ಉಂಡ ಮನೆಗೆ ದೋಖಾ ಮಾಡಿದ ವ್ಯಕ್ತಿ ಸಿದ್ದರಾಮಯ್ಯ; ಎಚ್ಡಿಕೆ ಏಕವಚನದಲ್ಲಿಯೇ ವಾಗ್ದಾಳಿ
ಹಾಸನ, ಏಪ್ರಿಲ್ 20: "ಉಂಡ ಮನೆಗೆ ದೋಖಾ ಹಾಕಿ ಹೋದಂತಹ ವ್ಯಕ್ತಿ ನನ್ನ ಬಗ್ಗೆ ಚರ್ಚೆ ಮಾಡುತ್ತಾರೆ, ಅವರು ಜೆಡಿಎಸ್ ಪಕ್ಷದಿಂದ ಬೆಳೆದು ಪಕ್ಷಕ್ಕೆ ಚೂರಿ ಹಾಕಿ ಹೋದಂತಹ ವ್ಯಕ್ತಿ," ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್ಡಿಕೆ, "ದಿನ ಬೆಳಿಗ್ಗೆ ಜನತಾ ದಳ ಮುಗಿಸಬೇಕು ಅಂತೀರಾ ಸುಳ್ಳಿನ ರಾಮಯ್ಯ, ನಾನು ಯಾಕೆ ದೇವೇಗೌಡರ ಮೇಲೆ ಆಣೆ ಮಾಡಬೇಕು? ಯಾರಯ್ಯ ನೀನು ನನ್ನ ಕೇಳುವುದಕ್ಕೆ, ನಿನ್ ಮೆಚ್ಚಿಸಲು ನಾನಿಲ್ಲ," ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.
"ಸುಳ್ಳಿನ ರಾಮಯ್ಯ ನಾನು ಕೇಳಿದ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ, ಇಡೀ ದೇಶದಲ್ಲಿ ಜನರು ಕಾಂಗ್ರೆಸ್ ತಿರಸ್ಕಾರ ಮಾಡಿದ್ದಾರೆ. ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಸ್ವಲ್ಪ ಉಸಿರಾಡುತ್ತಿದೆ. ಇವರು ಯಾವ ಕೋಮುವಾದ ನಿಲ್ಲಿಸುತ್ತಾರೆ," ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

"ಇವರ ಪಕ್ಷದವರೇ ಡಿಜೆ ಹಳ್ಳಿಯಲ್ಲಿ ಬೆಂಕಿ ಹಚ್ಚಿದರು. ಈಗ ಹುಬ್ಬಳ್ಳಿಯಲ್ಲೂ ಪ್ರಚೋದನೆ ನೀಡುತ್ತಿದ್ದಾರೆ. ಇಂತಹವರು ದೇಶದಲ್ಲಿ ಜಾತ್ಯತೀತ ವಾದವನ್ನು ಉಳಿಸುತ್ತಾರಾ ಎಂದು ಪ್ರಶ್ನೆ ಮಾಡಿದರು. ಸಿದ್ದರಾಮಯ್ಯ ಪದೇ ಪದೇ ಜೆಡಿಎಸ್ ಅನ್ನು ಬಿಜೆಪಿಯ "ಬಿ' ಟೀಂ ಎನ್ನುತ್ತೀರಿ. ಸಮ್ಮಿಶ್ರ ಸರ್ಕಾರ ಬೀಳುವುದಕ್ಕೆ ಇವರೇ ಮೂಲ ಕಾರಣ. ಇಬ್ಬರು ಪಕ್ಷೇತರರನ್ನು ಮಾರಿ ಸರ್ಕಾರ ಬೀಳಿಸಿದ್ದರು, ಈಗ ಬಿಜೆಪಿ ಸರ್ಕಾರ ರಚನೆಯಾಗುವುದಕ್ಕೆ ಸಿದ್ದರಾಮಯ್ಯ ನೇರ ಕಾರಣ," ಎಂದು ಆರೋಪಿಸಿದರು.

ಸಿದ್ದರಾಮಯ್ಯ ಯೋಗ್ಯತೆಗೆ 50-60 ಸೀಟ್ ಗೆಲ್ಲುತ್ತಾರಷ್ಟೇ; ಕುಮಾರಸ್ವಾಮಿ
"150 ಸ್ಥಾನ ಗೆಲ್ಲುತ್ತೇವೆ ಎಂದು ಸಿದ್ದರಾಮಯ್ಯ ಎಲ್ಲಾ ಕಡೆ ಭಾಷಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಯೋಗ್ಯತೆಗೆ 50-60 ಸೀಟು ಗೆಲ್ಲುತ್ತಾರೆ ಅಷ್ಟೇ ಎಂದು ವ್ಯಂಗ್ಯವಾಡಿದರು. ಮುಂದಿನ ಚುನಾವಣೆಯಲ್ಲಿ ಜನರು ನಿಮ್ಮನ್ನು ತಿರಸ್ಕರಿಸುತ್ತಾರೆ, ನಾವು ಯಾರ ಜೊತೆಯೂ ಮೈತ್ರಿ ಮಾಡಿಕೊಳ್ಳಲ್ಲ," ಎಂದರು.
ಯಾವನ್ರೀ ವಚನ ಭ್ರಷ್ಟ?
ವಚನಭ್ರಷ್ಟ ಎಂದು ಹೇಳ್ತಾರೆ, ಯಾವನ್ರೀ ವಚನಭ್ರಷ್ಟ? ಪದೇ ಪದೇ ವಚನ ಭ್ರಷ್ಟ ಎಂದು ಹೇಳುವ ಅಗತ್ಯವಿಲ್ಲ. ತಿಂದ ಮನೆಗೆ ದೋಖಾ ಮಾಡಿದವರು ನನ್ನ ಬಗ್ಗೆ ಮಾತಾನಾಡುತ್ತಾರಾ ಎಂದು ಕಿಡಿಕಾರಿದರು.

ಹೃದಯದಲ್ಲಿರುವುದು ಸಿದ್ದರಾಮಯ್ಯ ಬಾಯಲ್ಲಿ ಬಂದಿದೆ
ಮೊನ್ನೆ ನೀವೇ ಕಾಂಗ್ರೆಸ್ ಕಿತ್ತೊಗೆಯಬೇಕು ಎಂದು ಹೇಳಿದ್ದೀರಿ, ಮನಸ್ಸಿನಲ್ಲಿರುವುದನ್ನು ಸಿದ್ದರಾಮಯ್ಯ ಹೇಳಿದ್ದಾರೆ. ಜೆಡಿಎಸ್ ಮುಗಿಸುತ್ತೇನೆಂದು ಹೇಳುವುದು ನಿಮಗಿರುವ ನಂಜು, ಮೊದಲು ಅದನ್ನು ಸರಿಮಾಡಿಕೊಳ್ಳಿ ಅಂತಾ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಗರಂ ಆದರು.
ಇನ್ನು ಇದೇ ವೇಳೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಎಚ್ಡಿಕೆ, ಈ ಬಗ್ಗೆ ಕಾಂಗ್ರೆಸ್ನವರು ಪದೇಪದೇ ಮಾತನಾಡುತ್ತಿದ್ದಾರೆ. ಇವರು ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಮಾಡಿಕೊಂಡಾಗ ಯಾಕೆ ಮಾತನಾಡಲಿಲ್ಲ. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಕಲ್ಲಪ್ಪ ಮೃತಪಟ್ಟಿದ್ದ, ಕಲ್ಲಪ್ಪ ಹಂಡಿಭಾಗ್ ಪ್ರಾಮಾಣಿಕ ಅಧಿಕಾರಿಯಾಗಿದ್ದರು, ಈ ಪ್ರಕರಣದಲ್ಲಿ ಯಾರಿಗಾದರೂ ಶಿಕ್ಷೆ ಆಯ್ತಾ? ಎಂದು ಪ್ರಶ್ನೆ ಮಾಡಿದರು.












Click it and Unblock the Notifications