ಹಾಸನ: ಅಕ್ಟೋಬರ್ 13ರಿಂದ 17ರವರೆಗೆ ತೆರೆಯಲಿದೆ ಹಾಸನಾಂಬ ದೇಗುಲ; ಭಕ್ತರಿಗೆ 12 ದಿನ ದರ್ಶನ
ಹಾಸನ: ಹಾಸನ ಜಿಲ್ಲೆಯ ಅಧಿದೇವತೆ ಹಾಸನಾಂಬೆ ಜಾತ್ರಾ ಮಹೋತ್ಸವ ಅಕ್ಟೋಬರ್ 13 ರಿಂದ 27ರವರೆಗೆ ನಡೆಯಲಿದೆ, 15 ದಿನ ದೇವಾಲಯದ ಬಾಗಿಲು ತೆರೆಯಲಿದ್ದು, ಭಕ್ತರಿಗೆ 12 ದಿನ ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕ ಪ್ರೀತಂ ಗೌಡ ತಿಳಿಸಿದ್ದಾರೆ.
ಹಾಸನಾಂಬೆ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ದೇವಾಲಯದ ಆವರಣ ಪರಿಶೀಲನೆ ನಡೆಸಿ ಮಾತನಾಡಿದ ಅವರು, ವರ್ಷಕ್ಕೆ ಕೆಲವು ದಿನಗಳು ಮಾತ್ರ ದರ್ಶನ ಕಲ್ಪಿಸುವ ದೇವಿಯ ಗರ್ಭಗುಡಿ ಈ ವರ್ಷ ಅಶ್ವೀಜ ಮಾಸದ ಮೊದಲ ಗುರುವಾರ ತೆರೆಯಲಾಗುವುದು. ಈ ಭಾರಿ 15 ದಿನಗಳು ದೇವಾಲಯ ಬಾಗಿಲು ತೆರೆಯಲಿದ್ದು, ಭಕ್ತರಿಗೆ 12 ದಿನಗಳು ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ದೇವಾಲಯದ ಬಾಗಿಲು ತೆರೆಯುವ 15 ದಿನಗಳಲ್ಲಿ ಮೊದಲ ಹಾಗೂ ಕೊನೆಯ ದಿನ ಗ್ರಹಣ ಇರುವ ಕಾರಣ, ಆ ಎರಡು ದಿನ ದೇವಿಯ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಹಾಗೆಯೇ ಅಕ್ಟೋಬರ್ 25ರಂದು ಸಹಾ ಸಾರ್ವಜನಿಕರಿಗೆ ದರ್ಶನದ ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.

ಅದ್ದೂರಿಯಾಗಿ ಆಚರಣೆ
ಕಳೆದ ಎರಡು ವರ್ಷಗಳು ಕೋವಿಡ್ 19 ಮಹಾಮಾರಿಯಿಂದ ಸರಳವಾಗಿ ಜಾತ್ರೆಯನ್ನು ಆಯೋಜಿಸಲಾಗಿತ್ತು. ಆದರೆ ಈ ಬಾರಿ ಬಹಳ ವಿಜೃಂಬಣೆಯಿಂದ ಜಾತ್ರೆಯನ್ನು ಆಚರಿಸಲು ಯೋಜನೆಗಳನ್ನು ರೂಪಿಸಿಕೊಳ್ಳಲಾಗುತ್ತಿದೆ. ಇನ್ನೂ ಜಾತ್ರೆಗೆ ಕೇವಲ ಹಾಸನ ಮಾತ್ರವಲ್ಲದೆ, ಅಕ್ಕಪಕ್ಕದ ಜಿಲ್ಲೆಯ ಭಕ್ತರು ಆಗಮಿಸುವ ಹಿನ್ನಲೆ ಭಕ್ತರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು.

ಭಾರಿ ಭಕ್ತರ ನಿರೀಕ್ಷೆ
ರಾಜ್ಯದ ನಾನಾ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಭಕ್ತರು ಬರುತ್ತಿದ್ದು, ಜಿಲ್ಲಾಡಳಿತದಿಂದ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಗುವುದು. ಕಳೆದ ಎರಡು ವರ್ಷ ಕೋವಿಡ್ ಕಾಣರ ಹೆಚ್ಚಿನ ಭಕ್ತರಿಗೆ ದರ್ಶನದ ಅವಕಾಶ ನೀಡಿರಲಿಲ್ಲ. ಈ ಕಾರಣದಿಂದ ಈ ವರ್ಷ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಎಲ್ಲ ರೀತಿಯ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಅರ್ಚನಾ ತಿಳಿಸಿದರು.












Click it and Unblock the Notifications