ಹಾಸನ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐದು ದಿನದ ಮಗು, ಪೋಷಕರ ಆಕ್ರೋಶ
ಹಾಸನ ಜಿಲ್ಲಾಸ್ಪತ್ರೆಯಲ್ಲಿ ಐದು ದಿನದ ಮಗು ಮೃತಪಟ್ಟಿದ್ದು, ಅದಕ್ಕೆ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯ ಕಾರಣ ಎಂದು ಪೋಷಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ
ಹಾಸನ, ಮೇ 20: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಐದು ದಿನದ ಗಂಡು ಮಗುವೊಂದು ಮೃತಪಟ್ಟಿದ್ದರಿಂದ ಆಕ್ರೋಶಗೊಂಡ ಪೋಷಕರು, ಅವರ ಜತೆಗೂಡಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಿಲ್ಲಾ ಆಸ್ಪತ್ರೆಯ ವೈದ್ಯರು ಹಾಗೂ ಶುಶ್ರೂಷಕಿಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಆರೋಪಿಸಿದರು.
ಅರಕಲಗೂಡು ತಾಲ್ಲೂಕಿನ ವ್ಯಾಪ್ತಿಯ ಕಡುವಿನಹೊಸಹಳ್ಳಿಯ ಪ್ರತಿಮಾ ಅವರ ಮಗು ಮೃತಪಟ್ಟಿದೆ. ಜ್ವರವಿದ್ದ ಮಗುವಿಗೆ ಚುಚ್ಚುಮದ್ದು ನೀಡುವುದಾಗಿ ದಾದಿಯರು ಕರೆದೊಯ್ದಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ ಎಂದು ಪೋಷಕರು ಆರೋಪಿಸಿದ್ದಾರೆ. ದಾದಿಯರು ಮಗುವನ್ನು ನೆಲಕ್ಕೆ ಬೀಳಿಸಿದ್ದಾರೆ. ಕಿವಿ, ಮೂಗಿನಲ್ಲಿ ರಕ್ತ ಬಂದಿದೆ. ಅವರು ನಿಜ ಹೇಳುತ್ತಿಲ್ಲ ಎಂದು ಪ್ರತಿಮಾ ಸಹೋದರ ಮಹೇಶ್ ಆರೋಪಿಸಿದ್ದಾರೆ.[ಹಾಸನ: ಅನಿಲ ಸೋರಿಕೆಯಾಗಿ 20ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ]
ಆದರೆ, ಘಟನೆ ಬಗ್ಗೆ ಮಾಧ್ಯಮದವರ ಜತೆ ಮಾತನಾಡಿರುವ ಜಿಲ್ಲಾ ಶಸ್ತ್ರ ಚಿಕಿತ್ಸಕ ಶಂಕರ್, ಮಗುವಿಗೆ ಸೋಂಕಾಗಿತ್ತು. ತುರ್ತು ಚಿಕಿತ್ಸೆಗೆ ದಾಖಲಿಸುವಂತೆ ಚೀಟಿ ಬರೆದುಕೊಟ್ಟಿದ್ದರೂ ಮಗುವಿನ ಅಜ್ಜಿ ದಾಖಲಿಸಿರಲಿಲ್ಲ. ಬೆಳಗ್ಗೆ ಹೊತ್ತಿಗೆ ಮಗು ಕೈ-ಕಾಲು ಆಡಿಸುತ್ತಿಲ್ಲ ಎಂದು ಹೇಳಿದರು. ಪರೀಕ್ಷೆ ಮಾಡಿದಾಗ ಮೃತಪಟ್ಟಿತ್ತು ಎಂದಿದ್ದಾರೆ.
ಸೋಂಕಾದಾಗ ರಕ್ತ ಹೆಪ್ಪುಗಟ್ಟುವುದು ಕಡಿಮೆ ಆಗಿ ರಕ್ತ ಸೋರುತ್ತದೆ. ಶವಪರೀಕ್ಷೆ ನಂತರ ಸತ್ಯ ಹೊರಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ.
{promotion-urls}