ಕಾಂಗ್ರೆಸ್ ಕಾರ್ಯಕರ್ತರ ಜೊತೆ ಪ್ರೀತಂ ಗೌಡ ಮಾತುಕತೆ: ಜೆಡಿಎಸ್ ಕೆಂಗಣ್ಣು
ಹಾಸನ, ಏ 8: ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ ಮಂಜು ಪರವಾಗಿ ಕೆಲಸ ಮಾಡುವಂತೆ, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರನ್ನು ಉದ್ದೇಶಿಸಿ, ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಆಡಿರುವ ಮಾತು, ಜೆಡಿಎಸ್ ಕೆಂಗಣ್ಣಿಗೆ ಗುರಿಯಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನಿಮ್ಮ ಬಣ್ಣದ ಮಾತಿಗೆ ಹಾಸನದ ಜನತೆ ಮರಳಾಗುವಷ್ಟು ದಡ್ಡರಲ್ಲ, ನಿಮ್ಮ ರಾಜಕೀಯ ತಂತ್ರಗಾರಿಕೆ ಏನೇ ಇರಲಿ, ಚುನಾವಣೆಯಲ್ಲಿ ತೊಡೆ ತಟ್ಟುವುದು ನಾವೇ ಎಂದು ಜೆಡಿಎಸ್ ಮುಖಂಡರು, ಪ್ರೀತಂ ಗೌಡ ಆಡಿರುವ ಮಾತಿಗೆ ಪ್ರತಿಕ್ರಿಯಿಸಿದ್ದಾರೆ.
ಜೆಡಿಎಸ್ ನಿಂದ ಪ್ರಜ್ವಲ್ ರೇವಣ್ಣ ಮತ್ತು ಬಿಜೆಪಿಯಿಂದ ಎ ಮಂಜು ಕಣಕ್ಕಿಳಿಯುವುದು ಫೈನಲ್ ಆದ ನಂತರ, ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿರುವ ಹಾಸನದ ಕಾಂಗ್ರೆಸ್ ಮುಖಂಡರನ್ನು ಪ್ರೀತಂ ಗೌಡ ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಕಾಂಗ್ರೆಸ್ ಮುಖಂಡರ ಜೊತೆಗಿನ ಮಾತುಕತೆಯಲ್ಲಿ, ಈ ಬಾರಿ ಜೆಡಿಎಸ್ ಅನ್ನು ಸೋಲಿಸಲೇಬೇಕು. ಒಂದು ಬಾರಿ ಸೋತರೇನೇ ಅವರಿಗೆ ಬುದ್ದಿ ಬರುವುದು. ಒಂದು ವೇಳೆ ಗೆದ್ದರು ಅಂದುಕೊಳ್ಳಿ, ನಮ್ಮ ಮನೆಯ ಪಾತ್ರೆ ತೊಳೆಯುವವರೂ ಹಾಸನದಲ್ಲಿ ಗೆಲುತ್ತಾರೆ ಎಂದು ಅವರು ಬೀಗುತ್ತಾರೆ. ಅದಕ್ಕೆ ನೀವುಗಳು ಅವಕಾಶ ಮಾಡಿಕೊಡಬಾರದು ಎಂದು ಪ್ರೀತಂ ಗೌಡ, ಕಾಂಗ್ರೆಸ್ ಮುಖಂಡರ ಜೊತೆ ನಡೆಸಿದ ಮಾತುಕತೆಯ ವಿಡಿಯೋ ಬಹಿರಂಗವಾಗಿದೆ.
ಈ ಚುನಾವಣೆಯನ್ನು ಗೆಲ್ಲಲು ಏನು ಮಾಡಬೇಕೋ ಅದನ್ನು ಮಾಡಬೇಕು. ಅವರ ದಾರಿಯಲ್ಲೇ ಸಾಗಿ, ಚುನಾವಣೆ ವೇಳೆ ನಮ್ಮ ರೂಟ್ ಗೆ ಅವರನ್ನು ಬರುವಂತೆ ಮಾಡಬೇಕು. ಮುಂದಿನ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನಾನು ನಿಮಗೆ ಸಹಾಯ ಮಾಡುತ್ತೇನೆ. ಈ ಬಾರಿ ನಮ್ಮ ಪರವಾಗಿ ನಿಲ್ಲಬೇಕು ಎಂದು ಪ್ರೀತಂ ಗೌಡ ಸಭೆಯಲ್ಲಿ ಮನವಿ ಮಾಡಿದ್ದರು.
ರೇವಣ್ಣನವರನ್ನು ಹತೋಟಿಯಲ್ಲಿ ಇಡಬೇಕೆಂದರೆ ಈ ಚುನಾವಣೆಯಲ್ಲಿ ಅವರಿಗೆ ಸೋಲಿನ ಬಿಸಿಮುಟ್ಟಿಸಬೇಕು. ಇಲ್ಲದಿದ್ದರೆ, ನಿಮ್ಮನ್ನು ಹೋಗೋಬಾರೋ ಎಂದು ಕರೆಯುತ್ತಾರೆ. ಆ ಹುಡುಗನ (ಪ್ರಜ್ವಲ್ ರೇವಣ್ಣ) ಮುಂದೆ ಕೈಕಟ್ಟಿ ನಿಲ್ಲುವಂತಾಗುತ್ತದೆ ಎಂದು ಪ್ರೀತಂ ಗೌಡ ಹೇಳುತ್ತಿದ್ದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.












Click it and Unblock the Notifications