ವಿಡಿಯೋ; ಬೆಂಗಳೂರು-ಹಾಸನ ರಸ್ತೆಯಲ್ಲಿ ಕಾಂಗ್ರೆಸ್ ನಾಯಕನ ಹುಟ್ಟುಹಬ್ಬ!
ಹಾಸನ, ಅಕ್ಟೋಬರ್ 07; ತೆರೆದ ಕಾರಿನಲ್ಲಿ ಸಾವಿರಾರು ಜನರೊಂದಿಗೆ ಮೆರವಣಿಗೆ, ಜೆಸಿಬಿಗಳಿಂದ ಹೂವಿನ ಮಳೆ, 200 ಕೆಜಿ ತೂಕದ ಸೇಬಿನ ಹಾರ.... ಹಾಸನ-ಬೆಂಗಳೂರು ರಸ್ತೆಯಲ್ಲಿ ಹುಟ್ಟುಹಬ್ಬದ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.
ಹಾಸನದಲ್ಲಿ ರಾಜಕಾರಣಿಗಳಿಗೆ ಒಂದು ನಿಯಮ, ಜನಸಾಮಾನ್ಯರಿಗೆ ಮತ್ತೊಂದು ನಿಯಮವೇ? ಎಂದು ಜನರು ಕೇಳುವಂತಾಗಿದೆ. ಕಾಂಗ್ರೆಸ್ ನಾಯಕರೊಬ್ಬರು ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ನಡು ರಸ್ತೆಯಲ್ಲೇ ಅದ್ದೂರಿ ಹುಟ್ಟುಹಬ್ಬ ಆಚರಿಸಿಕೊಂಡರು.
ಕಾಂಗ್ರೆಸ್ ನಾಯಕ ಮತ್ತು ಎಂಎಲ್ಸಿ ಗೋಪಾಲಸ್ವಾಮಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಬುಧವಾರ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡರು. ಮಾಸ್ಕ್ ಇಲ್ಲದೇ, ಸಾಮಾಜಿಕ ಅಂತರ ಕಾಪಾಡದೇ ನೂರಾರು ಬೆಂಬಲಿಗರು ಇದರಲ್ಲಿ ಪಾಲ್ಗೊಂಡಿದ್ದರು.

ಚನ್ನರಾಯಪಟ್ಟಣದ ಪಟ್ಟಣ ಪೊಲೀಸ್ ಠಾಣೆ, ತಹಶೀಲ್ದಾರ್ ಕಚೇರಿ ಸಮೀಪವೇ ಅದ್ದೂರಿ ಹುಟ್ಟುಹಬ್ಬ ಆಚರಣೆ ನಡೆಯಿತು. ತೆರೆದ ಕಾರಿನಲ್ಲಿ ಸಾವಿರಾರು ಜನರೊಂದಿಗೆ ಮೆರವಣಿಗೆ, ಜೆಸಿಬಿಗಳಿಂದ ಹೂವಿನ ಮಳೆ, 200 ಕೆಜಿ ತೂಕದ ಸೇಬಿನ ಹಾರ ಹೀಗೆ ಹುಟ್ಟುಹಬ್ಬದ ಆಚರಣೆ ಜೋರಾಗಿತ್ತು. ಅಧಿಕಾರಿಗಳು ಕೈ ಕಟ್ಟಿಕೊಂಡಿದ್ದರು.
ಹೂವಿನ ಮಳೆ, ಹಾರ, ಬೆಂಬಲಿಗರ ಘೋಷಣೆಯ ನಡುವೆಯೇ ಹುಟ್ಟುಹಬ್ಬವನ್ನು ಬೆಂಗಳೂರು-ಹಾಸನ ರಸ್ತೆಯ ಮಧ್ಯದಲ್ಲೇ ಸಾವಿರಾರು ಬೆಂಬಲಿಗರೊಂದಿಗೆ ಆಚರಣೆ ಮಾಡಿಕೊಂಡರು ಎಂಎಲ್ಸಿ ಗೋಪಾಲಸ್ವಾಮಿ. ಇದರಿಂದಾಗಿ ರಸ್ತೆಯಲ್ಲಿ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಆಗಿತ್ತು.
ಹುಟ್ಟುಹಬ್ಬದ ಸಂಭ್ರಮಕ್ಕೆ ಸೇರಿದ್ದ ಯಾರೊಬ್ಬರೂ ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕ ಅಂತರ ಎಂಬುದಕ್ಕೆ ಅರ್ಥವೇ ಇರಲಿಲ್ಲ. ಡೋಲು ಬಡಿಯುತ್ತ, ಕುಣಿದು ಕುಪ್ಪಳಿಸುತ್ತಾ, ಒಬ್ಬರ ಮೇಲೊಬ್ಬರು ಬೀಳುತ್ತಾ ಬೆಂಬಲಿಗರು ಹುಟ್ಟುಹಬ್ಬ ಆಚರಣೆಯಲ್ಲಿ ಸಂಭ್ರಮಿಸಿದರು.
ಎಂಎಲ್ಸಿ ಹುಟ್ಟುಹಬ್ಬ ಆಚರಿಸಿಕೊಂಡ ಸ್ಥಳಕ್ಕೆ ಕೂಗಳತೆ ದೂರದಲ್ಲೇ ಇರುವ ತಹಶೀಲ್ದಾರ್ ಕಚೇರಿ ಮತ್ತು ಪಟ್ಟಣ ಪೊಲೀಸ್ ಠಾಣೆ ಎಂಎಲ್ಸಿ ಎಂಬ ಕಾರಣಕ್ಕೆ ಯಾವುದೇ ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತಿದ್ದರು. ಜನ ಸಾಮಾನ್ಯರು ತರಕಾರಿ, ಹಾಲು ಖರೀದಿಗೆ ಬಂದಾಗ ಮಾಸ್ಕ್ ಹಾಕಿಲ್ಲ ಎಂದರೆ ದಂಡ ಹಾಕುವ ಅಧಿಕಾರಿಗಳ ಕೈ ಯಾರು ಕಟ್ಟಿ ಹಾಕಿದ್ದರೂ ಎಂದು ಅವರೇ ಉತ್ತರ ಕೊಡಬೇಕು.
ಹಾಸನದಲ್ಲಿ ಕೋವಿಡ್ ಮೂರನೇ ಅಲೆ ತಡೆಯಲು ನೂರಾರು ಜನರು ಗುಂಪು ಸೇರುವುದು ನಿಷೇಧಿಸಲಾಗಿದೆ. ಆದರೆ ಈ ಆದೇಶ ಕಾಗದಕ್ಕೆ ಮಾತ್ರ ಎಂಬಂತೆ ಕಾಂಗ್ರೆಸ್ ನಾಯಕ, ಬೆಂಬಲಿಗರು ವರ್ತಿಸಿದರು. ಎಂಎಲ್ಸಿ ವಿರುದ್ಧ ಕ್ರಮ ಕೈಗೊಳ್ಳುತ್ತಾರಾ? ಎಂದು ಜನರು ಪ್ರಶ್ನಿಸಿದರು.












Click it and Unblock the Notifications