ರೀ, ಕರೆದರೂ ಏಕೆ ಬರಲಿಲ್ಲ?':ಬಿಜೆಪಿ ಶಾಸಕನಿಗೆ ರೇವಣ್ಣ ತರಾಟೆ
Recommended Video

ಹಾಸನ, ಅಕ್ಟೋಬರ್ 2: ಜಿಲ್ಲಾ ಕೇಂದ್ರದಲ್ಲಿ ನಡೆದ ಬಹುಕೋಟಿ ವೆಚ್ಚದ ಕಾಮಗಾರಿಗಳ ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದ ಬಿಜೆಪಿ ಶಾಸಕ ಪ್ರೀತಂ ಗೌಡ ಅವರನ್ನು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ತರಾಟೆಗೆ ತೆಗೆದುಕೊಂಡ ಪ್ರಸಂಗ ಮಂಗಳವಾರ ನಡೆಯಿತು.
ಸೆ.23ರಂದು ಹಾಸನ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 1650 ಕೋಟಿ ರೂ ಅಂದಾಜು ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭಾಗವಹಿಸಿದ್ದರು. ಆದರೆ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಿದ್ದ ಸ್ಥಳೀಯ ಶಾಸಕ ಪ್ರೀತಂ ಗೌಡ ಅತ್ತ ಸುಳಿದಿರಲಿಲ್ಲ.
ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳವಾರ ಹಾಸನಕ್ಕೆ ತೆರಳಿದ್ದ ಎಚ್.ಡಿ. ರೇವಣ್ಣ, ಅಲ್ಲಿ ಭೇಟಿಯಾದ ಪ್ರೀತಂ ಗೌಡ ಅವರ ವಿರುದ್ಧ ಮೆದುವಾಗಿಯೇ ರೇಗಿದರು.
ಆಮೇಲೆ ಇಬ್ಬರೂ ಪರಸ್ಪರ ಹಸ್ತಲಾಘವ ಮಾಡಿಕೊಂಡು ನಗುತ್ತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ನಾನೇ ಫೋನ್ ಮಾಡಿದ್ದೇನೆ
'ರೀ ಕಾರ್ಯಕ್ರಮಕ್ಕೆ ಏಕೆ ಬರಲಿಲ್ಲ? ನಾನೇ ಕರೆ ಖುದ್ದಾಗಿ ಫೋನ್ ಮಾಡಿದ್ದೇನೆ. ಆಹ್ವಾನ ಪತ್ರಿಕೆ ಸಹ ಕಳಿಸಿದ್ದೇನೆ' ಎಂದು ರೇವಣ್ಣ, ಪ್ರೀತಂ ಗೌಡ ಅವರನ್ನು ಪ್ರಶ್ನಿಸಿದರು.
ಬಳಿಕ ಎದುರಿಗಿದ್ದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಉದ್ದೇಶಿಸಿ, 'ನಾನೇ ಕರೆದಿದ್ದೇನೆ. ಆದರೂ ಬಂದಿಲ್ಲ ನೋಡಿ' ಎಂದು ಮತ್ತೆ ಹೇಳಿದರು.

ಕರೆದಿದ್ದು ಬೇರೆಯದ್ದಕ್ಕೆ
ರೇವಣ್ಣ ತರಾಟೆಗೆ ತೆಗೆದುಕೊಂಡಾಗ ನಗುತ್ತಲೇ ಮಾತನಾಡಿದ ಪ್ರೀತಂ ಗೌಡ, ಈ ಕಾರ್ಯಕ್ರಮಕ್ಕೆ ಬರುವಂತೆ ನಿಮ್ಮ ಕರೆ ಬರಲಿಲ್ಲ. ನೀವು ಕರೆ ಮಾಡಿದ್ದು ಬೇರೆ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ. ಶಂಕು ಸ್ಥಾಪನೆ ಸಮಾರಂಭದ ಆಹ್ವಾನ ಪತ್ರಿಕೆ ನನಗೆ ಹಿಂದಿನ ದಿನ ಬಂದಿದ್ದು ಎಂದು ಪ್ರತಿಕ್ರಿಯೆ ನೀಡಿದರು.
ಕಾರ್ಯಕ್ರಮಕ್ಕೆ ಪ್ರೀತಂ ಗೌಡ ಅವರನ್ನು ಸರಿಯಾಗಿ ಆಹ್ವಾನಿಸಿಲ್ಲ. ಹೀಗಾಗಿ ಅವರು ಗೈರಹಾಜರಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಶಿರಾಡಿ ಘಾಟ್ನಲ್ಲಿ ನಾಳೆಯಿಂದ ಸಂಚಾರ
ಮಳೆಯಿಂದ ಕೆಟ್ಟಿದ್ದ ಶಿರಾಡಿ ಘಾಟ್ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಅಕ್ಟೊಬರ್ 3ರಿಂದ (ಬುಧವಾರ) ಬಸ್ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ತಿಳಿಸಿದ್ದಾರೆ.
ಆದರೆ, ಈ ಮಾರ್ಗದಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಬಿಸಿಲೆಘಾಟ್ನಲ್ಲಿಯೂ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ದೂರು ನೀಡಿದ್ದು ಗೊತ್ತಿಲ್ಲ
ಹಾಸನದಲ್ಲಿ ಜೆಡಿಎಸ್ ಮುಖಂಡರು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಪಕ್ಷದ ನಾಯಕರಿಗೆ ದೂರು ನೀಡಿರುವುದರ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ರೇವಣ್ಣ ಹೇಳಿದರು.
ದೂರು ನೀಡಿದ್ದರ ಬಗ್ಗೆ ನನಗೆ ಮಾಹಿತಿ ಇಲ್ಲ. ನನ್ನನ್ನು ಕರೆದು ಕೇಳಿದರೆ ಅದರ ಬಗ್ಗೆ ಮಾಹಿತಿ ನೀಡುತ್ತಿದ್ದೆ. ಕಾಂಗ್ರೆಸ್ ಮುಖಂಡರು ನನ್ನೊಂದಿಗೆ ಮಾತನಾಡಿಲ್ಲ ಎಂದರು.

ಸಂಪುಟ ವಿಸ್ತರಣೆ
ರಾಜ್ಯ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ಹಾಗೂ ಖಾತೆಗಳ ಬದಲಾವಣೆ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಈ ವಿಚಾರಗಳನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ನೋಡಿಕೊಳ್ಳುತ್ತಾರೆ ಎಂದು ರೇವಣ್ಣ, ಸಂಪುಟ ವಿಸ್ತರಣೆಯಲ್ಲಿ ತಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನನ್ನ ಖಾತೆ ಬದಲಾಗುವುದಿಲ್ಲ
ನನ್ನ ಖಾತೆ ಬದಲಾವಣೆ ಆಗುವುದಿಲ್ಲ. ಬೇರೆಯವರ ಬಗ್ಗೆ ಗೊತ್ತಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, 'ನನ್ನ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ. ಹೀಗಾಗಿ ಅದರಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ' ಎಂದರು.












Click it and Unblock the Notifications