ನ.5ಕ್ಕೆ ಹಾಸನಾಂಬ ದೇಗುಲ ಓಪನ್; ದೇವಾಲಯಕ್ಕೆ ಒಡವೆ ರವಾನೆ
ಹಾಸನ, ನವೆಂಬರ್ 2: ಹಾಸನ ನಗರದ ಅಧಿದೇವತೆ ಹಾಸನಾಂಬೆಯ ಜಾತ್ರೆಯು ಇದೇ ನವೆಂಬರ್ 5ರಿಂದ ಆರಂಭಗೊಳ್ಳುತ್ತಿದ್ದು, ಜಾತ್ರೆಯ ಸಲುವಾಗಿ ನಗರದ ಜಿಲ್ಲಾ ಖಜಾನೆಯಿಂದ ಒಡವೆಯನ್ನು ದೇವಾಲಯಕ್ಕೆ ಸೋಮವಾರ ತರಲಾಯಿತು.
ಈ ಬಾರಿ ಹಾಸನಾಂಬೆಯ ದೇವಾಲಯದ ಬಾಗಿಲನ್ನು ನವೆಂಬರ್ 5 ರಿಂದ ನವೆಂಬರ್ 17ರವರೆಗೆ ತೆರೆಯಲಾಗುತ್ತಿದ್ದು, ಅಕ್ಟೋಬರ್ 29ರಂದು ದೇವಸ್ಥಾನಕ್ಕೆ ಭೇಟಿ ನೀಡಿ, ದೇಗುಲದಲ್ಲಿನ ಸಿದ್ಧತೆಗಳ ಕುರಿತು ಜಿಲ್ಲಾಧಿಕಾರಿ ಆರ್ ಗಿರೀಶ್ ಪರಿಶೀಲಿಸಿದ್ದರು.
ಸೋಮವಾರ ಜಿಲ್ಲಾಧಿಕಾರಿ ಆರ್ ಗಿರೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಹಾಗೂ ತಹಶೀಲ್ದಾರ್ ಶಿವಶಂಕರಪ್ಪ ಅವರ ಸಮ್ಮುಖದಲ್ಲಿ ಖಜಾನೆಯಿಂದ ಒಡವೆ ಪೆಟ್ಟಿಗೆಯನ್ನು ತಂದು ಹೂವಿನಿಂದ ಅಲಂಕಾರಗೊಂಡಿದ್ದ ಅಡ್ಡಪಲ್ಲಕ್ಕಿ ಮೇಲಿಟ್ಟು ಪೂಜೆ ಸಲ್ಲಿಸಲಾಯಿತು. ಹಾಸನ ನಗರದ ಪ್ರಮುಖ ರಸ್ತೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಜೊತೆ ದೇವಿಯ ವಸ್ತ್ರ ಹಾಗೂ ಆಭರಣಗಳನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕ ದರ್ಶನಕ್ಕೆ ಅವಕಾಶವನ್ನು ನೀಡಲಾಗಿಲ್ಲ. ಮೊದಲ ದಿನ ಆಹ್ವಾನಿತ ಗಣ್ಯರಿಗೆ ಮಾತ್ರ ದೇವಸ್ಥಾನದ ಒಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿರಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಆದರೆ ಪ್ರೊಜೆಕ್ಟರ್ ಮೂಲಕ ಹಾಗೂ ಟಿ.ವಿ.ಮಾಧ್ಯಮಗಳಲ್ಲಿ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.












Click it and Unblock the Notifications