ಹಾಸನ : ಚಿತ್ರಹಿಂಸೆ ಕೊಟ್ಟು ಜೀತಕ್ಕೆ ಬಿಟ್ಟಿದ್ದ 52 ಕಾರ್ಮಿಕರ ರಕ್ಷಣೆ
ಹಾಸನ, ಡಿಸೆಂಬರ್ 17 : ಹಾಸನ ಜಿಲ್ಲೆಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಜೀತಕ್ಕಿದ್ದ 52 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಮೂರು ವರ್ಷಗಳಿಂದ ವೇತನ ನೀಡದೆ, ಚಿತ್ರಹಿಂಸೆ ನೀಡಿ ಕಾರ್ಮಿಕರಿಂದ ಕೆಲಸ ಮಾಡಿಸಲಾಗುತ್ತಿತ್ತು.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಸಾವಂತಿಹಳ್ಳಿ ಗ್ರಾಮದಲ್ಲಿನ ಹೊಲದಲ್ಲಿ ಜೀತಕ್ಕಿದ್ದ 52 ಜನರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಈ ಮೃತ್ಯಕೂಪದಿಂದ ತಪ್ಪಿಸಿಕೊಂಡು ಬಂದ ವ್ಯಕ್ತಿ ನೀಡಿದ ಮಾಹಿತಿ ಅನ್ವಯ ದಾಳಿ ನಡೆಸಿ, ಎಲ್ಲರನ್ನು ರಕ್ಷಣೆ ಮಾಡಲಾಗಿದೆ.
ಸಾವಂತಿಹಳ್ಳಿಯಲ್ಲಿ ಬೆಂಗಳೂರಿನ ಕೃಷ್ಣೇಗೌಡ ಅವರು 8 ಎಕರೆ ಭೂಮಿ ಹೊಂದಿದ್ದರು. ಮುರಳಿ ಎನ್ನುವವರಿಗೆ ಹೊಲವನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿದ್ದರು. ಜಮೀನಿನ ಕೂಲಿ ಕೆಲಸಕ್ಕೆ ಜನರನ್ನು ಕರೆತಂದ ಆತ ಅವರಿಗೆ ಚಿತ್ರಹಿಂಸೆ ಕೊಟ್ಟು, ವೇತನ ನೀಡಿದೆ ದುಡಿಸಿಕೊಳ್ಳುತ್ತಿದ್ದ.

ಆಟೋ ಚಾಲಕ ನಾಗಣ್ಣ ಮತ್ತು ಮುರಳಿ ಬಸ್ ಮತ್ತು ರೈಲ್ವೆ ನಿಲ್ದಾಣದಲ್ಲಿರುವ ಅನಾಥರಿಗೆ ಕೆಲಸ ಕೊಡಿಸುವ ಆಮಿಷವೊಡ್ಡಿ ಕರೆದುಕೊಂಡು ಬರುತ್ತಿದ್ದರು. ಇಲ್ಲಿಗೆ ಬಂದ ಬಳಿಕ ಅವರಿಂದ ಹೆಚ್ಚು ಕೆಲಸ ಮಾಡಿಸಿ, ಊಟ, ಮೂಲ ಸೌಕರ್ಯಗಳನ್ನು ನೀಡದೆ ಹಿಂಸಿಸಿ ಕೆಲಸ ಮಾಡಿಸಲಾಗುತ್ತಿತ್ತು.
ರಾತ್ರಿ 52 ಜನರನ್ನು ಪುಟ್ಟ ಗುಡಿಸಲಲ್ಲಿ ಕೂಡಿ ಬೀಗ ಹಾಕಿಕೊಂಡು ಹೋಗಲಾಗುತ್ತಿತ್ತು. ಮೂರು ವರ್ಷಗಳಿಂದ ಅವರಿಗೆ ಹೊರ ಜಗತ್ತಿನ ಸಂಪರ್ಕವೇ ಇರಲಿಲ್ಲ. ಮಾಲೀಕರು ನೀಡುವ ಹಿಂಸೆ ತಾಳಲಾರದೆ ಓಡಿ ಹೋದ ವ್ಯಕ್ತಿ ಜೀತ ಪದ್ಧತಿ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ.
3 ರಿಂದ 65 ವರ್ಷದ ಕಾರ್ಮಿಕರು ಇಲ್ಲಿ ಜೀತ ಮಾಡುತ್ತಿದ್ದರು. ಆಂಧ್ರಪ್ರದೇಶ, ರಾಯಚೂರು, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳ ಕಾರ್ಮಿಕರು ಜೀತಕ್ಕಿದ್ದರು. ಮಾಲೀಕ ಮುರಳಿ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.












Click it and Unblock the Notifications