ಯಡಿಯೂರಪ್ಪ ಎಷ್ಟೇ ಹೋರಾಡಿದರೂ ಬಿಜೆಪಿ 40 ಸ್ಥಾನ ಪಡೆಯುವುದು ಕಷ್ಟ: ರೇವಣ್ಣ
ಹಾಸನ, ಆಗಸ್ಟ್, 29: ರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಪಕ್ಷವು ಸೆಡ್ಡು ಹೊಡೆಯಲಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹಾಸನದಲ್ಲಿ ಭವಿಷ್ಯ ನುಡಿದರು.
ನಗರದ ಸಂಸದರ ನಿವಾಸದಲ್ಲಿ ಮಾತನಾಡಿ ಅವರು ಯಡಿಯೂರಪ್ಪ ಅವರ ಅಧಿಕಾರ ಅವಧಿಯಲ್ಲಿ ಹಾಸನಕ್ಕೆ ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ. "ಇನ್ನೂ ಉಳಿದ ಅವಧಿಯಲ್ಲಿ ಬಿಜೆಪಿ ಜಿಲ್ಲೆಯನ್ನು ಕಡೆಗಣಿಸಿದೆ. ಇಷ್ಟಾದರು ಜಿಲ್ಲೆಯ ಜನರ ಮತ ಹೇಗೆ ಕೇಳುತ್ತಾರೊ ಗೊತ್ತಿಲ್ಲ. ಜಿಲ್ಲೆಯ ಕೆಲ ಪ್ರಮುಖ ಕೆರೆಗಳು ಹೊಡೆದಿದ್ದರೂ ಅವುಗಳನ್ನು ದುರಸ್ತಿ ಮಾಡುವ ಕೆಲಸಕ್ಕೆ ಇಲಾಖೆಗಳು ಮುಂದಾಗುತ್ತಿಲ್ಲ. ರೈತರ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ," ಎಂದು ಕಿಡಿಕಾರಿದರು.
ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಗಳು ಮಣ್ಣುಪಾಲು
ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಗಳಾದ ಆಲೂಗಡ್ಡೆ, ಜೋಳ ಸೇರಿದಂತೆ ಬಹುತೇಕ ಬೆಳೆಗಳು ಮಣ್ಣು ಪಾಲಾಗಿವೆ. ಭಾರಿ ಮಳೆ ಸುರಿದ ಕಾರಣದಿಂದ ಬೆಳೆಗಳು ನೀರಲ್ಲಿ ಕೊಚ್ಚಿ ಹೋಗಿವೆ. ಇಷ್ಟಾದರೂ ಮೊಟ್ಟೆ ಎಸೆದ ವಿಷಯಕ್ಕೆ ಎರಡೂ ಪಕ್ಷದ ನಾಯಕರು ರಾಜಕೀಯ ಮಾಡುತ್ತಿದ್ದಾರೆ." ಎಂದು ಹೇಳಿದರು.

ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳು ಲೂಟಿಗೆ ಇಳಿದಿವೆ. ಸರ್ಕಾರವು ಖಾಸಗಿ ಶಿಕ್ಷಣ ಇಲಾಖೆಯೊಂದಿಗೆ ಸೇರಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹುನ್ನಾರ ನಡೆಸಿವೆ. ಇದೇ ರೀತಿಯ ತಾರತಮ್ಯ ಆಡಳಿತ ನಡೆಸಿದರೆ ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪನವರು ಎಷ್ಟೇ ಹೋರಾಟ ನಡೆಸಿದರೂ ಕೂಡ 40 ಸ್ಥಾನ ಪಡೆಯುವುದಕ್ಕೂ ಕಷ್ಟ ಪಡಬೇಕಾಗುತ್ತದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಸೆಡ್ಡು ಹೊಡೆಯುವುದು ಖಚಿತ ಎಂದು ಹೆಚ್.ಡಿ.ರೇವಣ್ಣ ಭವಿಷ್ಯ ನುಡಿದರು.
ಅಗತ್ಯ ನೆರವು ಕೈಗೊಳ್ಳುವಲ್ಲಿ ಸರ್ಕಾರ ವಿಫಲ
ಜಿಲ್ಲೆಯಲ್ಲಿ ಮೂರು ತಿಂಗಳಿಂದ ಮಳೆಗೆ ಲೋಕೋಪಯೋಗಿ ಇಲಾಖೆಯ ರಸ್ತೆ ತೀವ್ರ ಹದಗೆಟ್ಟಿದೆ. ಸರ್ಕಾರವು ಅಗತ್ಯ ನೆರವು, ಕಾಮಗಾರಿಯನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ. ನನ್ನ ವಿಧಾನಸಭೆ ಕ್ಷೇತ್ರ ಹೊಳೆನರಸೀಪುರ ಮಾರ್ಗದಲ್ಲಿ ಮಡಿಕೇರಿಯಿಂದ- ಹಾಸನಕ್ಕೆ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ಬಹುತೇಕ ರಸ್ತೆಗಳು ಗುಂಡಿಮಯವಾಗಿದ್ದರೂ ಕೂಡ ದುರಸ್ತಿ ಕಾರ್ಯ ನಡೆಯತ್ತಿಲ್ಲ. ಮಳೆ ಹಾನಿ ಪರಿಹಾರವಾಗಿ ಹಾಸನ- ಕೊಡಗಿಗೆ ಕೇವಲ 25 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಆದರೆ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ 100 ಕೋಟಿ ಬಿಡುಗಡೆ ಮಾಡಿ ತಾರತಮ್ಯ ಮಾಡುತ್ತಿದ್ದಾರೆ. ಪರಿಹಾರವನ್ನು ಕಡ್ಲೆಪುರಿಯಂತೆ ಹಂಚಿಕೆ ಮಾಡುತ್ತಿದ್ದು, ಇದಕ್ಕೆ ಯಾವುದೇ ಮಾನದಂಡ ಇಲ್ಲದಂತಾಗಿದೆ. ಬಹುತೇಕ ರಸ್ತೆಗಳು ಗುಂಡಿ ಬಿದ್ದಿದ್ದು, ಸಮಸ್ಯೆಯನ್ನು ನೋಡುವವರು ದಿಕ್ಕಿಲ್ಲದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೃಷಿ ಇಲಾಖೆ ವಿರುದ್ಧ ರೇವಣ್ಣ ಗುಡುಗು
ಸಚಿವರೆಲ್ಲ ಜಿಲ್ಲೆಯನ್ನು ಮರೆತಿದ್ದು, ತೋಟಗಾರಿಕೆ, ಕೃಷಿ, ಪ್ರವಾಸೋದ್ಯಮ ಇಲಾಖೆಯ ಸಚಿವರನ್ನು ಹುಡುಕಿಕೊಡಿ ಎಂದು ಟೀಕಿಸಿದರು. ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸರಿಯಾದ ಸಮೀಕ್ಷೆ ನಡೆಸುತ್ತಿಲ್ಲ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿಗೆ ಸಮರ್ಪಕವಾಗಿ ಅನುದಾನ ಬಿಡುಗಡೆ ಮಾಡಿಲ್ಲ. ನೆರೆ ಹಾವಳಿಯ ನಷ್ಟದ ಅಂಕಿ ಅಂಶಗಳು ಸರಿಯಾಗಿ ಬಿಡುಗಡೆ ಮಾಡಿಲ್ಲ. ಬೇಕಾಬಿಟ್ಟಿ ಮಾಹಿತಿ ನೀಡಿದ್ದಾರೆ. ಸಮರೋಪಾಧಿಯಲ್ಲಿ ಕೆಲಸ ಮಾಡಬೇಕಾದ ಅಧಿಕಾರಿಗಳು ಬೇಜವಾಬ್ದಾರಿ ಪ್ರದರ್ಶನ ಮಾಡುತ್ತಿದ್ದಾರೆ. ರಾಜ್ಯದಲ್ಲಿರುವ ಶಿಕ್ಷಣ ಸಂಸ್ಥೆಗಳು ಲೂಟಿಗೆ ಮುಂದಾಗಿದ್ದು, ಸರ್ಕಾರವು ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಸೇರಿ ಸರ್ಕಾರಿ ಶಾಲೆಗಳಿಗೆ ಬೀಗ ಹಾಕಲು ಹೊರಟಿದೆ ಎಂದು ಆರೋಪ ಮಾಡಿದರು.
ಇನ್ನು ಮುರುಘಾ ಮಠದ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಇದರ ಬಗ್ಗೆ ಹೇಳಿಕೆ ನೀಡುವಷ್ಟು ನಾನು ದೊಡ್ಡ ವ್ಯಕ್ತಿ ಅಲ್ಲ. ಇದು ಸರ್ಕಾರ ಮತ್ತು ಮಠಕ್ಕೆ ಬಿಟ್ಟಿದ್ದು. ಆ ವಿಷಯದಲ್ಲಿ ನಾನು ಏನನ್ನು ಹೇಳುವುದಕ್ಕೆ ಹೋಗುವುದಿಲ್ಲ ಎಂದು ಹೇಳಿದರು.












Click it and Unblock the Notifications