ಮಕ್ಕಳನ್ನು ನೋಡಲು ಬಿಡದ ಹೆಂಡತಿ: ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಇಟ್ಟ ಪತಿ
ಹಾಸನ, ನವೆಂಬರ್ 19: ಮಕ್ಕಳನ್ನು ನೋಡಲು ಬಿಡದಿದ್ದಕ್ಕೆ ಹೆಂಡತಿ ಮಕ್ಕಳನ್ನೂ ಸೇರಿಸಿ ಪಾಪಿ ಪತಿ ಮನೆಗೆ ಬೆಂಕಿ ಹಚ್ಚಿದ ಘಟನೆ ಹಾಸನ ತಾಲೂಕಿನ ದೊಡ್ಡಬೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ತಾಯಿ ಗೀತಾ ಹಾಗೂ ಮಕ್ಕಳಾದ ರಂತನ್ (7) ಹಾಗೂ ನಂದನ ಗಂಭೀರ ಗಾಯಗೊಂಡಿದ್ದಾರೆ. ಅಂಕನಹಳ್ಳಿಯ ರಂಗಸ್ವಾಮಿ ಮನೆಗೆ ಬೆಂಕಿ ಹಚ್ಚಿದ ಆರೋಪಿ ಪತಿ ಎಂದು ಗುರುತಿಸಲಾಗಿದೆ.
ಅಂಕನಹಳ್ಳಿಯ ರಂಗಸ್ವಾಮಿ ಮತ್ತು ಗೀತಾ ದಂಪತಿ ನಡುವೆ ಜಮೀನು ವಿಚಾರವಾಗಿ ಪದೇಪದೇ ಜಗಳ ನಡೆಯುತ್ತಿತ್ತು.ಈ ವಿಚಾರವಾಗಿ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಜಮೀನು ಜಗಳದಿಂದ ಸಂಸಾರದಲ್ಲಿ ಗಲಾಟೆ ಹೆಚ್ಚಾಗಿತ್ತು. ಹೀಗಾಗಿ ಹೊಂದಾಣಿಕೆ ಇಲ್ಲದ ಕಾರಣ ಕಳೆದ ನಾಲ್ಕು ತಿಂಗಳಿನಿಂದ ಗೀತಾ ಪತಿಯಿಂದ ದೂರವಾಗಿದ್ದು, ತನ್ನ ಮಕ್ಕಳೊಂದಿಗೆ ದೊಡ್ಡಬೀಕನಹಳ್ಳಿ ಗ್ರಾಮದಲ್ಲಿ ವಾಸವಿದ್ದರು.
ಮಕ್ಕಳು ಗೀತಾ ಜೊತೆ ಇರುವ ಹಿನ್ನೆಲೆಯಲ್ಲಿ ಮಕ್ಕಳನ್ನು ನೋಡಲೆಂದು ರಂಗಸ್ವಾಮಿ ಆಗಾಗ ದೊಡ್ಡಬೀಕನಹಳ್ಳಿ ಗ್ರಾಮಕ್ಕೆ ಬರುತ್ತಿದ್ದನು. ಮಕ್ಕಳ ಜೊತೆ ಮಾತನಾಡಿ ಸಮಯ ಕಳೆದು ಹೋಗುತ್ತಿದ್ದನು. ನಾಲ್ಕು ತಿಂಗಳಿನಿಂದ ಹೀಗೆ ನಡೆಯುತಿತ್ತು. ಅದೇ ರೀತಿ ನಿನ್ನೆ ಕೂಡ ರಂಗಸ್ವಾಮಿ ಮಕ್ಕಳನ್ನು ನೋಡಲು ದೊಡ್ಡಬೀಕನಹಳ್ಳಿ ಗ್ರಾಮದ ಮನೆಗೆ ಬಂದಿದ್ದಾನೆ. ಜಮೀನು ವಿಚಾರ ಇತ್ಯರ್ಥವಾಗದ ಕಾರಣ ಪತಿಯ ಮೇಲೆ ಕೋಪಗೊಂಡಿದ್ದ ಪತ್ನಿ ಗೀತಾ ಮಕ್ಕಳನ್ನು ನೋಡಲು ಅವಕಾಶ ಮಾಡಿಕೊಟ್ಟಿರಲಿಲ್ಲ. ಈ ಕಾರಣಕ್ಕೆ ಕೋಪಗೊಂಡ ರಂಗಸ್ವಾಮಿ ನಿನ್ನೆ ತಡರಾತ್ರಿ ಅಮಾನವೀಯ ಕೃತ್ಯ ಎಸಗಿದ್ದಾನೆ.

ಪತ್ನಿ ಗೀತಾ ಮೇಲೆ ತೀವ್ರ ಕೋಪಗೊಂಡಿದ್ದ ರಂಗಸ್ವಾಮಿ ಸ್ಥಳೀಯ ಪೆಟ್ರೋಲ್ ಬಂಕ್ಗೆ ತೆರಳಿ ಹತ್ತಾರು ಲೀಟರ್ ಪೆಟ್ರೋಲ್ ಖರೀದಿಸಿದ್ದಾನೆ. ಬಳಿಕ ದೊಡ್ಡಬೀಕನಹಳ್ಳಿಯಲ್ಲಿರುವ ಪತ್ನಿ ಮತ್ತು ಮಕ್ಕಳು ನಿದ್ರೆಗೆ ಜಾರಿದ್ದ ವೇಳೆ ಮಧ್ಯರಾತ್ರಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ನೋಡ ನೋಡುತ್ತಿದ್ದಂತೆ ಮನೆ ಹೊತ್ತಿ ಉರಿದಿದೆ.
ಬೆಂಕಿಯ ಮಧ್ಯೆ ಸಿಲುಕಿದ್ದ ಗೀತಾ ಹಾಗೂ ಮಕ್ಕಳ ಸಹಾಯಕ್ಕೆ ಸ್ಥಳೀಯರು ಕೂಡಲೇ ಧಾವಿಸಿದ್ದಾರೆ. ಸ್ಥಳೀಯರ ನೆರವಿನಿಂದ ಮೂವರನ್ನು ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ. ಘಟನೆಯಲ್ಲಿ ತಾಯಿ ಹಾಗೂ ಮಕ್ಕಳಿಗೆ ಕೈ ಹಾಗೂ ಕಾಲಿನ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನು ಪೆಟ್ರೋಲ್ನಿಂದ ಮನೆ ಹೊತ್ತಿ ಉರಿದ ಪರಿಣಾಮ ಮನೆಯಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿದೆ.

ಘಟನೆ ಸಂಬಂಧ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರಂಗಸ್ವಾಮಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.












Click it and Unblock the Notifications