ಪುತ್ರ ಪ್ರಜ್ವಲ್ ಚುನಾವಣೆ ಸ್ಪರ್ಧೆ ಬಗ್ಗೆ ಕಡ್ಡಿ ಮುರಿದಂತೆ ಹೇಳಿದ ರೇವಣ್ಣ
ಹಾಸನ, ನವೆಂಬರ್ 10: ಪುತ್ರ ಪ್ರಜ್ವಲ್ 2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಒಂದು ಮಾತು ತುಟಿಕ್ ಪಿಟಿಕ್ ಎನ್ನದೆ ಮೌನವಾಗಿದ್ದ ಎಚ್ ಡಿ ರೇವಣ್ಣ ಕೊನೆಗೂ ಮಾತನಾಡಿದ್ದಾರೆ.
ರೇವಣ್ಣ ತಮ್ಮ ಪುತ್ರ ಚುನಾವಣೆ ಸ್ಪರ್ಧೆಯ ನಿರ್ಧಾರವನ್ನು ಕುಮಾರಣ್ಣ ಹಾಗೂ ದೊಡ್ಡಗೌಡ್ರ ಹೆಗಲಿಗೆ ಹೊರಿಸಿ ಕೈತೊಳೆದುಕೊಂಡಿದ್ದಾರೆ.
ಹಾಸನದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, "ಪ್ರಜ್ವಲ್ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ವಿಚಾರದಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ ಎಂದು ಕಡ್ಡಿ ಮುರಿದಂತೆ ಹೇಳಿದರು.

ಪ್ರಜ್ವಲ್ ಸ್ಪರ್ಧೆ ವಿಚಾರದಲ್ಲಿ ನಮ್ಮ ಕುಟುಂಬದವರೇ ಹೊಡೆದಾಡುತ್ತಿದ್ದಾರೆ ಎನ್ನುವುದು ಕೆಲವರು ಭ್ರಮೆ. ಪ್ರಜ್ವಲ್ ಗೆ ಮುಂದೆ ರಾಜಕೀಯ ಭವಿಷ್ಯ ಇದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಕುಮಾರಸ್ವಾಮಿ ಹಾಗೂ ನಾನು ಮಾತ್ರ ಸ್ಪರ್ಧಿಸುವುದಾಗಿ ಹೇಳಿದ ಮೇಲೂ ಗೊಂದಲ ಏಕೆ ಎಂದು ಖಾರವಾಗಿ ಪ್ರಶ್ನಿಸಿದರು.
ಪ್ರಜ್ವಲ್ ಚುನಾವಣೆ ಸ್ಪರ್ಧೆ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂದು ದೇವೇಗೌಡ ಅವರು ಈಗಾಗಲೇ ಹೇಳಿದ್ದಾರೆ. ಮತ್ತೊಂದೆಡೆ ನಮ್ಮ ಕುಟುಂಬದಲ್ಲಿ ಇಬ್ಬರೇ ಸ್ಪರ್ಧೆ ಅಂತ ಕುಮಾಸ್ವಾಮಿ ಅವರು ಹೋದಲ್ಲಿ ಬಂದಲ್ಲಿ ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಇವರೆಲ್ಲರ ಮಾತುಗಳನ್ನು ಗಮನಿಸಿದರೇ ಪ್ರಜ್ವಲ್ ರೇವಣ್ಣ ಚುನಾವಣೆ ಸ್ಪರ್ಧಿಸಬೇಕೆಂಬ ಆಸೆ ಬಹುತೇಕ ಕಮರಿದಂತೆ ಕಾಣುತ್ತದೆ. ಆದರೆ, ಕೊನೆ ಘಳಿಗೆಯಲ್ಲಿ ಪ್ರಜ್ವಲ್ ಗೆ ದೊಡ್ಡಗೌಡ್ರು ಟಿಕೆಟ್ ಕೋಟ್ರೂ ಆಶ್ಚರ್ಯ ಪಡಬೇಕಿಲ್ಲ. ಕಾದು ನೋಡಿ.












Click it and Unblock the Notifications