ಬಾಗಿಲು ತೆರೆದ ಐತಿಹಾಸಿಕ ಹಾಸನಾಂಬೆ ದೇವಾಲಯ
ಹಾಸನ, ಅಕ್ಟೋಬರ್ 12 : ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇವಾಲಯ ಬಾಗಿಲು ತೆರೆದಿದೆ. ಇಂದಿನಿಂದ 9 ದಿನಗಳ ಕಾಲ 24 ಗಂಟೆಯೂ ಭಕ್ತರು ದೇವಿಯ ದರ್ಶನ ಪಡೆಯಬಹುದಾಗಿದೆ. ವರ್ಷಕ್ಕೊಮ್ಮೆ ಮಾತ್ರ ದೇವಾಲಯ ಬಾಗಿಲು ತೆರೆಯುತ್ತದೆ.
ಗುರುವಾರ ಹಾಸನದ ಅಧಿದೇವತೆ ಹಾಸನಾಂಬೆ ದೇವಾಲಯದ ಬಾಗಿಲನ್ನು ಮಧ್ಯಾಹ್ನ 12.30ಕ್ಕೆ ಸಕಲ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸುವ ಮೂಲಕ ತೆರೆಯಲಾಯಿತು. ಬಾಗಿಲು ತೆರೆಯುತ್ತಿದಂತೆಯೇ ಭಕ್ತರು ಅಮ್ಮನವರಿಗೆ ಜಯಘೋಷ ಹಾಕಿದರು.
ಮೊದಲ ದಿನ ದೇವಿಯ ದರ್ಶನ ಪಡೆಯಲು ಜನರಿಗೆ ಅವಕಾಶವಿರಲಿಲ್ಲ. ಆದರೆ, ದೇವಾಲಯ ಬಾಗಿಲು ತೆರೆಯುವುದನ್ನು ನೋಡಲು ನೂರಾರು ಭಕ್ತರು ಆಗಮಿಸಿದ್ದರು. ಅಕ್ಟೋಬರ್ 12 ರಿಂದ 21ರ ತನಕ ಈ ಬಾರಿ ದೇವಾಲಯದ ಬಾಗಿಲು ತೆರೆದಿರುತ್ತದೆ.
ವರ್ಷಕ್ಕೊಮ್ಮೆ ದೇಗುಲ ಬಾಗಿಲು ತೆರೆವ ಹಾಸನಾಂಬೆ ದರ್ಶನಕ್ಕೆ ಜನಸಾಗರ
ಮೊದಲ ದಿನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ವಿಧಾನ ಪರಿಷತ್ ಸದಸ್ಯರಾದ ಗೋಪಾಲಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತಾ ದೇವರಾಜ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಮುಂತಾದವರು ಇಂದು ದೇವರ ದರ್ಶನ ಪಡೆದರು.
ವರ್ಷಕ್ಕೊಮ್ಮೆ ಬಾಗಿಲು ತೆರೆಯುತ್ತದೆ
ಹಾಸನದ ಅಧಿದೇವತೆ ಹಾಸನಾಂಬೆ ದೇವಾಲಯದ ಬಾಗಿಲನ್ನು ವರ್ಷಕ್ಕೆ ಒಮ್ಮೆ ಮಾತ್ರ ತೆರೆಯಲಾಗುತ್ತದೆ. ಸಂಪ್ರದಾಯದಂತೆ ದೇವಾಲಯದ ಬಾಗಿಲನ್ನು ಅಶ್ವಯುಜ ಮಾಸ ಪೂರ್ಣಿಮೆ ನಂತರದ ಗುರುವಾರ ತೆರೆಯಲಾಗುತ್ತದೆ. ಬಲಿಪಾಡ್ಯಮಿ ಮಾರನೇ ದಿನ ಬಾಗಿಲು ಮುಚ್ಚಲಾಗುತ್ತದೆ.
9 ದಿನ ದರ್ಶನಕ್ಕೆ ಅವಕಾಶ
9 ದಿನಗಳ ಕಾಲ ಈ ಬಾರಿ ದೇವಿಯ ದರ್ಶನ ಪಡೆಯಬಹುದಾಗಿದೆ. 24 ಗಂಟೆಗಳ ಕಾಲ ದೇವಿಯ ದರ್ಶನ ಪಡೆಯಲು ಅನುಕೂಲ ಮಾಡಿಕೊಡಲಾಗುತ್ತದೆ. ಮಧ್ಯಾಹ್ನ ಮತ್ತು ರಾತ್ರಿ ದೇವಿಗೆ ಅಲಂಕಾರ ಮಾಡಲು ಹಾಗೂ ಪೂಜೆ ಸಲ್ಲಿಸಲು ಅರ್ಚಕರಿಗೆ 1 ಗಂಟೆ ಅವಕಾಶ ನೀಡಲಾಗಿದೆ.
300ರೂ. ಟಿಕೆಟ್
ಹಾಸನಾಂಬೆ ದರ್ಶನ ಪಡೆಯಲು ವಿಶೇಷ ದರ್ಶನದ ಟಿಕೆಟ್ ವ್ಯವಸ್ಥೆ ಇದೆ. ಇದಕ್ಕೆ 300 ರೂ. ದರ ನಿಗದಿ ಮಾಡಲಾಗಿದೆ. ಭಕ್ತಾದಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
12 ಗಂಟೆಯ ತನಕ ಮಾತ್ರ ದರ್ಶನ
ಈ ಬಾರಿ 9 ದಿನಗಳ ಕಾಲ ದರ್ಶನಕ್ಕೆ ಅವಕಾಶವಿದೆ. ಕೊನೆಯ ದಿನ ಮಧ್ಯಾಹ್ನ 12 ಗಂಟೆಯ ತನಕ ಮಾತ್ರ ಭಕ್ತರಿಗೆ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ. ಕೊನೆಯ ದಿನ ಸಂಪ್ರದಾಯದ ಪ್ರಕಾರ ಅರ್ಚಕರು ದೇವಿಗೆ ಪೂಜೆ ಸಲ್ಲಿಸಿ, ಗರ್ಭಗುಡಿ ಶುಚಿಗೊಳಿಸಿ ದೇವಾಲಯಕ್ಕೆ ಬಾಗಿಲು ಹಾಕುತ್ತಾರೆ.
ಹಾಸನ ದರ್ಶನ ಬಸ್ಸಿಗೆ ಚಾಲನೆ
ಹಾಸನಾಂಬೆ ದೇವಾಲಯ ಬಾಗಿಲು ತೆರೆದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ಜಿಲ್ಲೆಯ ಪ್ರವಾಸಿ ಸ್ಥಳಗಳ ವೀಕ್ಷಣೆಗಾಗಿ 'ಹಾಸನ ದರ್ಶನ ವಿಶೇಷ ಬಸ್' ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಅವರು ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು.
ಹಾಸನ ದರ್ಶನ ಬಸ್ಸಿನ ಮಾರ್ಗ
ನಗರದ ಎ.ವಿ.ಕೆ.ಕಾಲೇಜು ರಸ್ತೆಯಲ್ಲಿರುವ ಯಾತ್ರಿ ನಿವಾಸ ಕಟ್ಟಡದಲ್ಲಿರುವ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ಬೆಳಗ್ಗೆ 7.30ಕ್ಕೆ ಹೊರಡುವ ಬಸ್, ಕೊಂಡಜ್ಜಿ, ಕೋರವಂಗಲ, ರುದ್ರಪಟ್ಟಣ, ರಾಮನಾಥಪುರದ ನಂತರ ಮಧ್ಯಾಹ್ನ 2 ಗಂಟೆಗೆ ಹಾಸನಕ್ಕೆ ಆಗಮಿಸಲಿದೆ.
ಮಧ್ಯಾಹ್ನ
3ಕ್ಕೆ
ದೊಡ್ಡಗದ್ದವಳ್ಳಿ,
ಹಳೇಬೀಡು,
ಬೇಲೂರು
ಮಾರ್ಗವಾಗಿ
ಸಾಗಿ
ರಾತ್ರಿ
9ಕ್ಕೆ
ಹಾಸನಕ್ಕೆ
ವಾಪಸ್
ಬರಲಿದೆ.
ಮುಂಗಡವಾಗಿ
ವಿಶೇಷ
ಪ್ರವಾಸದ
ಟಿಕೆಟ್
ಪಡೆಯಲು
ಉಪನಿರ್ದೇಶಕರು,
ಪ್ರವಾಸೋದ್ಯಮ
ಇಲಾಖೆ,
ಯಾತ್ರಿನಿವಾಸ
ಕಟ್ಟಡ,
ಎ.ವಿ.ಕೆ.ಕಾಲೇಜು
ರಸ್ತೆ
ಹಾಸನ,
ದೂರವಾಣಿ
ಸಂಖ್ಯೆ
08172-268862ನ್ನು
ಸಂಪರ್ಕಿಸಬಹುದು.