Bengaluru-Mangaluru Highway: ಬೆಂಗಳೂರು-ಮಂಗಳೂರು ಹೆದ್ದಾರಿ, ಡಿ. 16ರಿಂದ ಮತ್ತೊಂದು ಟೋಲ್
ಬೆಂಗಳೂರು, ಡಿಸೆಂಬರ್ 14: ರಾಜಧಾನಿ ಬೆಂಗಳೂರು ಮತ್ತು ಕರಾವಳಿ ನಡುವೆ ಸಂಚಾರ ನಡೆಸುವ ವಾಹನ ಸವಾರರು ಡಿಸೆಂಬರ್ 16ರಿಂದ ಮತ್ತೊಂದು ಟೋಲ್ ಶುಲ್ಕ ಪಾವತಿಸಬೇಕು. ಆದರೆ ರಸ್ತೆ ಕಾಮಗಾರಿಯೇ ಪೂರ್ಣವಾಗುವ ಮೊದಲು ಟೋಲ್ ಸಂಗ್ರಹ ಆರಂಭಿಸುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಹೆಚ್ಎಐ) ಪ್ರಸ್ತಾಪಕ್ಕೆ ವಿರೋಧವೂ ವ್ಯಕ್ತವಾಗಿದೆ. ಟೋಲ್ ಸಂಗ್ರಹ ಪ್ರಾರಂಭಿಸಿದರೆ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಕೆ ನೀಡಲಾಗಿದೆ.
ಎನ್ಹೆಚ್ಎಐ ಅಧಿಕಾರಿಗಳು ಹಾಸನ ಜಿಲ್ಲೆಯ ಆಲೂರು ತಾಲೂಕಿನ ಚೌಳಗೆರೆ ಎಂಬಲ್ಲಿ ಡಿಸೆಂಬರ್ 16ರ ಸೋಮವಾರದಿಂದ ಟೋಲ್ ಸಂಗ್ರಹ ಮಾಡಲು ಮುಂದಾಗಿದ್ದಾರೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಡೆಸುವ ವಾಹನ ಸವಾರರು ಮತ್ತೊಂದು ಟೋಲ್ ಕಟ್ಟಬೇಕಿದೆ.

ಹಾಸನ ಜಿಲ್ಲೆಯ ಶಾಂತಿಗ್ರಾಮದ ಸಮೀಪ ಈಗಾಗಲೇ ಒಂದು ಟೋಲ್ ಇದೆ. ಇದರಿಂದ ಸುಮಾರು 35 ಕಿ. ಮೀ. ದೂರದಲ್ಲಿ ಮತ್ತೊಂದು ಟೋಲ್ ಪ್ಲಾಜಾ ನಿರ್ಮಾಣ ಮಾಡಲಾಗಿದ್ದು, ಅದನ್ನು ಸೋಮವಾರ ಉದ್ಘಾಟಿಸಲಾಗುತ್ತದೆ ಎಂಬ ಸುದ್ದಿ ಇದೆ. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಸದ್ಯ ಟೋಲ್ ಸಂಗ್ರಹ ಮಾಡಬಾರದು ಎಂದು ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.
ಎರಡು ಟೋಲ್ ಬೂತ್ಗಳ ನಡುವಿನ ಅಂತರ 60 ಕಿ. ಮೀ. ಇರಬೇಕು ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವರು ಹೇಳುತ್ತಾರೆ. ಆದರೆ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ 35 ಕಿ. ಮೀ. ದೂರದಲ್ಲಿ ಅದರಲ್ಲೂ ಕಾಮಗಾರಿ ಪೂರ್ಣಗೊಳ್ಳದ ರಸ್ತೆಗೆ ಟೋಲ್ ಸಂಗ್ರಹ ಪ್ರಾರಂಭಿಸುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.
ಚತುಷ್ಪಥ ರಸ್ತೆ ಕಾಮಗಾರಿ: ರಾಜಧಾನಿ ಬೆಂಗಳೂರು-ಮಂಗಳೂರು ಸಂಪರ್ಕಿಸುವ ಹೆದ್ದಾರಿಯಲ್ಲಿ ಹಾಸನದಿಂದ ಸಕಲೇಶಪುರದ ಮಾರನಹಳ್ಳಿ ತನಕ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 7 ವರ್ಷಗಳು ಕಳೆದರೂ ಸಹ ಯೋಜನೆ ಇನ್ನೂ ಸಹ ಕುಂಟುತ್ತಾ ಸಾಗಿದೆ.
ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ, ಸರ್ವೀಸ್ ರಸ್ತೆ ನಿರ್ಮಾಣ ಮಾಡಿಲ್ಲ, ಈಗ ನಿರ್ಮಾಣ ಮಾಡಿರುವ ರಸ್ತೆಯ ವಿನ್ಯಾಸವೇ ಅವೈಜ್ಞಾನಿಕ ಎಂಬ ದೂರುಗಳು ಇವೆ, ಫ್ಲೈ ಓವರ್ ಕಾಮಗಾರಿ ಪೂರ್ಣಗೊಂಡಿಲ್ಲ. ಆದರೆ ಎನ್ಹೆಚ್ಎಐ ಮಾತ್ರ ಸೋಮವಾರದಿಂದ ಟೋಲ್ ಸಂಗ್ರಹ ಮಾಡಲು ಮುಂದಾಗಿದೆ.
ಮೊದಲು ಕಾಮಗಾರಿ ಪೂರ್ಣಗೊಳಿಸಿ, ಅಲ್ಲಿಯ ತನಕ ಟೋಲ್ ಸಂಗ್ರಹ ಮಾಡಬೇಡಿ. ಟೋಲ್ ವಸೂಲಾತಿ ಆರಂಭಿಸಿದರೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಸಿದೆ. ಶಾಸಕ ಸಿಮೆಂಟ್ ಮಂಜು ಸಹ ಟೋಲ್ ಪ್ಲಾಜಾ ಉದ್ಘಾಟನೆ ಮಾಡಿ ಟೋಲ್ ಸಂಗ್ರಹ ಮಾಡದಂತೆ ಸಚಿವರಿಗೆ ಪತ್ರವನ್ನು ಬರೆಯಲಾಗಿದೆ ಎಂದು ಹೇಳಿದ್ದಾರೆ.
ಈ ವರ್ಷದ ಜುಲೈನಲ್ಲಿಯೇ ಟೋಲ್ ಸಂಗ್ರಹ ಮಾಡಲು ಚಿಂತನೆ ನಡೆದಿತ್ತು. ಆದರೆ ಜನರ ವಿರೋಧದ ಕಾರಣ ತೀರ್ಮಾನವನ್ನು ಮುಂದೂಡಿಕೆ ಮಾಡಲಾಗಿತ್ತು. 45 ಕಿ. ಮೀ. ರಸ್ತೆಯನ್ನು ಚತುಷ್ಪಥಗೊಳಿಸುವ ಕಾಮಗಾರಿಯನ್ನು 700 ಕೋಟಿ ರೂ.ಗಳಲ್ಲಿ ಆರಂಭಿಸಲಾಗಿದೆ. ಆದರೆ ರಸ್ತೆಯ ಗುಣಮಟ್ಟ ಕಳಪೆಯಾಗಿದೆ ಎಂಬುದು ಜನರ ದೂರು.
ಹೆಸರಿಗೆ ಚತುಷ್ಪಥ ರಸ್ತೆ ಅಲ್ಲಲ್ಲಿ ಏಕಮುಖವಾಗಿದೆ. ದ್ವಿಪಥ ರಸ್ತೆಯಲ್ಲಿಯೂ ಸರಿಯಾದ ಸೂಚನಾ ಫಲಕಗಳಿಲ್ಲ. ರಸ್ತೆ ಗುಣಮಟ್ಟವೂ ಸರಿ ಇಲ್ಲ. ಅಪಘಾತಗಳು ನಡೆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಹೊಣೆ ಎಂದು ವಾಹನ ಸವಾರರು ದೂರಿದ್ದಾರೆ.












Click it and Unblock the Notifications