40 ಪರ್ಸೆಂಟ್ ಲಂಚ ಪ್ರಕರಣವನ್ನು ಸರ್ಕಾರ ನ್ಯಾಯಾಂಗ ತನಿಖೆಗೆ ವಹಿಸಬೇಕು: ಸಿದ್ದರಾಮಯ್ಯ ಆಗ್ರಹ
ಹಾಸನ, ಸೆಪ್ಟೆಂಬರ್, 04: ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್ ಪಡೆದಿರುವುದಕ್ಕೆ ಬಿಜೆಪಿಯವರೇನು ಲಂಚ ಪಡೆದಿದ್ದಕ್ಕೆ ರಶೀದಿ ಕೊಡುತ್ತಾರೇನ್ರಿ? ದಾಖಲೆ ಕೊಡಿ ಎಂದು ಕೇಳುವ ಬದಲು ನ್ಯಾಯಾಂಗ ತನಿಖೆಗೆ ಒಪ್ಪಿಸಲಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
"ಭ್ರಷ್ಟಾಚಾರ ಆರೋಪದ ಬಗ್ಗೆ ತನಿಖೆ ಮಾಡಲಿ ಆಮೇಲೆ ಸತ್ಯ ಗೊತ್ತಾಗುತ್ತದೆ. ನ್ಯಾಯಾಂಗ ತನಿಖೆ ಆದರೆ ದಾಖಲೆ ಕೊಡುವುದಾಗಿ ಕೆಂಪಣ್ಣ ಹೇಳಿದ್ದಾರೆ. ಆರೋಪ ಸಾಬೀತಾಗದಿದ್ದರೆ ಯಾವುದೇ ಶಿಕ್ಷೆಗೆ ಸಿದ್ಧ ಎಂದಿದ್ದಾರೆ. ನೀವು ಪ್ರಾಮಾಣಿಕರಾಗಿದ್ದರೆ ತನಿಖೆ ಬಗ್ಗೆ ಭಯ ಯಾಕೆ? ನೀವು ಪ್ರಾಮಾಣಿಕರಲ್ಲವೇ? ಹಾಗಿದ್ದರೆ ಹೆದರುವುದು ಯಾಕೆ? ಕೆಂಪಣ್ಣ ಕಾಂಗ್ರೆಸ್ಸೋ ಬಿಜೆಪಿಯೋ ನನಗೆ ಗೊತ್ತಿಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಂಗ್ರೆಸ್ನಲ್ಲಿ ಇದ್ದಾರಾ?" ಗುತ್ತಿಗೆದಾರರ ಸಂಘದಲ್ಲಿ ಬಿಜೆಪಿ ಸೇರಿ ಎಲ್ಲಾ ಪಕ್ಷದವರು ಇದ್ದಾರೆ. ಕೆಂಪಣ್ಣ ನನಗೆ ಗೊತ್ತಿರುವ ಹಾಗೆ ಯಾವ ಪಕ್ಷದಲ್ಲಿಯೂ ಇಲ್ಲ," ಎಂದು ಹೇಳಿದರು.
ಪಕ್ಷಾತೀತವಾಗಿ ಗುತ್ತಿಗೆದಾರ ಸಂಘದ ಕೆಂಪಣ್ಣ ಭೇಟಿ ಆಗಿದ್ದಾರೆ. ಕಮಿಷನ್ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಲು ನನಗೆ ಹೇಳಿದ್ದಾರೆ. ಸದನಲ್ಲಿ ಕಮಿಷನ್ ಆರೋಪವನ್ನು ಪ್ರಸ್ತಾಪಿಸುವುದಾಗಿ ಹೇಳಿದ್ದೇನೆ ಎಂದು ಅವರು ಅರಸೀಕೆರೆ ತಾಲೂಕಿನ ಗೊಲ್ಲರ ಹೊಸಳ್ಳಿಯಲ್ಲಿ ಹೇಳಿದರು.

ಮುದ್ದಹನುಮೇಗೌಡನ ಬಗ್ಗೆ ಸಿದ್ದು ಅಭಿಪ್ರಾಯ
"ಬಿಜೆಪಿ ಅವರು ಹೇಳುವುದು ಒಂದು, ಮಾಡುವುದು ಮತ್ತೊಂದು. ಅವರು ಮಹಾನ್ ಸುಳ್ಳುಗಾರರು, ಸತ್ಯ ಮುಚ್ಚಿ ಹಾಕುತ್ತಿದ್ದಾರೆ. ಕುವೆಂಪು, ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ನಾರಾಯಣಗುರು, ಕನಕದಾಸರು ಸೇರಿದಂತೆ ಹಲವರ ಚರಿತ್ರೆಯನ್ನೇ ತಿರುಚಿ ಹಾಕಿದ್ದಾರೆ," ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಹಾಗೂ ಮಾಜಿ ಸಂಸದ ಮುದ್ದಹನುಮೇಗೌಡ ಕಾಂಗ್ರೆಸ್ ತೊರೆದ ವಿಚಾರಕ್ಕೆ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು, ಒಬ್ಬ ಪಕ್ಷ ಬಿಟ್ಟು ಹೋಗುವುದರಿಂದ ಏನೂ ಹಿನ್ನಡೆ ಆಗುವುದಿಲ್ಲ. ಬಿಜೆಪಿ ಅವರು ಕುಣಿಗಲ್ನಿಂದ ಟಿಕೆಟ್ ಕೊಡುತ್ತೇವೆ ಎಂದು ಹೇಳಿದ್ದಾರೆ. ಹಾಗಾಗಿ ಮುದ್ದಹನುಮೇಗೌಡರು ಕಾಂಗ್ರೆಸ್ ಪಕ್ಷ ತೊರೆದಿದ್ದಾರೆ. ಸಿಟ್ಟಿಂಗ್ ಎಂಎಲ್ಎ ಬಿಟ್ಟು ನಾವು ಹೇಗೆ ಟಿಕೆಟ್ ಕೊಡಲು ಆಗುತ್ತದೆ. ಕುಣಿಗಲ್ನಿಂದ ಟಿಕೆಟ್ ಕೊಟ್ಟಿದ್ದರೆ ಪಕ್ಷದಲ್ಲೇ ಉಳಿದುಕೊಳ್ಳುತ್ತಿದ್ದರು ಎಂದು ಗುಡುಗಿದರು.

ಅರವಿಂದ ಲಿಂಬಾವಳಿಗೆ ಸಿದ್ದರಾಮಯ್ಯ ತರಾಟೆ
ಇನ್ನು ಮಹಿಳೆಗೆ ಶಾಸಕ ಅರವಿಂದ ಲಿಂಬಾವಳಿ ನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅರವಿಂದ ಲಿಂಬಾವಳಿ ಅವರು ಜನಪ್ರತಿನಿಧಿ ಆಗಲು ನಾಲಾಯಕ್. ಮಹಿಳೆ ರಾಜಕಾಲುವೆ ಒತ್ತುವರಿ ಮಾಡಿದ್ದರೆ ಕ್ರಮ ಕೈಗೊಳ್ಳಿ ಎಂದು ಕಷ್ಟ-ಸುಖ ಹೇಳಿಕೊಳ್ಳಲು ಬಂದಾಗ ಕೆಟ್ಟದಾಗಿ ಬೈದಿದ್ದಾರೆ. "ಆಯಮ್ಮನಿಗೆ ರೇಪ್ ಮಾಡಿದ್ದೀವಾ ಎಂದರೆ ಏನು ಅರ್ಥ? ತಾಳ್ಮೆಯಿಂದ ಮಹಿಳೆಯ ಕಷ್ಟ-ಸುಖವನ್ನು ಕೇಳಬೇಕು ಅಲ್ಲವೇ?," ಎಂದು ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಮಳೆಯಿಂದ ಅಪಾರ ಪ್ರಮಾಣದ ಹಾನಿ ಅಗಿದೆ. ಅವರ ಪ್ರಕಾರವೇ 8 ಸಾವಿರ ಕೋಟಿ ನಷ್ಟ ಆಗಿದೆ ಎಂದಿದಾರೆ. ಹಾಗಿದ್ದರೆ ಎಂಟು ಸಾವಿರ ಕೋಟಿ ಈಗ ಕೊಟ್ಟಿದ್ದಾರಾ? ಎಂದು ಪ್ರಶ್ನಿಸುವುದರ ಮೂಲಕ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಅವರು ಕಿಡಿಕಾರಿದರು. ಅವರ ಪ್ರಕಾರ ಎರಡು ಲಕ್ಷದ ಐವತ್ತು ಸಾವಿರ ಎಕರೆ ಭೂಮಿ ಮಳೆಯಿಂದ ಹಾನಿ ಆಗಿದೆ ಎಂದಿದಾರೆ. ಇದಕ್ಕೆ ರೈತರಿಗೆ ಪರಿಹಾರ ಕೊಡಲಿ. ತಾತ್ಕಾಲಿಕ ಪರಿಹಾರವನ್ನು ಕೂಡ ಇನ್ನೂ ಕೊಟ್ಟಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಕುತೂಹಲ ಕೆರಳಿಸಿದ ಸಿದ್ದು, ಶಿವಲಿಂಗೇಗೌಡ ಭೇಟಿ
ಅರಸೀಕೆರೆ ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಪಟೇಲ್ ಶಿವಪ್ಪ ಅವರ ಮನೆಯ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಭಾಗಿ ಆಗಿದ್ದರು. ಬೀಗರೂಟ ಕಾರ್ಯಕ್ರಮದಲ್ಲಿ ಭಾಗಿ ಆಗಿ ನಾನ್ ವೆಜ್ ಊಟವನ್ನು ಸವಿದರು. ಇನ್ನು ಸಿದ್ದರಾಮಯ್ಯನವರ ಜೊತೆಯಲ್ಲಿಯೇ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಊಟ ಮಾಡಿದರು. ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆ ಆಗುತ್ತಾರೆ ಎನ್ನುವ ಚರ್ಚೆಗಳ ನಡುವೆ, ಅವರು ಮತ್ತೊಮ್ಮೆ ಸಿದರಾಮಯ್ಯ ಅವರನ್ನು ಭೇಟಿ ಆಗಿ ಜೊತೆಯಲ್ಲಿ ಊಟ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು ಶಿವಲಿಂಗೇಗೌಡ ನನಗೆ ಹಳೆಯ ಸ್ನೇಹಿತ. ನಾನು ಇಲ್ಲಿಗೆ ಬಂದಾಗೆಲ್ಲಾ ಅವರನ್ನು ಭೇಟಿ ಮಾಡುತ್ತೇನೆ. ಇವತ್ತಿನ ಭೇಟಿಯಲ್ಲಿ ಏನು ವಿಶೇಷ ಇಲ್ಲ ಎಂದರು.

ಶಿವಲಿಂಗೇಗೌಡ ಬಗ್ಗೆ ಸಿದ್ದು ನಿಲುವೇನು?
ಶಿವಲಿಂಗೇಗೌಡ ಅವರು ಕಾಂಗ್ರೆಸ್ ಸೇರುತ್ತಾರಾ? ಎನ್ನುವ ಪ್ರಶ್ನೆಗೆ ಉತ್ತರ ನೀಡಲು ಸಿದ್ದರಾಮಯ್ಯನವರು ನಿರಾಕರಿಸಿದರು. ಕಾಂಗ್ರೆಸ್ ಪಕ್ಷದ ಸಿದ್ದಾಂತ, ನಾಯಕತ್ವ, ಕಾರ್ಯಕ್ರಮವನ್ನು ಒಪ್ಪಿಗೆ ಆದರೆ ಯಾರು ಬಂದರೂ ಸ್ವಾಗತಿಸುತ್ತೇವೆ ಎಂದು ಪರೋಕ್ಷವಾಗಿ ಹೇಳಿದರು.












Click it and Unblock the Notifications