ಹಾಸನ : ಕೆ.ಆರ್.ಶಾಂತ ಕುಮಾರ್ಗೆ ಆತ್ಮೀಯ ಸನ್ಮಾನ
ಹಾಸನ, ಅ.17 : ಕೆನಡಾದಲ್ಲಿ ನಡೆದ ವಿಶ್ವ ಕುಬ್ಜರ ಕ್ರೀಡಾ ಕೂಟದಲ್ಲಿ ಚಿನ್ನದ ಪದಕ ಗೆದ್ದ ಕೆ.ಆರ್.ಶಾಂತ ಕುಮಾರ್ ಅವರನ್ನು ಹಾಸನದಲ್ಲಿ ಇಂದು ಸನ್ಮಾನಿಸಲಾಯಿತು. ಬೆಳ್ಳಿ ರಥದಲ್ಲಿ ಕೂರಿಸಿ ಮೆರವಣಿಗೆ ಮಾಡಲಾಯಿತು.
ಶಾಂತ ಕುಮಾರ್ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೊಳ್ಳಂಗಿ ಗ್ರಾಮದ ವಿಕಲ ಚೇತನ ಕ್ರೀಡಾಪಟು. ಹಾಸನ ಜಿಲ್ಲಾಡಳಿತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆತ್ಮೀಯ ಸ್ವಾಗತವನ್ನು ನೀಡಲಾಯಿತು.

ನಗರದ ಪ್ರಮುಖ ರಸ್ತೆಗಳಲ್ಲಿ ಬೆಳ್ಳಿ ರಥದ ಮೇಲೆ ಕುಳ್ಳರಿಸಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಶಾಂತಕುಮಾರ್ ಅವರನ್ನು ಕರೆತರಲಾಯಿತು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ, ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಡಾ.ಮಂಥರ್ಗೌಡ ಮುಂತಾದವರು ಶಾಂತ ಕುಮಾರ್ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಂತಕುಮಾರ್, ' ಏಳನೇ ವಿಶ್ವ ಕುಬ್ಜರ ಕ್ರೀಡಾ ಕೂಟದಲ್ಲಿ ಚಿನ್ನದ ಪದಕ ಗೆದ್ದಿರುವುದು ತಮಗೆ ತುಂಬಾ ಹೆಮ್ಮೆ ಎನಿಸಿದೆ. ತಾವು ಈ ಕ್ರೀಡಾಕೂಟಕ್ಕೆ ಸಾಕಷ್ಟು ಕಷ್ಟದಲ್ಲಿ ತೆರಳಿದ್ದು ತಮಗೆ ಪ್ರೋತ್ಸಾಹ ನೀಡಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ' ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಡಾ.ಮಂಥರ್ ಗೌಡ ಅವರು, 'ಕುಬ್ಜರ ಕ್ರೀಡಾ ಕೂಟದಲ್ಲಿ ಪದಕ ವಿಜೇತರಾದ ಶಾಂತಕುಮಾರ್ ಅವರಿಗೆ ಅಭಿನಂದಿಸಿ ಕ್ರೀಡಾ ಇಲಾಖೆ ವತಿಯಿಂದ ಐದು ಲಕ್ಷ ರೂ.ಗಳ ನೆರವನ್ನು ನೀಡಲಾಗಿದೆ. ತಾವೂ ಕೂಡ ವೈಯಕ್ತಿಕವಾಗಿ ಒಂದು ಲಕ್ಷ ರೂ. ಆರ್ಥಿಕ ನೆರವನ್ನು ನೀಡುತ್ತೇನೆ' ಎಂದು ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಪ್ರಕಾಶ್ ಸರಶೆಟ್ಟಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಕ್ರೀಡಾ ಇಲಾಖೆ ತರಬೇತುದಾರರು ಅಭಿನಂದನೆಗಳನ್ನು ಸಲ್ಲಿಸಿದರು.












Click it and Unblock the Notifications