ನನ್ನದು ಸ್ವಾತಿ ನಕ್ಷತ್ರ, ನನ್ನನ್ನು ಏನೂ ಮಾಡಲು ಆಗುವುದಿಲ್ಲ; ರೇವಣ್ಣ
ಹಾಸನ, ಮಾರ್ಚ್ 28: ನನ್ನದು ಸ್ವಾತಿ ನಕ್ಷತ್ರ. ನನಗೆ ಮಾಟ ಮಂತ್ರಗಳು ತಗುಲುವುದಿಲ್ಲ. ನನ್ನ ಮೇಲೆ ಈಶ್ವರ ಮತ್ತು ಶೃಂಗೇರಿ ಗುರುಗಳ ಆಶೀರ್ವಾದವಿದೆ. ನನಗೇನಾದರೂ ಮಾಡಲು ಬಂದರೆ ಅದು ಅವರಿಗೆ ರಿವರ್ಸ್ ಆಗುತ್ತದೆ ಎಂದು ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ನಮ್ಮನ್ನು ಹೆದರಿಸಬಹುದು ಎಂದುಕೊಂಡರೆ ಅದು ಸಾಧ್ಯವಿಲ್ಲ. ನಾವು ಇಂಥಹದ್ದನ್ನೆಲ್ಲ ನೋಡಿ ಬಂದಿದ್ದೇವೆ. ಐಟಿ ದಾಳಿ ಮಾಡಿದರೇನೇ ದೇವೇಗೌಡರ ರಾಜಕೀಯ ನಡೆಯುವುದು. ಇಲ್ಲಿಂದ ನಿಜವಾದ ರಾಜಕೀಯ ಆಟ ಶುರುವಾಗುತ್ತದೆ ಎಂದು ತಿಳಿಸಿದ್ದಾರೆ.
ಐಟಿ ದಾಳಿಯಿಂದ ನಮಗೆ ಅನುಕೂಲವೇ ಆಗಲಿದೆ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆ ಮುಖ್ಯಸ್ಥರು ಮೋದಿ ಅವರ ಏಜೆಂಟ್. ಅವರು ಐಟಿ ಇಲಾಖೆ ಕೆಲಸ ಬಿಟ್ಟು ಬಿಜೆಪಿ ಸೇರಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈತ್ರಿ ಸರ್ಕಾರವನ್ನು ಬೀಳಿಸುವುದಕ್ಕೆ ಲೋಕೋಪಯೋಗಿ ಇಲಾಖೆ ಮೇಲೆ ದಾಳಿ ನಡೆಸಿದ್ದಾರೆ. ಬಿಜೆಪಿ ನಾಯಕರು ಒಂಬತ್ತು ತಿಂಗಳಿನಿಂದ ಕಾಂಗ್ರೆಸ್ ನಾಯಕರ ಮನೆ ಸುತ್ತಿದ್ದಾರೆ. ಆದರೂ ಅವರಿಗೆ ಸರ್ಕಾರ ಬೀಳಿಸಲು ಸಾಧ್ಯವಾಗಲಿಲ್ಲ. ಈಗ ಚುನಾವಣೆಯ ಸಂದರ್ಭ ನೋಡಿ ಇಲಾಖೆಯ ಮೇಲೆ ದಾಳಿ ನಡೆಸಿದ್ದಾರೆ. ಇದರಿಂದ ಚುನಾವಣೆಯಲ್ಲಿ ಶೇ 10ರಷ್ಟು ಹೆಚ್ಚು ಮತಗಳು ಬರಲಿವೆ ಎಂದಿದ್ದಾರೆ.

ದಾಳಿ ಬೇಡ ಅಂದಿಲ್ಲ
ಆದಾಯ ತೆರಿಗೆ ಇಲಾಖೆ ದಾಳಿಯನ್ನು ಯಾರೂ ಬೇಡ ಅಂದಿಲ್ಲ. ಎಲ್ಲಿ ಬೇಕಾದರೂ ರೇಡ್ ಮಾಡಲಿ. ಅಕ್ರಮ ಕಂಡುಬಂದರೆ ಹೊತ್ತುಕೊಂಡು ಹೋಗಲಿ. ದೇವೇಗೌಡರ ಕುಟುಂಬ ಇಷ್ಟು ವರ್ಷ ನಡೆಸಿರುವ ರಾಜಕಾರಣದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದೆ. ಹೀಗೆ ದಾಳಿ ಮಾಡಿ ದೇವೇಗೌಡರು, ಕುಮಾರಸ್ವಾಮಿ ಅವರನ್ನು ಹೆದರಿಸಬಹುದು ಎಂದು ಅಂದುಕೊಂಡಿದ್ದರೆ ಅದು ಬರಿ ಕನಸಷ್ಟೇ ಎಂದು ಹೇಳಿದ್ದಾರೆ.
|
ಮೋದಿಗೆ ದೇವೇಗೌಡರು ಹೆದರೊಲ್ಲ
ಮೋದಿ ಯಾರು? ದೇವೇಗೌಡರು ಮೋದಿಗೆ ಹೆದರುವುದಿಲ್ಲ. ಐಟಿ ಅಧಿಕಾರಿಗಳು ಮೋದಿ ಅವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಜನರು ಈ ಕುತಂತ್ರಕ್ಕೆ ಸರಿಯಾದ ರೀತಿಯಲ್ಲಿ ಉತ್ತರ ನೀಡಲಿದ್ದಾರೆ. ನಾವು ಐಟಿ ದಾಳಿಯನ್ನು ವಿರೋಧಿಸಿ ರಾಜ್ಯದಲ್ಲಿ ಮಮತಾ ಬ್ಯಾನರ್ಜಿ ಅವರ ಮಾದರಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ಬಿಎಸ್ವೈ ಮನೆಯಲ್ಲಿ ಕೆಲಸಕ್ಕಿರಲಿ
ಐಟಿ ಅಧಿಕಾರಿಗಳು ಈ ಹಿಂದೆ ಯಡಿಯೂರಪ್ಪ ಅವರಿಗೆ 24 ಗಂಟೆಯಲ್ಲಿ ಕ್ಲೀನ್ ಚಿಟ್ ನೀಡಿದ್ದರು. ಆದರೆ ನಮಗೆ ಕಿರುಕುಳ ಕೊಡುತ್ತಿದ್ದಾರೆ. ಈ ಐಟಿ ಮುಖ್ಯಸ್ಥರು ತಮ್ಮ ಹುದ್ದೆಗೆ ಅಗೌರವ ಉಂಟುಮಾಡಿದ್ದಾರೆ. ಅವರನ್ನು ಯಡಿಯೂರಪ್ಪ ತಮ್ಮ ಮನೆಯಲ್ಲಿ ಕೆಲಸಕ್ಕೆ ಇಟ್ಟುಕೊಳ್ಳಲಿ. ದೇವೇಗೌಡರ ಶಕ್ತಿ ಏನೆಂಬುದು ತಿಳಿಯದೆ ಬಿಜೆಪಿ ಈ ತಂತ್ರ ಮಾಡುತ್ತಿದೆ. ಇಂತಹ ಪುಟಗೋಸಿ ಐಸಿ ಮುಖ್ಯಸ್ಥರಿಗೆಲ್ಲ ನಾವು ಹೆದರುವುದಿಲ್ಲ ಎಂದಿದ್ದಾರೆ.
|
ಪ್ರಾಮಾಣಿಕರಾಗಿದ್ದರೆ ಭಯವೇಕೆ?
ಐಟಿ ಸಂಸ್ಥೆ ಬಿಜೆಪಿಯ ಘಟಕವಲ್ಲ. ಅದು ಸ್ವಾಯತ್ತ ಸಂಸ್ಥೆ. ಇದರಲ್ಲಿ ರಾಜಕೀಯ ಬೆರೆಸುವುದು ಸಣ್ಣತನ. ತೆರಿಗೆ ವಂಚನೆ ಮಾಡಿದರೆ ದಂಡ ಕಟ್ಟಬೇಕು. ಅದನ್ನು ಮುಖ್ಯಮಂತ್ರಿ ಮತ್ತು ಸಚಿವರು ಪಾಲಿಸಬೇಕಿತ್ತು. ತಪ್ಪು ಮಾಡಿದವರು ಮಾತ ಹೆದರುತ್ತಾರೆ. ಪ್ರಾಮಾಣಿಕರಾಗಿದ್ದರೆ ಭಯವೇಕೆ? ಎತ್ತಿನ ಗಾಡಿಯಲ್ಲಿ ಬಂದವರು ಈಗ ಸಾವಿರಾರು ಕೋಟಿ ರೂ ಒಡೆಯರಾಗಿದ್ದಾರೆ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಹೇಳಿದ್ದಾರೆ.












Click it and Unblock the Notifications