ಬೇಲೂರು ದೇಗುಲದಲ್ಲಿ ಅಲ್ಲು ಅರ್ಜುನ್ ಚಿತ್ರದ ಶೂಟಿಂಗ್ ಕಿರಿಕ್
ಕರ್ನಾಟಕದ ಬೇಲೂರಿನ ಐತಿಹಾಸಿಕ ಚನ್ನಕೇಶವ ದೇಗುಲದಲ್ಲಿ ತೆಲುಗಿನ ಜನಪ್ರಿಯ ನಟ ಅಲ್ಲು ಅರ್ಜುನ್ ಅವರ ಹೊಚ್ಚ ಹೊಸ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಆದರೆ, ಕಿರಿಕ್ ಆಗಿ ಶೂಟಿಂಗ್ ಸ್ಥಗಿತಗೊಂಡಿದೆ.
ಬೇಲೂರು, ಫೆಬ್ರವರಿ 17: ಇಲ್ಲಿನ ಐತಿಹಾಸಿಕ ಚನ್ನಕೇಶವ ದೇಗುಲದಲ್ಲಿ ತೆಲುಗಿನ ಜನ್ನಪ್ರಿಯ ತಾರೆ ಅಲ್ಲು ಅರ್ಜುನ್ ಅವರ ಸಿನಿಮಾ ಚಿತ್ರೀಕರಣವಾಗುತ್ತಿದೆ. ಆದರೆ, ಯುನೆಸ್ಕೋ ಮಾನ್ಯತೆ ಇರುವ ದೇಗುಲದ ವಾತಾವರಣ ಬದಲಿಸಿದ ಚಿತ್ರತಂಡದ ವಿರುದ್ಧ ಸ್ಥಳೀಯರು ಪ್ರತಿಭಟನೆ ಮಾಡಿದ್ದಾರೆ.
ದೂವಡ ಜಗನ್ನಾಧಂ (ಡಿಜೆ) ಹೆಸರಿನ ಈ ಚಿತ್ರ ಎರಡು ತಿಂಗಳ ಹಿಂದೆಯೇ ಚಿತ್ರೀಕರಣ ಆರಂಭವಾಗಿ ಸ್ಥಗಿತಗೊಂಡಿತ್ತು. ಅಲ್ಲು ಅರ್ಜುನ್ ಅವರು ತಂದೆಯಾಗುತ್ತಿರುವ ಸಂಭ್ರಮದಲ್ಲಿದ್ದರು. ಈಗ ಕರ್ನಾಟಕದ ಐತಿಹಾಸಿಕ ತಾಣಗಳಲ್ಲಿ ಶೂಟಿಂಗ್ ನಡೆಸಲು ಮುಂದಾಗಿದ್ದರು.
ಏನಿದು ವಿವಾದ: ಶೂಟಿಂಗ್ ನಡೆಯುವ ವೇಳೆ ದೇಗುಲದ ದ್ವಾರ ಬಂದ್ ಮಾಡಿ ಪ್ರವಾಸಿಗರಿಗೆ, ಸ್ಥಳೀಯರಿಗೆ ನಿರ್ಬಂಧ ಹೇರಲಾಗಿತ್ತು. ವೈಷ್ಣವ ದೇಗುಲದಲ್ಲಿ ಶಿವನ ಪ್ರತಿಷ್ಠಾಪಿಸಿ, ಧಾರ್ಮಿಕ ನಂಬಿಕೆಗೆ ಬರೆ ಎಳೆದ ಚಿತ್ರತಂಡದ ವಿರುದ್ಧ ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿ, ಪ್ರತಿಭಟಿಸಿದರು. ಕೊನೆಗೂ ವಿಗ್ರಹವನ್ನು ತೆರವುಗೊಳಿಸಲಾಗಿದ್ದು, ಪರಿಸ್ಥಿತಿ ಈಗ ತಿಳಿಗೊಂಡಿದೆ.

ಅಲ್ಲು ಅರ್ಜುನ್ ಅವರ ಹೊಸ ಚಿತ್ರ
ಹರೀಶ್ ಶಂಕರ್ ಅವರ ನಿರ್ದೇಶನದ ದೂವಡ ಜಗನ್ನಾಧಂ (ಡಿಜೆ) ಚಿತ್ರ ಡಿಸೆಂಬರ್ 2016ರಲ್ಲಿ ಆರಂಭವಾಗಿತ್ತು. ನಂತರ ಅಲ್ಲು ಅರ್ಜುನ್ ಅವರಿಗಾಗಿ ನಿಲ್ಲಿಸಲಾಗಿತ್ತು. ಈಗ ಮತ್ತೊಮ್ಮೆ ವಿವಾದಕ್ಕೀಡಾಗಿದೆ. ದಿಲ್ ರಾಜು ನಿರ್ಮಾಣದ ಈ ಚಿತ್ರಕ್ಕೆ ದೇವಿ ಶ್ರೀಪ್ರಸಾದ್ ಸಂಗೀತ ನೀಡಿದ್ದರೆ, ತೆಲುಗು, ಹಿಂದಿ ಚಿತ್ರಗಳಲ್ಲಿ ನಟಿಸಿರುವ ಕನ್ನಡತಿ ಪೂಜಾ ಹೆಗ್ಡೆ ಅವರು ಹೀರೋಯಿನ್ ಆಗಿದ್ದಾರೆ.

ವಿಷ್ಣು ದೇಗುಲದಲ್ಲಿ ಶಿವನ ಮೂರ್ತಿ
ಬೇಲೂರಿನ ಐತಿಹಾಸಿಕ ಚನ್ನಕೇಶವ ದೇಗುಲದಲ್ಲಿ ಶಿವನ ಮೂರ್ತಿಯನ್ನು ಸ್ಥಾಪಿಸಿದ್ದು ವೈಷ್ಣವ ಹಾಗೂ ಶೈವ ಪಂಥೀಯರ ನಡುವೆ ವೈಮನಸ್ಯ ಉಂಟಾಗುವಂತೆ ಮಾಡಿದೆ. ಜತೆಗೆ ಚಿತ್ರೀಕರಣದ ಸಂದರ್ಭದಲ್ಲಿ ದೇಗುಲದ ಆವರಣದಲ್ಲಿ ಚಿತ್ರ ತಂಡ ನಡೆದುಕೊಳ್ಳುತ್ತಿದ್ದ ರೀತಿ ಎಲ್ಲರಿಗೂ ಕಿರಿಕಿರಿ ಉಂಟು ಮಾಡಿದೆ.

ಪ್ರವಾಸೋದ್ಯಮಕ್ಕೆ ಧಕ್ಕೆ
ಚಿತ್ರೀಕರಣ ನಡೆಯುವ ವೇಳೆ ದೇಗುಲದ ದ್ವಾರ ಬಂದ್ ಮಾಡಿ ಪ್ರವೇಶ ನಿರ್ಬಂಧಿಸಲಾಗಿತ್ತು. ಸಿನಿಮಾ ತಂಡದ ಈ ವರ್ತನೆಯಿಂದ ದೇಗುಲಕ್ಕೆ ಭೇಟಿ ನೀಡುವ ದೇಶ-ವಿದೇಶಿ ಪ್ರವಾಸಿಗರಿಗೆ ನಿರಾಶೆಯಾಗಿದೆ. ದೇಗುಲದ ಬಗ್ಗೆ ಹಾಗೂ ಕರ್ನಾಟಕದ ಬಗ್ಗೆ ಇರುವ ಕೆಟ್ಟ ಅಭಿಪ್ರಾಯ ಮೂಡುವುದಂತೂ ನಿಜ. ದೇಗುಲದ ಗೌರವ, ಘನತೆಗೆ ಧಕ್ಕೆಯಾಗುವಂಥ ಘಟನೆ ನಡೆದಿದೆ.

ಚಿತ್ರೀಕರಣ ತ್ವರಿತಗೊಳಿಸಲಾಗಿತ್ತು
ಚಿರಂಜೀವಿ, ಜೂನಿಯರ್ ಎನ್ಟಿಆರ್ ರಂತೆ ಬ್ರಾಹ್ಮಣ ಯುವಕನ ಪಾತ್ರದಲ್ಲಿ ಮೊದಲ ಬಾರಿಗೆ ಅಲ್ಲು ಅರ್ಜುನ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ವಾರಾಂತ್ಯದಲ್ಲಿ ಚಿತ್ರದ ಮೊದಲ ಲುಕ್ ರಿಲೀಸ್ ಮಾಡಲು ಚಿತ್ರ ತಂಡ ಮುಂದಾಗಿದ್ದು, ಅದಕ್ಕಾಗಿ ಚಿತ್ರೀಕರಣ ತ್ವರಿತಗೊಳಿಸಲಾಗಿತ್ತು.

ಆದರೆ, ಅನುಮತಿ ನೀಡಿದ್ದು ಎಷ್ಟು ಸರಿ?
ಬೇಲೂರಿನ ಚನ್ನಕೇಶವ ದೇಗುಲವು ಯುನೆಸ್ಕೋ ಮಾನ್ಯತೆ ಪಡೆದ ಪಾರಂಪರಿಕ ಪಟ್ಟಿಗೆ ಸೇರಿದೆ. ಹೀಗಾಗಿ ಚಿತ್ರ ತಂಡವು ಕೇಂದ್ರ ಪುರಾತತ್ವ ಇಲಾಖೆಯಿಂದ ಚಿತ್ರೀಕರಣಕ್ಕೆ ಅನುಮತಿ ಪಡೆದುಕೊಂಡಿದೆ. ಇದಕ್ಕಾಗಿ ಸುಮಾರು ಒಂದೂವರೆ ಲಕ್ಷ ರು ಪಾವತಿಸಿರುವ ಮಾಹಿತಿ ಇದೆ.

ಉಗ್ರರ ಲಿಸ್ಟ್ ನಲ್ಲಿರುವ ದೇಗುಲ
ಬೇಲೂರಿನ ಚನ್ನಕೇಶವ ದೇಗುಲ ಸೇರಿದಂತೆ ಕರ್ನಾಟಕದ ಅನೇಕ ದೇಗುಲದ ಮೇಲೆ ಉಗ್ರರ ಕಣ್ಣು ಬಿದ್ದಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ. ಪರಿಸ್ಥಿತಿ ಹೀಗಿರುವಾಗ, ಚಿತ್ರ ತಂಡವು ಡ್ರೋನ್ ಕೆಮೆರಾ ಬಳಸುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ.












Click it and Unblock the Notifications