ಹಾಸನ : ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗದಲ್ಲಿ ಆನೆ ಸಾವು
ಹಾಸನ, ಜೂನ್ 04 : ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗದಲ್ಲಿ 2 ಮರಿ ಆನೆಗಳು ಸಾವನ್ನಪ್ಪಿದೆ. ರೈಲು ಡಿಕ್ಕಿ ಹೊಡೆದು ಮೃತಪಟ್ಟಿರುವ ಸಾಧ್ಯತೆ ಇದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಸಕಲೇಶಪುರ ತಾಲೂಕಿನ ಯಡಕಮೇರಿ ಬಳಿ ರೈಲ್ವೆ ಮಾರ್ಗದಲ್ಲಿ 2 ಮರಿಯಾನೆ ಸಾವನ್ನಪ್ಪಿವೆ. ಭಾನುವಾರ ರಾತ್ರಿ ಬೆಂಗಳೂರು-ಮಂಗಳೂರು ರೈಲು ಡಿಕ್ಕಿ ಹೊಡೆದು ಆನೆ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಶಿವರಾಮ್ ಬಾಬು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, 'ಆನೆ ಮರಿ ಸತ್ತ ವಿಚಾರ ಸೋಮವಾರ ಬೆಳಗ್ಗೆ ತಿಳಿದಿದೆ. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ' ಎಂದು ಹೇಳಿದ್ದಾರೆ.
ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ಗೂಡ್ಸ್ ರೈಲು ಡಿಕ್ಕಿ ಹೊಡೆದು 18 ತಿಂಗಳ ಎರಡು ಆನೆ ಮರಿಗಳು ಸಾವನ್ನಪ್ಪಿವೆ. ರೈಲು ಆಗಮಿಸುವ ಸಂದರ್ಭದಲ್ಲಿ ಆನೆಗಳು ರೈಲ್ವೆ ಮಾರ್ಗದ ಅಕ್ಕಪಕ್ಕದಲ್ಲಿದ್ದವು. ಮರಿಯಾನೆಗಳು ರೈಲಿನ ಶಬ್ದ ಕೇಳಿ, ಹಳಿಯ ಮೇಲೆ ಬಂದಿದ್ದು, ರೈಲು ಡಿಕ್ಕಿ ಹೊಡೆದಿದೆ.
ರೈಲಿಗೆ ಸಿಲುಕಿ ಮರಿಯಾನೆ ಮೃತಪಟ್ಟ ಬಳಿಕ ತಾಯಿ ಆನೆ ಕಾಡಿನಲ್ಲಿ ಘೀಳಿಡುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಮಾರ್ಗದಲ್ಲಿ ಹಲವು ಬಾರಿ ಆನೆಗಳು ರೈಲಿಗೆ ಸಿಲುಕಿ ಮೃತಪಟ್ಟಿವೆ. ಮಾರ್ಗದ ಪಕ್ಕದಲ್ಲಿ ಬೇಲಿ ನಿರ್ಮಿಸಬೇಕು ಎಂದು ಬೇಡಿಕೆಯೂ ಇದೆ.











Click it and Unblock the Notifications