ಮತ್ತೆ ಮುಖ್ಯಮಂತ್ರಿಯಾಗ್ತೀನಿ : ಸಿದ್ದರಾಮಯ್ಯ ಮಾತಿನ ಒಳಾರ್ಥವೇನು?
Recommended Video
ಹಾಸನ, ಆಗಸ್ಟ್ 25: "ನಾನು ಮತ್ತೆ ಕರ್ನಾಟಕದ ಮುಖ್ಯಮಂತ್ರಿಯಾಗ್ತೀನಿ" ಎಂದು ನಿನ್ನೆಯಷ್ಟೇ ಹೊಸ ಬಾಂಬ್ ಸಿಡಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತಿನ ಒಳಾರ್ಥವೇನು?
ಇಷ್ಟು ದಿನ ಸುಮ್ಮನಿದ್ದ ಸಿದ್ದರಾಮಯ್ಯ ಮತ್ತೊಮ್ಮೆ ಸಮ್ಮಿಶ್ರ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿರುವುದಕ್ಕೆ ಈ ಹೇಳಿಕೆ ಸೂಚನೆಯಾ? ನಾನು ಮತ್ತೊಮ್ಮೆ ಮುಖ್ಯಮಂತ್ರಿಯಾಗಬಾರದು ಎಂದು ಷಡ್ಯಂತ್ರ ನಡೆಸಿದರು ಎಂಬ ಸಿದ್ದರಾಮಯ್ಯ ಅವರ ಮಾತು ಯಾರನ್ನು ಗುರಿಯಾಗಿಸಿದೆ? ಷಡ್ಯಂತ್ರ ಮಾಡಿದ್ದು ಯಾರು? ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದು ಯಾರಿಗೆ ಇಷ್ಟವಿರಲಿಲ್ಲ?
ಮತ್ತೆ ಮುಖ್ಯಮಂತ್ರಿಯಾಗುತ್ತೇನೆಂದು ಹೊಸ ಬಾಂಬ್ ಸಿಡಿಸಿದ ಸಿದ್ದರಾಮಯ್ಯ
ಹಾಸನ ಜಿಲ್ಲೆಯ ಹೊಳೇನರಸೀಪುರದ ಹಾಡ್ಯಗ್ರಾಮದಲ್ಲಿ ನಿನ್ನೆ(ಆ.24) ಮಾತನಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, 'ನನಗೆ ಜನಾಶೀರ್ವಾದವಿದೆ. ಹೀಗಾಗಿ ನಾನು ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ' ಎಂದಿದ್ದರು. ಅವರ ಈ ಮಾತು ರಾಜಕೀಯ ಒಲಯದಲ್ಲಿ ಸಂಚಲನ ಮೂಡಿಸಿದೆ.
ಲೋಕಸಭೆ ಚುನಾವಣೆ ಇನ್ನು ಕೆಲವೇ ತಿಂಗಳು ಬಾಕಿಯಿರುವಾಗ ಸಿದ್ದರಾಮಯ್ಯ ಅವರು ಈ ರೀತಿ ಹೇಳಿರುವುದು ನಾನಾ ಮಾತುಗಳಿಗೆ, ಊಹಾಪೋಹಗಳಿಗೆ ಆಹಾರವಾಗಿದೆ. ಜೊತೆಗೆ, ನಾನು ಮತ್ತೆ ಮುಖ್ಯಮಂತ್ರಿಯಾಗದಂತೆ ಕೆಲವರು ಷಡ್ಯಂತ್ರ ರಚಿಸುತ್ತಿದ್ದಾರೆ ಎಂದೂ ಹೇಳಿರುವುದು ರಾಜಕೀಯ ವಲಯದಲ್ಲಿ ರೋಚಕತೆ ಮೂಡಿಸಿದೆ.
ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯ?
ಕಳೆದ ಮೇ ತಿಂಗಳಿನಲ್ಲಿ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸಿದ್ದರಾಮಯ್ಯ ರಾಜಕೀಯದಿಂದ ಕೊಂಚ ದೂರವೇ ಉಳಿದರು. 'ಜೆಡಿಎಸ್ ಗೆ ಸರ್ಕಾರ ರಚಿಸಲು ನಾವು ಬೇಷರತ್ ಬೆಂಬಲ ನೀಡುತ್ತೇವೆ' ಎಂದು ಹೈಕಮಾಂಡ್ ಸಿದ್ದರಾಮಯ್ಯ ಬಾಯಲ್ಲಿ ಹೇಳಿಸಿತ್ತು. ಕೈಕಟ್ಟಿನಿಂತು ಆ ಮಾತನ್ನು ಉಲಿದಿದ್ದ ಸಿದ್ದರಾಮಯ್ಯ, ತಮ್ಮ ರಾಜಕೀಯ ವೈರಿ ದೇವೇಗೌಡರ ಕುಟುಂಬದೊಂದಿಗೆ ಹೈಕಮಾಂಡ್ ಒತ್ತಾಯಕ್ಕಾಗಿ ಬಲವಂತದ ರಾಜಿ ಮಾಡಿಕೊಂಡರು. ನಂತರ ನಡೆದಿದ್ದೆಲ್ಲ ಎಲ್ಲರಿಗೂ ಗೊತ್ತಿರುವುದೇ. ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂತು. ಸಿದ್ದರಾಮಯ್ಯ ಆಪ್ತ ಸಚಿವರನ್ನು ಸಚಿವ ಸಂಪುಟದಿಂದ ದೂರವೇ ಇಡಲಾಯ್ತು. ಬಂಡಾಯದ ಬಾವುಟ ಹಾರಿತ್ತು. ನಂತರ ತಣ್ಣಗಾಗಿತ್ತು. ಇದೀಗ ಮತ್ತೊಮ್ಮೆ ಬಂಡಾಯದ ಬಿಸಿ ಏರುವ ಎಲ್ಲಾ ಸೂಚನೆ ಕಾಣಿಸುತ್ತಿದೆ.
ಷಡ್ಯಂತ್ರ ನಡೆಸಿದ್ದು ಯಾರು?
"ನಾನು ಮತ್ತೆ ಮುಖ್ಯಮಂತ್ರಿಯಾಗುತ್ತೇನೆ" ಎಂದಷ್ಟೇ ಸಿದ್ದರಾಮಯ್ಯ ಹೇಳಿದ್ದರೆ ಅದಕ್ಕೆ ತಲೆಕೆಡಿಸಿಕೊಳ್ಳುವ ಅಗತ್ಯವಿರಲಿಲ್ಲ. ಆದರೆ 'ನಾನು ಮುಖ್ಯಮಂತ್ರಿಯಾಗದಂತೆ ಷಡ್ಯಂತ್ರ ನಡೆಯಿತು' ಎಂಬ ಮಾತು ಮಾತ್ರ ಯೋಚಿಸಲೇಬೇಕಾದ್ದು. ಅಷ್ಟಕ್ಕೂ ಸಿದ್ದರಾಮಯ್ಯ ಅವಅರ ವಿರುದ್ಧ ಷಡ್ಯಂತ್ರ ನಡೆಸಿದ್ದು ಯಾರು? ಬಿಜೆಪಿಯವರಾ? ಜೆಡಿಎಸ್ ನವರಾ ಅಥವಾ ಕಾಂಗ್ರೆಸ್ಸಿನಲ್ಲೇ ಸಿದ್ದರಾಮಯ್ಯ ಅವರನ್ನು ಕಂಡರೆ ಆಗದವರಾ? ಬಿಜೆಪಿಯವರೇ ಆಗಿದ್ದರೆ ಅದನ್ನು ಸಿದ್ದರಾಮಯ್ಯ ನೇರವಾಗಿಯೇ ಹೇಳುತ್ತಿದ್ದರು!
'ಆಗಲಿ, ಸಂತೋಷ' ಎಂದ ಎಚ್ಡಿಕೆ
ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗುತ್ತಾರಂತೆ ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, 'ಆಗಲಿ, ಸಂತೋಷ' ಎಂದಷ್ಟೇ ಪ್ರತಿಕ್ರಿಯೆ ನೀಡಿ ಮುಖ ತಿರುಗಿಸಿ ಹೊರಟು ಹೋದರು! ಅವರ ಪ್ರತಿಕ್ರಿಯೆಯಿಂದಾಗಿ ಸಿದ್ದರಾಮಯ್ಯ ಅವರ ಮಾತು ಎಚ್ ಡಿ ಕುಮಾರಸ್ವಾಮಿ ಅವರಿಗೆ ಅಸಮಾಧಾನ ಉಂಟುಮಾಡಿದೆ ಎಂಬುದಂತೂ ತಿಳಿಯುವಂತಿತ್ತು!
ಪತ್ರ ವ್ಯವಹಾರವಾಯ್ತು, ಈಗ ನೇರದಾಳಿ!
ಇಷ್ಟು ದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಪತ್ರ ವ್ಯವಹಾರ ನಡೆಸಿ ತಮ್ಮ ಅಸಮಾಧಾನ ಹೊರಹಾಕುತ್ತಿದ್ದ ಸಿದ್ದರಾಮಯ್ಯ, ಇದೀಗ ನೇರ ದಾಳಿಯನ್ನೇ ಆರಂಭಿಸಿದ್ದಾರೆ. ಸಿದ್ದರಾಮಯ್ಯ ಅವರ ಮಾತಿನಿಂದ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ರೀತಿಯ ಧಕ್ಕೆಯಾಗಿಲ್ಲ. ಸಮ್ಮಿಶ್ರ ಸರ್ಕಾರ ಸುಸ್ಥಿತಿಯಲ್ಲೇ ಇದೆ ಎಂದು ನಾಯಕರು ಹೇಳಿದರೂ ಅಲ್ಲಲ್ಲಿ ಬಿರುಕು ಕಾಣಿಸುತ್ತಿರುವುದಂತೂ ಸ್ಪಷ್ಟ.