ಆಹ್ವಾನಿಸುತ್ತಿಲ್ಲ. ಕಚೇರಿಗೆ ಹೋದರೆ ಹೊರಗೆ ಕಾಯುವಂತೆ ಮಾಡಿದ್ದಾರೆ ಎಂದು ಗೋಪಾಲಸ್ವಾಮಿ ದೂರಿದ್ದಾರೆ. ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಕೆ.ಪಿ.ಸಿ.ಸಿ ಉಪಾಧ್ಯಕ್ಷ ಬಿ. ಶಿವರಾಂ,ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರು ಕೂಡಾ ರೋಹಿಣಿ ವಿರುದ್ಧ ಸಿಎಂಗೆ ದೂರಿದ್ದಾರೆ.

ಶಾಸಕರ ಕೋಪಕ್ಕೆ ಕಾರಣವೇನು?
ಸೆಪ್ಟೆಂಬರ್ 27 ರಂದು ಡಿಸಿ ಕಚೇರಿಯಲ್ಲಿ ಹಾಸನಾಂಬೆ ಜಾತ್ರೆಯ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಆದರೆ, ಸಭೆಗೆ ಗೋಪಾಲ ಸ್ವಾಮಿ ಅವರಿಗೆ ಆಹ್ವಾನ ನೀಡಿರಲಿಲ್ಲ. ನಂತರ ಗೋಪಾಲಸ್ವಾಮಿ ಅವರು ಹೋದಾಗ, ಡಿಸಿ ರೋಹಿಣಿ ಅವರು ಬೇರೆ ಕೆಲಸದಲ್ಲಿ ನಿರತರಾಗಿದ್ದರು ಹೀಗಾಗಿ, ಸ್ವಲ್ಪ ಹೊತ್ತು ಹೊರಗೆ ಕಾಯುವಂತೆ ಸೂಚಿಸಿದ್ದಾರೆ. ಇದು ಶಾಸಕರ ಕೋಪಕ್ಕೆ ಕಾರಣ.

ಉಭಯ ಸಂಕಟದಲ್ಲಿ ಸಿದ್ದರಾಮಯ್ಯ
ಬೇಲೂರು, ಮೂಡಿಗೆರೆ, ಕಡೂರು, ತರೀಕೆರೆ, ಅಜ್ಜಂಪುರದಲ್ಲಿ ವಿವಿಧ ಕಾರ್ಯಕ್ರಮಕ್ಕೆ ತೆರಳಬೇಕಾಗಿದ್ದ ಸಿದ್ದರಾಮಯ್ಯ ಅವರು ಇವರ ದೂರಿಗೆ ಕಿವಿಕೊಟ್ಟು, ಡಿಸಿ ರೋಹಿಣಿ ಅವರಿಗೆ ಕಿವಿಮಾತು ಹೇಳಿದ್ದಾರೆ ಎಂಬ ಸುದ್ದಿಯಿದೆ. ರೋಹಿಣಿ ಅವರನ್ನು ವರ್ಗಾವಣೆ ಮಾಡಿದರೆ ಜನರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಎ ಮಂಜು ಮಾತು ತೆಗೆದು ಹಾಕಿದರೆ, ಜೆಡಿಎಸ್ ಪ್ರಾಬಲ್ಯ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಧ್ವಜ ನೆಡುವ ಆಸೆಗೆ ತಣ್ಣೀರೆರಚಿದ್ದಂತಾಗುತ್ತದೆ. ಹೀಗಾಗಿ ಸಿಎಂ ಉಭಯ ಸಂಕಟಕ್ಕೆ ಸಿಲುಕಿ ತಕ್ಷಣಕ್ಕೆ ಈ ಸಮಸ್ಯೆ ಬಗೆಹರಿಸಿದ್ದಾರೆ












Click it and Unblock the Notifications