ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಅ.13ರಿಂದ ಚಾಲನೆ- ಸಿದ್ಧತೆ ಹೇಗಿದೆ? ಇಲ್ಲಿದೆ ಮಾಹಿತಿ
ಹಾಸನ, ಅಕ್ಟೋಬರ್, 12: ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬೆ ತಾಯಿ ಜಾತ್ರಾ ಮಹೋತ್ಸವಕ್ಕೆ ನಾಳೆ ವಿದ್ಯುಕ್ತ ಚಾಲನೆ ದೊರೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಪುರೋಹಿತರು ಶಾಸ್ತ್ರೋಕ್ತವಾಗಿ ಗರ್ಭಗುಡಿಯ ಬಾಗಿಲನ್ನು ತೆರೆಯಲಿದ್ದಾರೆ.
ಈಗಾಗಲೇ ಜಿಲ್ಲಾಡಳಿತ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು, ಇಂದು ಅಂತಿಮ ಹಂತದ ಸಿದ್ಧತೆಗಳನ್ನು ನಡೆಸಲಾಯಿತು. ನಾಳೆಯಿಂದ ಅಕ್ಟೋಬರ್ 27 ರವರೆಗೆ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಿದೆ. ಮೊದಲ ಹಾಗೂ ಕೊನೆಯ ದಿನ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೊರೊನಾ ನಂತರದ ಜಾತ್ರಾ ಮಹೋತ್ಸವ ನೆರವೇರುತ್ತಿರುವುದರಿಂದ ಭಕ್ತರ ದಂಡು ಹರಿದುಬರುವ ನಿರೀಕ್ಷೆ ಇದೆ.
ಬೇಲೂರು; ಆಧಾರ್ ಕಾರ್ಡ್ ಮಾಡಿಕೊಡಲು ಬೇಕಾಬಿಟ್ಟಿ ಹಣ ವಸೂಲಿ, ಸಾರ್ವಜನಿಕರ ಆಕ್ರೋ
ವರ್ಷಕ್ಕೆ ಒಮ್ಮೆ ದರ್ಶನ ನೀಡುವ ಹಾಸನಾಂಬೆಯ ಗರ್ಭಗುಡಿಯ ಜಾತ್ರಾ ಮಹೋತ್ಸವ ನಾಳೆಯಿಂದ ಅಕ್ಟೋಬರ್ 27 ರವರೆಗೆ ಅದ್ಧೂರಿಯಾಗಿ ನಡೆಯಲಿದೆ. ಪ್ರತೀ ವರ್ಷವೂ ಆಶ್ವೀಜ ಮಾಸದ ಹುಣ್ಣಿಮೆ ನಂತರ ಬರುವ ಮೊದಲ ಗುರುವಾರದಂದು ಹಾಸನಾಂಬೆಯ ಗರ್ಭಗುಡಿಯ ಬಾಗಿಲು ತೆರೆಯಲಾಗುತ್ತದೆ. ಅದರಂತೆಯೇ ನಾಳೆ ಮಧ್ಯಾಹ್ನ 12.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಜಿಲ್ಲಾಧಿಕಾರಿ ಎಂಎಸ್ ಅರ್ಚನಾ ಸೇರಿದಂತೆ ಅಧಿಕಾರಿಗಳ ನೇತೃತ್ವದಲ್ಲಿ ಪುರೋಹಿತರು ಶಾಸ್ತ್ರೋಕ್ತವಾಗಿ ಗರ್ಭಗುಡಿಯ ಬಾಗಿಲು ತೆರೆಯಲಿದ್ದಾರೆ.
2 ದಿನ ಸಾರ್ವಜನಿಕರಿಗೆ ನಿರ್ಬಂಧ
ಅರಸು ಮನೆತನದವರು ದೇವಾಲಯದ ಮುಂಭಾಗ ಬಾಳೆಕಂಬ ಕಡಿಯುತ್ತಿದ್ದಂತೆ ಗರ್ಭಗುಡಿಯ ಬಾಗಿಲು ತೆಗೆಯಲಾಗುತ್ತದೆ. ನಾಳೆ ಮತ್ತು ಅಂತಿಮ ದಿನದಂದು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಈ ಬಾರಿ ಒಂದು ದಿನ ಗ್ರಹಣ ಬಂದಿದ್ದು, ಆ ದಿನವೂ ಕೂಡಾ ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ. ಉಳಿದಂತೆ ಎಲ್ಲಾ ದಿನಗಳು ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಕೊರೊನಾ ನಂತರದ ಜಾತ್ರಾ ಮಹೋತ್ಸವ ಆದ್ದರಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಕಿಕ್ಕಿರಿದು ಬರುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ಆಗಮನ ಸಾಧ್ಯತೆ
ಈ ಬಾರಿ ಅದ್ದೂರಿ ಜಾತ್ರಾ ಮಹೋತ್ಸವ ನಡೆಸಲು ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದ್ದು, ಪುಷ್ಪಾಲಂಕಾರ, ವಿದ್ಯುತ್ ಅಲಂಕಾರ ಸೇರಿದಂತೆ ಎಲ್ಲಾ ರೀತಿಯ ತಯಾರಿ ಭರದಿಂದ ಸಾಗಿದೆ. ಇನ್ನು ಭಕ್ತರು ಸರತಿ ಸಾಲಿನಲ್ಲಿ ಬಂದು ದೇವಿ ದರ್ಶನ ಪಡೆಯುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಸನಾಂಬ ದೇವಾಲಯದ ಮುಂಭಾಗ ಮುಖ್ಯದ್ವಾರ ಹಾಗೂ ವಿಶೇಷವಾಗಿ ಸ್ವಾಗತ ಕಮಾನನ್ನ ಹಾಕಿದ್ದಾರೆ.
ಗಮನ ಸೆಳೆಯಲಿರುವ ದೀಪಾಲಂಕಾರ
ಅಲ್ಲದೇ ಮೈಸೂರು ದಸರಾ ಮಾದರಿಯಲ್ಲಿಯೇ ನಗರದ ತುಂಬಾ ವಿದ್ಯುತ್ ದೀಪಾಲಂಕಾರಗಳನ್ನು ಮಾಡಲಾಗಿದೆ. ಹಾಸನಾಂಬ ಗರ್ಭಗುಡಿಯ ಮುಂಭಾಗ ವಿವಿಧ ತರಕಾರಿಗಳಲ್ಲಿ ಸಿಂಗರಿಸುತ್ತಿದ್ದು, ಹಾಸನನಾಂಬ, ಸಿದ್ದೇಶ್ವರ ಹಾಗೂ ದೇವಾಲಯದ ಮುಂಭಾಗದ ಸ್ವಾಗತ ಕಮಾನು ಬಳಿ ವಿವಿಧ ಹೂಗಳನ್ನು ಬಳಿಸಿ ವಿಶೇಷವಾದ ವರ್ಣರಂಜಿತ ಅಲಂಕಾರವನ್ನು ಮಾಡಲಾಗುತ್ತಿದೆ.
ವಿಶೇಷ ದರ್ಶನಕ್ಕೆ ಟಿಕೆಟ್ ಸೌಲಭ್ಯ
ಸಾರ್ವಜನಿಕರಿಗೆ ಉಚಿತವಾಗಿ ದರ್ಶನ ಪಡೆಯಲು ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೇ ವಿಶೇಷ ದರ್ಶನಕ್ಕೆ 1000 ಹಾಗೂ 300 ರೂಪಾಯಿ ಟಿಕೆಟ್ ಮಾಡಲಾಗಿದೆ. ಇವುಗಳ ಹೊರತಾಗಿ ಬಂದ ಭಕ್ತರಿಗೆ ಶೌಚಾಲಯ, ನೀರು, ಪಾರ್ಕಿಂಗ್ ಸೇರಿದಂತೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾಡಳಿತ ಹೇಳಿದೆ.