ಭರ್ತಿಯಾಗುತ್ತಿದೆ ಹೇಮಾವತಿ ಒಡಲು, ಶೆಟ್ಟಿಹಳ್ಳಿ ಚರ್ಚ್ ಜಲಾವೃತ
ಹಾಸನ, ಜುಲೈ 08 : ಹಾಸನದ ಹೇಮಾವತಿ ಜಲಾಶಯದ ನೀರಿನ ಮಟ್ಟ ಏರಿಕೆಯಾಗುತ್ತಿದೆ. ವರ್ಷಗಳ ಬಳಿಕ ಜಲಾಶಯ ಭರ್ತಿಯಾಗುತ್ತಿದ್ದು, ಶೆಟ್ಟಿಹಳ್ಳಿಯ ಚರ್ಚ್ ನೀರಿನಲ್ಲಿ ಮುಳುಗಿದೆ.
ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2922 ಅಡಿಗಳು. ಸದ್ಯ ಜಲಾಶಯದಲ್ಲಿ 2907.95 ಅಡಿ ನೀರಿನ ಸಂಗ್ರಹವಿದೆ. ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, 4708 ಕ್ಯುಸೆಕ್ ಒಳ ಹರಿವು ಇದೆ.
4 ವರ್ಷಗಳ ಬಳಿಕ ಹೇಮಾವತಿಯ ಒಡಲು ಭರ್ತಿ
ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದಂತೆ ಪ್ರಸಿದ್ಧ ಪ್ರವಾಸಿ ಸ್ಥಳ ಶೆಟ್ಟಿಹಳ್ಳಿ ಚರ್ಚ್ ನೀರಿನಲ್ಲಿ ಮುಳುಗಿದೆ. ಇತಿಹಾಸಿನ ಹಿನ್ನಲೆ ಹೊಂದಿರುವ ಚರ್ಚ್ನ ಕಟ್ಟಡ ಹೇಮಾವತಿ ಒಡಲು ತುಂಬಿದಾಗಲೆಲ್ಲ ಅದರಲ್ಲಿ ಮುಳುಗುತ್ತದೆ.
ಸ್ವಾತಂತ್ರ ಪೂರ್ವದಲ್ಲಿ ಮೈಸೂರು, ಹಾಸನ ಭಾಗದಲ್ಲಿ ವಾಸವಾಗಿದ್ದ ಕ್ರೈಸ್ತ ಧರ್ಮೀಯರ ಹೆಮ್ಮೆಯ ಕೇಂದ್ರವಾಗಿದ್ದ ಚರ್ಚ್ ಪೆಳೆಯುಳಿಕೆಯಂತೆ ತನ್ನ ಕುರುಹನ್ನು ಉಳಿಸಿಕೊಂಡಿದೆ. ನೂರಾರು ಪ್ರವಾಸಿಗರ ನೆಚ್ಚಿನ ತಾಣವಾಗಿದೆ.
ಆಲೂರು, ಬೇಲೂರು ಮುಂತಾದ ಕಡೆಗಳಲ್ಲಿ ನೆಲೆಸಿದ್ದ ಶ್ರೀಮಂತ ಬ್ರಿಟಿಷರಿಗಾಗಿ 1860ರಲ್ಲಿ ಫ್ರೆಂಚ್ ಪಾದ್ರಿಗಳು ಈ ಚರ್ಚ್ ನಿರ್ಮಿಸಿದ್ದಾರೆ ಎನ್ನುತ್ತದೆ ಇತಿಹಾಸ. ಸುಣ್ಣ-ಮರಳಿನ ಗಾರೆ ಮೂಲಕ ಗೋಥಿಕ್ ವಾಸ್ತುಶಿಲ್ಪದ ಮಾದರಿಯಲ್ಲಿ ಈ ಚರ್ಚ್ ಅನ್ನು ನಿರ್ಮಿಸಲಾಗಿದೆ.
ಚಿತ್ರಗಳು : ಹಾರಂಗಿಯಿಂದ ಹಾಲ್ನೊರೆಯುಕ್ಕಿಸುತ್ತಾ ಹರಿದ ನೀರು
1960ರಲ್ಲಿ ಹಾಸನದ ಗೊರೂರು ಗ್ರಾಮದ ಬಳಿ ಹೇಮಾವತಿ ನದಿಗೆ ಜಲಾಶಯ ನಿರ್ಮಿಸುವ ಕಾರ್ಯ ಆರಂಭವಾಯಿತು. ಜಲಾಶಯ ಪೂರ್ಣಗೊಂಡ ಬಳಿಕ ಶೆಟ್ಟಿಹಳ್ಳಿ ಊರಿನ ಜೊತೆ ಚರ್ಚ್ ಸಹ ನೀರಿನಲ್ಲಿ ಮುಳುಗಿತು.
ಸುಮಾರು ಐದೂವರೆ ದಶಕದಿಂದ ಶೆಟ್ಟಿಹಳ್ಳಿ ಚರ್ಚ್ ಹೇಮಾವತಿ ಒಡಲು ತುಂಬಿದಾಗ ಮುಳುಗುತ್ತದೆ. ಬೇಸಿಗೆಯಲ್ಲಿ ನೀರು ಕಡಿಮೆಯಾದಾಗ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. 4 ವರ್ಷಗಳ ಬಳಿಕ ಹೇಮಾವತಿ ಜಲಾಶಯ ತುಂಬುತ್ತಿದ್ದು, ಚರ್ಚ್ ಜಲಾವೃತಾಗಿದೆ.