ಸಿಎಂ ನನ್ನನ್ನು ಯಾವಾಗಲೂ ಆತ್ಮೀಯವಾಗಿ ಕಾಣುತ್ತಾರೆ: ಜೆಡಿಎಸ್ ಶಾಸಕ ಲಿಂಗೇಶ್
ಹಾಸನ, ನವೆಂಬರ್ 24: ತಮ್ಮ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಆಕ್ಷೇಪರ್ಹ ಪದ ಬಳಸಿದ್ದಕ್ಕೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಳೇಬೀಡಿನಲ್ಲಿ ಶಾಸಕ ಲಿಂಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಿಎಂ ಬೊಮ್ಮಾಯಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಬೇಲೂರು ತಾಲೂಕು ಹಳೆಬೀಡಿನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜೆಡಿಎಸ್ ಶಾಸಕ ಲಿಂಗೇಶ್ ಅವರಿಗೆ ನೀನು ಬೆರಕಿ ಇದ್ದೀಯಾ, ಬೇಲೂರು ರಾಜಕೀಯ ನನಗೆ ಗೊತ್ತು ಎಂದು ವೇದಿಕೆಯಲ್ಲಿ ನಗುತ್ತಲೇ ಕಾಲೆಳೆದಿದ್ದರು.
ಆನೆ ದಾಳಿಗೆ ಒಳಗಾಗಿ ಸಾವನ್ನಪ್ಪಿದವರಿಗೆ 15 ಲಕ್ಷ ರೂ ಪರಿಹಾರ: ಬಸವರಾಜ ಬೊಮ್ಮಾಯಿ
ಈ ಬಗ್ಗೆ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲಿಂಗೇಶ್, ನಾನು ಕರ್ನಾಟಕದ ಒಬ್ಬ ಶಾಸಕ, ಬೇಲೂರು ಸೇರಿದವನು. ನನ್ನ ನಿಯತ್ತು ನನ್ನ ಪಕ್ಷಕ್ಕೆ ಸೇರಿದ್ದು ಎಂದು ಹೇಳಿದ್ದೇನೆ. ಕೆಲಸ ಆಗುತ್ತದೆ ಎಂದು, ಬೇರೆ ಆಮೀಷ ತೋರಿಸುತ್ತಾರೆ ಎಂದು ಪಕ್ಷ ಬಿಡಲು ಆಗುವುದಿಲ್ಲ ಎಂದು ಹೇಳಿದರು.
ನಾನೊಬ್ಬ ಸಾಮಾನ್ಯ ರೈತನ ಮಗ, ನಮಗೆ ಯಾವುದೇ ರಾಜಕೀಯ ಹಿನ್ನಲೆ ಇಲ್ಲ. ಅಂತಹ ಸಂದರ್ಭದಲ್ಲಿ ನನಗೆ ಟಿಕೆಟ್ ಕೊಟ್ಟು, ಹಣನೂ ಕೊಟ್ಟು, ಬಂದು ಆಶೀರ್ವಾದ ಮಾಡಿ, ಜನರ ಹತ್ತಿರ ಕಳುಹಿಸಿ ನನಗೆ ಸಹಕಾರ ಕೊಟ್ಟವರು ಕುಮಾರಣ್ಣ, ರೇವಣ್ಣ, ದೇವೇಗೌಡರು. ಹೀಗಾಗಿ ನಾನು ಬೇರೆ ರೀತಿಯಾಗಿ ಯೋಚನೆ ಮಾಡಲು ಸಾಧ್ಯವೇ ಎಂದು ಶಾಸಕ ಲಿಂಗೇಶ್ ಕೇಳಿದ್ದಾರೆ.
ರಾಜಕಾರಣ ದೃಷ್ಟಿ ಇಟ್ಟುಕೊಂಡು ಯಾವುದೇ ಕೆಲಸ ಮಾಡುತ್ತಿಲ್ಲ
12ನೇ ಶತಮಾನದಲ್ಲಿ ಬಸವಣ್ಣ ನಮಗೆ ಸಂಸ್ಕಾರ ನೀಡಿದ್ದಾರೆ. ಆ ಸಂಸ್ಕಾರ ಎನ್ನುವುದು ನಿಯತ್ತು. ನನಗೆ ಬೇಕಾಗಿರುವುದು ಕ್ಷೇತ್ರದ ಕೆಲಸ, ರಾಜಕಾರಣ ಅಲ್ಲ. ಇವತ್ತು ರಾಜಕಾರಣ ಬರುತ್ತೆ ಹೋಗುತ್ತದೆ. ನಾನು ರಾಜಕಾರಣ ದೃಷ್ಟಿ ಇಟ್ಟುಕೊಂಡು ಯಾವುದೇ ಕೆಲಸ ಮಾಡುತ್ತಿಲ್ಲ. ಅದು ನನ್ನ ಕರ್ತವ್ಯ. ನನ್ನ ಹೆಸರು ಉಳಿಸಲು ಮಗ ಇದ್ದ, ಆದರೆ ನನ್ನ ಮಗನನ್ನು ಕಳೆದುಕೊಂಡಿದ್ದೇನೆ. ಈಗ ನನ್ನ ಹೆಸರು ಉಳಿಯಬೇಕೆಂದರೆ ನಾಲ್ಕಾರು ಒಳ್ಳೆಯ ಕೆಲಸ ಮಾಡಬೇಕು. ಜನರ ಮನದಲ್ಲಿ ಇರಬೇಕು ಎಂದರು.
ಒಂದಲ್ಲ ಒಂದು ದಿನ ಮಾಜಿ ಆಗಬೇಕು ಎನ್ನುವ ಅರಿವು ನನಗಿದೆ
ಇನ್ನು ರಣಘಟ್ಟ ಯೋಜನೆ ನನ್ನ ಕನಸು. ಯಾವುದೇ ಇಂಜಿನಿಯರ್ಗಳು ಬಂದರೂ ನೀರು ಬರಲ್ಲ ಎನ್ನುತ್ತಿದ್ದರು. ಕುಮಾರಣ್ಣ ಆಗಲ್ಲ ಎಂದಿದ್ದರು. ಬಳಿಕ ಇಂಜಿನಿಯರ್ಗಳು ಹೇಳಿದ್ದಕ್ಕೆ ಬಜೆಟ್ನಲ್ಲಿ ನೂರು ಕೋಟಿ ಇಟ್ಟು ಹೋದರು. ಅದನ್ನೆಲ್ಲಾ ನಾವು ಮರೆಯಲು ಆಗುತ್ತದಾ..?. ರಾಜಕಾರಣ ಮುಖ್ಯ ಅಲ್ಲ. ನಾವು ರೈತರು, ನಿಯತ್ತಿಗೆ ತಕ್ಕನಾಗಿ ನಡೆದುಕೊಳ್ಳುವವರು ಎಂದು ಹೇಳಿದರು.
ಒಂದಲ್ಲ ಒಂದು ದಿನ ಮಾಜಿ ಆಗಬೇಕು ಎನ್ನುವ ಅರಿವು ನನಗಿದೆ. ಹಾಗಂತ ನಾನು ಒಳ್ಳೆಯ ಕೆಲಸಗಳನ್ನು ಮಾಡಿದ್ದರೆ ಜನರು ನನಗೆ ಆಶೀರ್ವಾದ ಮಾಡುತ್ತಾರೆ. ಚುನಾವಣೆಯ ಸಂದರ್ಭದಲ್ಲಿ ಎಲ್ಲರೂ ಮತ ಕೇಳುವುದು ಸಹಜ. ನಾನು ಎಂದೂ ನನಗೆ ಮತ ಹಾಕಿ ಎಂದಿಲ್ಲ. ಡಾ. ಬಿ.ಆರ್ ಅಂಬೇಡ್ಕರ್ ಕೊಟ್ಟಿರುವ ಸಂವಿಧಾನ ಬದ್ಧವಾಗಿರುವ ಮತವನ್ನು ಮಾರಾಟ ಮಾಡಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕ್ಷೇತ್ರದ ಜನರಿಗೋಸ್ಕರ ಎಷ್ಟೇ ನೋವಾದರೂ ಸ್ವೀಕರಿಸುತ್ತೇನೆ
ಸಿಎಂ ಬೊಮ್ಮಾಯಿ ಆಕ್ಷೇಪಾರ್ಹ ಪದ ಬಳಸಿದ ಬಗ್ಗೆ ಮಾತನಾಡಿದ ಶಾಸಕ ಲಿಂಗೇಶ್, ಮುಖ್ಯಮಂತ್ರಿಗಳು ದೊಡ್ಡವರು. ಅದರ ಬಗ್ಗೆ ಹೆಚ್ಚೇನು ಮಾತನಾಡಲ್ಲ. ನನಗೆ ನನ್ನ ಕ್ಷೇತ್ರದ ಕೆಲಸ ಮುಖ್ಯ. ಹಾಗಾಗಿ ಕೆಲವನ್ನು ನುಂಗಿಕೊಳ್ಳಬೇಕಾಗುತ್ತದೆ. ನನ್ನ ಕ್ಷೇತ್ರದ ಜನರಿಗೋಸ್ಕರ ಎಷ್ಟೇ ನೋವಾದರೂ ಸಹ ಸ್ವೀಕಾರ ಮಾಡುತ್ತೇನೆ. ಮಗನನ್ನು ಕಳೆದುಕೊಂಡು ಆಗಿರುವ ನೋವಿಗಿಂತ ದೊಡ್ಡದೇನಲ್ಲ ಇದು. ನನ್ನ ಕ್ಷೇತ್ರದ ಅಭಿವೃದ್ಧಿಗೆ ಯಾರ ಕೈ ಕಾಲು ಬೇಕಾದರೂ ಹಿಡಿಯುತ್ತೇನೆ. ಕುಮಾರಸ್ವಾಮಿ ಅವರು ಕೇಳಿದಾಗಲೂ ನಾನು ನನ್ನ ಕ್ಷೇತ್ರದ ಅಭಿವೃದ್ಧಿ ಬೇಕು ಎಂದವನು. ನನ್ನ ಉದ್ದೇಶ ಬಡವರ ಕಣ್ಣು ಒರೆಸುವುದು. ನನಗೆ ನನ್ನ ಕೆಲಸದ ಮೇಲೆ ತೃಪ್ತಿ ಇದೆ. 1500ಕೋಟಿ ಎಂದರೆ ಅದು ಪುಕ್ಕಸಟ್ಟೆಗೆ ಬಂದ ಹಣವಲ್ಲ. ಪ್ರತಿಯೊಂದು ಊರಿಗೂ ಒಂದಲ್ಲ, ಒಂದು ಕೆಲಸ ಮಾಡಿದ್ದೇನೆ ಎಂದರು.
ಬೊಮ್ಮಾಯಿ ಮುಖ್ಯಮಂತ್ರಿ ಆಗುವ ಮೊದಲು ಸಹ ನನ್ನ ಪರ ಇದ್ದರು
ಇನ್ನು ಮುಖ್ಯಮಂತ್ರಿಗಳು ಅವರ ಮನಸ್ಸಿನಲ್ಲಿ ಬೇಕು ಅಂತ ಹೇಳಿದ್ದಲ್ಲ, ಮಾತನಾಡುವಾಗ ಆಕಸ್ಮಿಕವಾಗಿ ಬಂದಿದ್ದು ಎಂದುಕೊಳ್ಳುತ್ತೇನೆ. ಅವರು ನನ್ನನ್ನು ಯಾವಾಗಲೂ ಆತ್ಮೀಯವಾಗಿ ಕಾಣುತ್ತಾರೆ. ಶಾಸಕನಾಗಿ ಅವರ ಬಳಿ ಹೋದ ಸಂದರ್ಭದಲ್ಲಿ ಬಹಳ ಗೌರವಕೊಡುತ್ತಾರೆ. ಬೊಮ್ಮಾಯಿ ಮುಖ್ಯಮಂತ್ರಿ ಆಗುವ ಮೊದಲು ಸಹ ನನ್ನ ಪರ ಇದ್ದರು. ಇವನು ನಮ್ಮವನು ಪಕ್ಷ ನೋಡಬೇಡಿ ಅವರಿಗೆ ಕೆಲಸ ಮಾಡಿಕೊಡಿ ಎಂದು ಅನೇಕ ಸಚಿವರ ಎದುರು ಹೇಳಿದ್ದರು. ಇದನ್ನು ಅನೇಕ ಬಾರಿ ನಾನು ಕಂಡಿದ್ದೇನೆ. ಹೀಗಾಗಿ ಆ ಪದ ಬಳಕೆ ಆಕಸ್ಮಿಕ ಎಂದು ನಾನು ತಿಳಿದುಕೊಂಡಿದ್ದೇನೆ. ನನಗೆ ನನ್ನ ಕ್ಷೇತ್ರ ಮುಖ್ಯ, ಕ್ಷೇತ್ರದ ಜನರಿಗೋಸ್ಕರ ಯಾವುದೇ ಮಾತನ್ನು ಕೇಳಲು ಸಿದ್ಧನಿದ್ದೇನೆ ಎಂದರು.