ಮೂಲ ಯೋಜನೆಯಂತೆ ನಿರ್ಮಾಣವಾಗದಿದ್ದರೆ ಹಾಸನಕ್ಕೆ ಏರ್ಪೋರ್ಟ್ ಬೇಡ; ಜೆಡಿಎಸ್ ಆಗ್ರಹ
ಹಾಸನ, ನವೆಂಬರ್ 11: ಹಾಸನದಲ್ಲಿ ಏರ್ಪೋರ್ಟ್ ಆಗಬೇಕು, ಜಿಲ್ಲೆಯಲ್ಲೂ ಲೋಹದ ಹಕ್ಕಿಗಳ ಕಲವರ ಕೇಳಬೇಕು ಅನ್ನುವುದು ಬರೋಬ್ಬರಿ ಐದು ದಶಕದ ಕನಸು. ಅದಕ್ಕಾಗಿ 25 ವರ್ಷಗಳ ಹಿಂದೆಯೇ ಭೂ ಸ್ವಾಧೀನವೂ ಆಗಿದ್ದು, ಹಲವು ಸರ್ಕಾರಗಳು ಬಂದು ಹೋಗಿವೆ. ಆದರೆ ವಿಮಾನ ಮಾತ್ರ ಬರಲೇ ಇಲ್ಲ, ವಿಮಾನ ನಿಲ್ದಾಣ ಕಾಮಗಾರಿ ಆರಂಭವಾಗಿರಲಿಲ್ಲ.
ಆದರೆ ಈಗ ಯೋಜನೆಗಾಗಿ ಸರ್ಕಾರ 198 ಕೋಟಿ ರೂ. ಹಣವನ್ನು ಮೀಸಲಿಟ್ಟಿದ್ದು, ಕಾಮಗಾರಿಯೂ ಆರಂಭವಾಗಿದೆ. ಐದು ದಶಕಗಳ ಹಿಂದೆ ರಚನೆಯಾಗಿದ್ದ ಯೋಜನೆಗೆ ಬದಲಿಸಿ ಕಾಮಗಾರಿ ಪ್ರಾರಂಭಿಸಿದ್ದು, ನಾಮಕಾವಸ್ತೆ ವಿಮಾನ ನಿಲ್ದಾಣ ಮಾಡುತ್ತಿದ್ದಾರೆ. ಮಾಡುವುದಾದರೆ ಮೂಲ ಯೋಜನೆಯಂತೆ ವಿಮಾನ ನಿಲ್ದಾಣ ಮಾಡಿ. ಇಲ್ಲದಿದ್ದರೆ ನಮಗೆ ವಿಮಾನ ನಿಲ್ದಾಣವೇ ಬೇಡ. ನಾವು ಅಧಿಕಾರಕ್ಕೆ ಬಂದಾಗ ನಾವು ಮಾಡಿಕೊಳ್ತೀವಿ ಎಂದು ಜೆಡಿಎಸ್ ನಾಯಕರು ಕಾಮಗಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶಕ್ಕೆ ಪ್ರಧಾನಿಯನ್ನು ಕೊಟ್ಟ ಜಿಲ್ಲೆ ಹಾಸನ
ಹೌದು. ದೇಶಕ್ಕೆ ಪ್ರಧಾನಿಯನ್ನು ಕೊಟ್ಟ ಜಿಲ್ಲೆ ಹಾಸನ. ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿಗಳ ತವರು ಜಿಲ್ಲೆ ಇದಾಗಿದ್ದು, ಈ ಜಿಲ್ಲೆಗೆ ಒಂದು ವಿಮಾನ ನಿಲ್ದಾಣ ಆಗಬೇಕು ಅನ್ನುವುದು ಬರೊಬ್ಬರಿ ಐದು ದಶಕಗಳ ಕನಸು. ಇದಕ್ಕಾಗಿ 25 ವರ್ಷಗಳ ಹಿಂದೆಯೇ ಸುಮಾರು 536 ಎಕರೆ ಭೂಮಿಯನ್ನು ಹಾಸನ ಹೊರವಲಯದ ಬೂವನಹಳ್ಳಿ ಬಳಿ ಸ್ವಾಧೀನ ಮಾಡಿಕೊಳ್ಳಲಾಗಿದೆ.
ಆದರೆ ಬದಲಾದ ಸರ್ಕಾರಗಳ ಆದ್ಯತೆ ಕೊರತೆಯ ಕಾರಣ ಕಾಮಗಾರಿ ಆರಂಭವೇ ಆಗಲಿಲ್ಲ. ಹಾಸನದಲ್ಲಿ ಕೇವಲ ಪ್ರಯಾಣಿಕರ ವಿಮಾನ ನಿಲ್ದಾಣ ಮಾತ್ರವಲ್ಲ, ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಬೇಕಾದ ರೀತಿಯ ಕಾರ್ಗೋ ಮಾದರಿಯ ನಿಲ್ದಾಣ ಆಗಬೇಕು ಅನ್ನುವುದು ಜೆಡಿಎಸ್ ನಾಯಕರ ಪ್ರಯತ್ನವಾಗಿತ್ತು. ಅದಕ್ಕಾಗಿಯೇ ಈ ಹಿಂದೆ ಸ್ವಾಧೀನ ಆಗಿದ್ದ 536 ಎಕರೆ ಭೂಮಿ ಜೊತೆಗೆ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹೆಚ್ಚುವರಿಯಾಗಿ 219 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ಪ್ಲಾನ್ ಕೂಡ ಆಗಿತ್ತು.

ಉಡಾನ್ ಯೋಜನೆಯಂತೆ ಸಾಮಾನ್ಯ ವಿಮಾನ ನಿಲ್ದಾಣ
ಸಮ್ಮಿಶ್ರ ಸರ್ಕಾರ ಬದಲಾದ ಬಳಿಕ ಆ ಯೋಜನೆ ಸ್ಥಗಿತವಾಗಿದೆ. ಉಡಾನ್ ಯೋಜನೆಯಂತೆ ಸಾಮಾನ್ಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಅದಕ್ಕಾಗಿ ಪ್ರಥಮ ಹಂತದಲ್ಲಿ ಕೇವಲ 198 ಕೋಟಿ ಹಣ ಬಿಡುಗಡೆ ಮಾಡಿದೆ. ಹಾಸನ ಹೊರವಲಯದ ಬೂವನಹಳ್ಳಿಯಲ್ಲಿ ಈಗಾಗಲೇ ಸ್ವಾಧೀನ ಆಗಿದ್ದ ಭೂಮಿಯಲ್ಲಿ ರಾಜ್ಯ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ವತಿಯಿಂದ ಕಾಮಗಾರಿಯು ಆರಂಭವಾಗಿದೆ.
ಆದರೆ ಯಾವುದೇ ಕಾರಣಕ್ಕೂ ಈ ಕಾಮಗಾರಿ ನಡೆಯಬಾರದು ಎಂದು ಸಿಎಂ, ಕೇಂದ್ರ ವಿಮಾನಯಾನ ಸಚಿವರು, ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಎಚ್.ಡಿ. ರೇವಣ್ಣ ಮತ್ತು ಜೆಡಿಎಸ್ ನಾಯಕರು, ಮಾಡುವುದಿದ್ದರೆ ಮೂಲ ಯೋಜನೆಯಂತೆ ಕಾಮಗಾರಿ ಮಾಡಿ ಅಥವಾ ಶಿವಮೊಗ್ಗ ಮಾದರಿಯ ವಿಮಾನ ನಿಲ್ದಾಣ ಮಾಡಿ, ಇಲ್ಲವೇ ಕಾಮಗಾರಿ ನಿಲ್ಲಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.

5 ಕಿಲೋಮೀಟರ್ ದೂರದಲ್ಲಿ ವಿಮಾನ ನಿಲ್ದಾಣ
ಹಾಸನ ನಗರದಿಂದ ಕೇವಲ 5 ಕಿಲೋಮೀಟರ್ ದೂರದಲ್ಲಿ ವಿಮಾನ ನಿಲ್ದಾಣವಾಗಲಿದ್ದು, ಪ್ರಯಾಣಿಕರ ಜೊತೆಗೆ ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆಯಾದ ಆಲೂಗಡ್ಡೆ, ಕಾಫಿಯನ್ನು ವಿದೇಶಕ್ಕೆ ನೇರವಾಗಿ ರಫ್ತು ಮಾಡುವ ರೀತಿಯ ವಿಮಾನ ನಿಲ್ದಾಣ ಇಲ್ಲಿ ಆಗಬೇಕು ಅನ್ನುವುದು ಜೆಡಿಎಸ್ ಸರ್ಕಾರದ ಪ್ಲಾನ್ ಆಗಿತ್ತು.
ಹಾಸನದಿಂದ ಕೇವಲ ಮೂರು ಗಂಟೆ ಪ್ರಯಾಣದ ಬೆಂಗಳೂರಿನಲ್ಲಿ ಹಾಗೂ ಮಂಗಳೂರಿನಲ್ಲಿ ಅಂತರಾಷ್ಟ್ರೀಯ ವಿಮಾಣ ನಿಲ್ದಾಣ ಇದೆ. ಇನ್ನೊಂದೆಡೆ ಎರಡು ಗಂಟೆ ಪ್ರಯಾಣದ ಮೈಸೂರಿನಲ್ಲೂ ವಿಮಾಣ ನಿಲ್ದಾಣ ಇದೆ. ಹಾಗಾಗಿ ಹಾಸನಕ್ಕೆ ಪ್ರಯಾಣಿಕರ ವಿಮಾಣ ನಿಲ್ದಾಣ ಸಾಕು ಅನ್ನುವುದು ಬಿಜೆಪಿ ನಾಯಕರ ಅಭಿಪ್ರಾಯವಾದ್ದರಿಂದ ಸರ್ಕಾರ ಉದ್ದೇಶಿತ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ನಾಮಕಾವಸ್ತೆಯಾಗಿ ವಿಮಾನ ನಿಲ್ದಾಣ ಕಾಮಗಾರಿ
ಈಗಾಗಲೇ ವಿಮಾನ ನಿಲ್ದಾಣ ಕಾಮಗಾರಿ ಆರಂಭಗೊಂಡಿದ್ದು, ರನ್ವೇ ನಿರ್ಮಾಣಕ್ಕೆ ಮಾರ್ಕಿಂಗ್ ಕಾರ್ಯ ನಡೆಯುತ್ತಿದೆ. ವಿಮಾಣ ನಿಲ್ದಾಣಕ್ಕೆ ತೊಡಕಾಗಿದ್ದ ಹೈಟೆನ್ಷನ್ ಲೈನ್ ಸ್ಥಳಾಂತರ ಮಾಡಲಾಗಿದೆ. ಕಾಮಗಾರಿಗೆ ಬೇಕಾದ ಯಂತ್ರೋಪಕರಣಗಳು, ತಾತ್ಕಾಲಿಕ ಕಟ್ಟಡಗಳು ಎಲ್ಲವೂ ಅಲ್ಲಿ ತಲೆ ಎತ್ತಿವೆ. ಇಂತಹ ಹೊಸ್ತಿಲಲ್ಲಿ ಇದೀಗ ಮೂಲ ಯೋಜನೆಯಂತೆ ಕಾಮಗಾರಿ ಮಾಡಬೇಕು ಎಂದು ಜೆಡಿಎಸ್ ನಾಯಕರು ಪಟ್ಟು ಹಿಡಿದಿದ್ದು, ಇತ್ತ ಜಿಲ್ಲಾಡಳಿತ ಸರ್ಕಾರದ ಯೋಜನೆಯಂತೆ ಕಾಮಗಾರಿ ಆರಂಭವಾಗಿದೆ. ಯೋಜನೆಯಂತೆ ಶೀಘ್ರವಾಗಿ ಕಾಮಗಾರಿ ಮುಗಿಸುವ ಬಗ್ಗೆ ಕ್ರಮ ವಹಿಸುವುದಾಗಿ ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದ್ದಾರೆ.
ಒಟ್ಟಿನಲ್ಲಿ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜೀವ ಬಂತು ಎನ್ನುವಷ್ಟರಲ್ಲಿ ಸರ್ಕಾರ ಬದಲಾಗಿ ಹೋಯಿತು. ಬಿಜೆಪಿ ಸರ್ಕಾರ ಬಂದ ಮೇಲೂ ಮಾಜಿ ಪ್ರಧಾನಿ ದೇವೇಗೌಡರ ಮನವಿ ಮೇರೆಗೆ ಕಾಮಗಾರಿ ಮುಂದುವರಿಸುತ್ತೇವೆ ಎಂದಿದ್ದ ಯಡಿಯೂರಪ್ಪ ಸರ್ಕಾರ, ಇದೀಗ ನಾಮಕಾವಸ್ತೆಯಾಗಿ ವಿಮಾನ ನಿಲ್ದಾಣ ಕಾಮಗಾರಿ ಪ್ರಾರಂಭಿಸಿರುವುದು ಹಾನ ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.
Recommended Video












Click it and Unblock the Notifications