ಹಾಸನ ರೈಲು ಅಭಿವೃದ್ಧಿಗಾಗಿ ಗೌಡರಿಂದ ಗೋಯಲ್ ಭೇಟಿ
ನವದೆಹಲಿ, ಡಿಸೆಂಬರ್ 28 : ಜಾತ್ಯತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತು ಅವರ ಮಗ ಹೊಳೆನರಸಿಪುರ ಶಾಸಕ ಎಚ್ ಡಿ ರೇವಣ್ಣ ಅವರು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರನ್ನು ಭೇಟಿಯಾಗಿ ಹಾಸನ ಜಿಲ್ಲೆಯ ರೈಲ್ವೆ ಯೋಜನೆಗಳು ಬಗ್ಗೆ ಚರ್ಚಿಸಿದರು.
ನವದೆಹಲಿಯ ಸಫ್ದರ್ಜಂಗ್ ರಸ್ತೆಯಲ್ಲಿರುವ ದೇವೇಗೌಡ ಅವರ ಅಧಿಕೃತ ನಿವಾಸದಲ್ಲಿ ಪಿಯೂಶ್ ಗೋಯಲ್ ಅವರು, ಹಾಸನ ಜಿಲ್ಲೆಯ ರೈಲ್ವೆ ಇಲಾಖೆಗೆ ಸಂಬಂಧಿಸಿದ ಹಲವಾರು ಸಂಗತಿಗಳ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ, ಸಾರ್ವಜನಿಕರಿಗೆ ತೊಂದರೆಯಾಗಿರುವ ಒಂದು ಸಮಸ್ಯೆಯ ಬಗ್ಗೆ ಗೌಡರು ಮನವಿಪತ್ರ ಸಲ್ಲಿಸಿದರು.

ಹಾಸನ ನಗರ ಮತ್ತು ನಗರದ ಹೊಸ ಬಸ್ ನಿಲ್ದಾಣದ ನಡುವಿನಲ್ಲಿರುವ, ಹಾಸನ ಮತ್ತು ಮಂಗಳೂರು ರೈಲು ಮಾರ್ಗದಲ್ಲಿರುವ ಲೆವೆಲ್ ಕ್ರಾಸಿಂಗ್ ಬಗ್ಗೆ ವಿಶೇಷವಾಗಿ ಪ್ರಸ್ತಾಪ ಮಾಡಲಾಯಿತು. ಬಾಗಲಕೋಟೆ ಮತ್ತು ಬಿಳಿಗಿರಿರಂಗನಬೆಟ್ಟ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 57 ಅನ್ನು ಸೇರಲು ಇದು ಅನುಕೂಲಕರವಾಗಿದೆ.

ಈ ಲೆವೆಲ್ ಕ್ರಾಸಿಂಗ್ ನಲ್ಲಿ ಹೊಸ ಬಸ್ ನಿಲ್ದಾಣದಿಂದ ಬಸ್ಸುಗಳು, ಮತ್ತಿತರ ಭಾರೀ ವಾಹನಗಳು ಅಡ್ಡಾಡುತ್ತಿರುವುದರಿಂದ ವಾಹನ ಸಂಚಾರ ದಟ್ಟಣೆ ಉಂಟಾಗುತ್ತಿದೆ. ರೈಲು ಸಂಚಾರಕ್ಕೂ, ವಾಹನ ಸಂಚಾರಕ್ಕೂ ಅನುಕೂಲಕರವಾಗಲೆಂದು ಒಂದು ರಸ್ತೆ ಮೇಲ್ಸೇತುವೆ ನಿರ್ಮಿಸಬೇಕೆಂಬುದು ದೇವೇಗೌಡರ ಆಗ್ರಹ.

ಈ ರಸ್ತೆಯಲ್ಲಿ ದೈನಂದಿನ ಬಸ್ಸುಗಳು ಮಾತ್ರವಲ್ಲ, ಗೂಡ್ಸ್ ವಾಹನಗಳು, ಶಾಲಾ ವಾಹನಗಳು, ರೈತರು, ಆಂಬ್ಯುಲೆನ್ಸ್ ಗಳು ಈ ದಾರಿಯನ್ನೇ ಬಳಸುತ್ತಿವೆ. ಆದ್ದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಮುಂಬರುವ 2018-19ನೇ ಸಾಲಿನ ರೈಲ್ವೆ ಬಜೆಟ್ಟಿನಲ್ಲಿ, ಇಲ್ಲಿ ರಸ್ತೆ ಮೇಲುಸೇತುವೆ ನಿರ್ಮಿಸುವ ಯೋಜನೆಯನ್ನು ಸೇರಿಸಿಕೊಳ್ಳಬೇಕು ಮತ್ತು ಅದಕ್ಕಾಗಿ ಅನುದಾನವನ್ನ ತೆಗೆದಿಡಬೇಕು ಎಂದು ಅವರು ಕೋರಿದರು.












Click it and Unblock the Notifications