ಅಕ್ಟೋಬರ್ 17ರಿಂದ ಹಾಸನಾಂಬೆ ದರ್ಶನ ಪಡೆಯಿರಿ
ಹಾಸನ, ಸೆಪ್ಟೆಂಬರ್ 18 : ಹಾಸನದ ಅಧಿದೇವತೆ ಹಾಸನಾಂಬೆ ದರ್ಶನವನ್ನು ಈ ವರ್ಷ ಭಕ್ತರು 12 ದಿನಗಳ ಕಾಲ ಪಡೆಯಬಹುದಾಗಿದೆ. ಅಕ್ಟೋಬರ್ 17 ರಿಂದ 29ರ ತನಕ ದೇವಾಲಯದ ಬಾಗಿಲು ತೆರೆದಿರುತ್ತದೆ.
ಹಾಸನ ಜಿಲ್ಲಾಧಿಕಾರಿ ಗಿರೀಶ್ ಬುಧವಾರ ಈ ಕುರಿತು ಮಾಹಿತಿ ನೀಡಿದರು. ಅಕ್ಟೋಬರ್ 17ರಂದು ಹಾಸನಾಂಬೆ ದೇವಾಲಯದ ಬಾಗಲು ತೆರೆಯಲಾಗುತ್ತದೆ. ಈ ವರ್ಷ 12 ದಿನಗಳ ಕಾಲ ದೇವರ ದರ್ಶನ ಪಡೆಯಲು ಅವಕಾಶ ಸಿಗಲಿದೆ ಎಂದು ಹೇಳಿದರು.
ವರ್ಷದಲ್ಲಿ ಒಮ್ಮೆ ಮಾತ್ರ ಹಾಸನಾಂಬೆ ದೇವಾಲಯದ ಬಾಗಿಲನ್ನು ತೆರೆಯಲಾಗುತ್ತದೆ. ದೇವರ ದರ್ಶನ ಪಡೆಯಲು ಹಾಸನ ಮಾತ್ರವಲ್ಲ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಭಕ್ತರು, ರಾಜಕಾರಣಿಗಳು, ಗಣ್ಯರು ಆಗಮಿಸುತ್ತಾರೆ.
ಹಾಸನಾಂಬೆ ದೇವಾಲಯದ ಬಾಗಿಲನ್ನು ವರ್ಷಕ್ಕೆ ಒಮ್ಮೆ ಮಾತ್ರ ತೆರೆದು ಪೂಜೆ ಸಲ್ಲಿಸಿ ದೀಪ ಹಚ್ಚಿ, ಪ್ರಸಾದವಿಟ್ಟು ಬಾಗಿಲನ್ನು ಹಾಕಲಾಗುತ್ತದೆ. ಮುಂದಿನ ವರ್ಷ ಬಾಗಿಲು ತೆಗೆದಾಗಲೂ ದೀಪ ಉರಿಯುತ್ತಿರುತ್ತದೆ, ಪ್ರಸಾದ ಹಳಿಸಿರುವುದಿಲ್ಲ. ಹಾಸನಾಂಬೆ ದೇವಾಲಯಕ್ಕೆ ಲಕ್ಷಾಂತರ ಭಕ್ತರಿದ್ದು ದೇವಿಯ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿರುತ್ತಾರೆ.

ಅಕ್ಟೋಬರ್ 17 ಮತ್ತು 29ರಂದು ದರ್ಶನವಿಲ್ಲ
"ಅಕ್ಟೋಬರ್ 17ರಂದು ಮಧ್ಯಾಹ್ನ 12.30ಕ್ಕೆ ದೇವಾಲಯದ ಬಾಗಿಲು ತೆರೆಯಲಿದ್ದು, ಅಕ್ಟೋಬರ್ 29 ರಂದು ಮಧ್ಯಾಹ್ನ 12 ಗಂಟೆ ನಂತರ ಬಾಗಿಲು ಮುಚ್ಚಲಾಗುತ್ತದೆ. ಅ.17 ಮತ್ತು 29 ರಂದು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಇರುವುದಿಲ್ಲ" ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ವರ್ಷದಲ್ಲೇ ಒಂದು ಬಾರಿ ದರ್ಶನ
ಹಾಸನಾಂಬೆ ದೇವಾಲಯದ ಬಾಗಿಲನ್ನು ವರ್ಷಕ್ಕೆ ಒಮ್ಮೆ ಮಾತ್ರ ತೆರೆಯಲಾಗುತ್ತದೆ. ಅಶ್ವಯುಜ ಮಾಸದ ಹುಣ್ಣಿಮೆಯ ನಂತರದಲ್ಲಿ ಬರುವ ಮೊದಲ ಗುರುವಾರದಂದು ದೇವಾಲಯದ ಬಾಗಿಲು ತೆರೆದು ಬಲಿಪಾಡ್ಯಮಿ ಹಬ್ಬದ ಮಾರನೇ ದಿನ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ.

11 ಗಂಟೆಯ ತನಕ ದರ್ಶನಕ್ಕೆ ಅವಕಾಶ
ಅಕ್ಟೋಬರ್ 18 ರಿಂದ ಪ್ರತಿದಿನ ದೇವಿಗೆ ನೈವೇದ್ಯ ಪೂಜಾ ಸಮಯವಾದ ಮಧ್ಯಾಹ್ನ 1 ರಿಂದ 3 ಗಂಟೆಯವರೆಗೆ ಭಕ್ತಾದಿಗಳಗೆ ದರ್ಶನ ಇರುವುದಿಲ್ಲ. ಉಳಿದ ಅವಧಿಯಲ್ಲಿ ರಾತ್ರಿ 11 ಗಂಟೆಯವರೆಗೆ ಭಕ್ತರು ದೇವಿಯ ದರ್ಶನವನ್ನು ಪಡೆಯಬಹುದು.

ವಿಶೇಷ ಪಾಸುಗಳ ವ್ಯವಸ್ಥೆ
ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಧರ್ಮದರ್ಶನ, ಶೀಘ್ರವಾಗಿ ಹಾಗೂ ಸುಗಮ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ರೂ.300ರ ವಿಶೇಷ ದರ್ಶನ ಟಿಕೆಟ್ ಪಡೆದವರಿಗೆ 2 ಲಾಡು ಮತ್ತು ರೂ.1000ದ ನೇರದರ್ಶನ ವಿಶೇಷ ದರ್ಶನ ಟಿಕೆಟ್ ಪಡೆದವರಿಗೆ 4 ಲಾಡು ಪ್ರಸಾದವನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications