ಮಹಾಮಸ್ತಕಾಭಿಷೇಕದ ಸಮಯದಲ್ಲಿ ಜಿಲ್ಲಾಡಳಿತದಿಂದ ಕ್ಯಾಬ್ ಸೇವೆ
ಹಾಸನ, ಡಿಸೆಂಬರ್. 08 : 2018ರ ಫೆಬ್ರವರಿಯಲ್ಲಿ ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದೆ. ಈ ಸಮಯದಲ್ಲಿ ಜನರ ಸಂಚಾರಕ್ಕಾಗಿ ಮೊಬೈಲ್ ಅಪ್ಲಿಕೇಶನ್ ಆಧಾರಿತ ಕ್ಯಾಬ್ ಸೇವೆಯನ್ನು ಆರಂಭಿಸಲಾಗುತ್ತದೆ.
ಹಾಸನ ಜಿಲ್ಲಾಡಳಿತ ಇಂತಹ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಕಡಿಮೆ ದರದಲ್ಲಿ ಕ್ಯಾಬ್ ಸೇವೆ ಒದಗಿಸಲು ಖಾಸಗಿ ಸಂಸ್ಥೆಗಳಿಗೆ ಟೆಂಡರ್ ನೀಡುವ ಬಗ್ಗೆ ಚರ್ಚೆ ನಡೆದಿದೆ. ಸುಮಾರು 500 ಕ್ಯಾಬ್ಗಳು ಶ್ರವಣಬೆಳಗೊಳದಲ್ಲಿ ಸಂಚಾರ ನಡೆಸಲಿವೆ.

ಶ್ರವಣಬೆಳಗೊಳಕ್ಕೆ ಆಗಮಿಸುವ ಪ್ರವಾಸಿಗರು ಖಾಸಗಿ ವಾಹನಗಳು ಹೆಚ್ಚು ದರ ವಿಧಿಸುತ್ತವೆ ಎಂದು ದೂರು ನೀಡುತ್ತಿದ್ದಾರೆ. ಆದ್ದರಿಂದ, ಲಕ್ಷಾಂತರ ಜನರು ಮಹಾಮಸ್ತಕಾಭಿಷೇಕದ ಸಮಯದಲ್ಲಿ ಆಗಮಿಸುವುದರಿಂದ ಕ್ಯಾಬ್ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ.
ಜಿಲ್ಲಾಡಳಿತ ಈಗಾಗಲೇ ಕೆಲವು ಕ್ಯಾಬ್ ಕಂಪನಿಗಳ ಜೊತೆ ಮಾತುಕತೆ ನಡೆಸಿದೆ. ಹವಾನಿಯಂತ್ರಿತ, ಸಾಮಾನ್ಯ ವಾಹನಗಳಿಗೆ ಬೇರೆ-ಬೇರೆ ದರ ನಿಗದಿ ಮಾಡಲು ನಿರ್ಧರಿಸಲಾಗಿದೆ. ಯಾವ ಸಂಸ್ಥೆಗೆ ಟೆಂಡರ್ ನೀಡಲಾಗುತ್ತದೆ ಎಂಬುದು ಇನ್ನೂ ಅಂತಿಮವಾಗಿಲ್ಲ.
2018ರ ಫೆಬ್ರವರಿ 7 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಹಾಮಸ್ತಕಾಭಿಷೇಕಕ್ಕೆ ಚಾಲನೆ ನೀಡಲಿದ್ದಾರೆ. ಫೆ.26ರಂದು ಸಮಾರೋಪ ಸಮಾರಂಭ ನಡೆಯಲಿದೆ. ಸುಮಾರು 40 ಲಕ್ಷ ಜನರು ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.











Click it and Unblock the Notifications