"ಚಹಾ ಕಾರ್ಮಿಕರ ಸಮಸ್ಯೆ ಚಹಾ ಮಾರುವವರಿಗಿಂತ ಇನ್ಯಾರಿಗೆ ಹೆಚ್ಚು ಅರ್ಥವಾಗುತ್ತೆ?"
ಗುವಾಹಟಿ, ಮಾರ್ಚ್ 20: "ಅಸ್ಸಾಂ ಚಹಾಗೆ ಅಪಮಾನವಾಗುವಂತೆ ಕಾಂಗ್ರೆಸ್ ಟೂಲ್ ಕಿಟ್ ಪ್ರಚಾರ ಮಾಡುತ್ತಿದೆ" ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಟೀಕಾಪ್ರಹಾರ ಮಾಡಿದ್ದಾರೆ.
ಶನಿವಾರ ಅಸ್ಸಾಂನ ಚುನಾವಣಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಮೋದಿ, "ಕಾಂಗ್ರೆಸ್, ಈ ರಾಜ್ಯದ ಹೆಮ್ಮೆಯ ವಿಷಯದೊಂದಿಗೆ ಆಟವಾಡುತ್ತಿದೆ. ಅಸ್ಸಾಂ ಚಹಾ ಹಾಗೂ ನಮ್ಮ ಸಂತರ ಪರಂಪರೆಯಾದ ಯೋಗವನ್ನು ದೂಷಿಸುವಂಥ ಪ್ರಚಾರ ಮಾಡುತ್ತಿದೆ" ಎಂದು ಆರೋಪಿಸಿದ್ದಾರೆ.

ಶುಕ್ರವಾರವಷ್ಟೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಸ್ಸಾಂನಲ್ಲಿ ಚುನಾವಣಾ ಪ್ರಚಾರ ನಡೆಸಿದ್ದು, ಇಲ್ಲಿನ ಚಹಾ ಕಾರ್ಮಿಕರೊಂದಿಗೆ ಸಂವಾದ ನಡೆಸಿದ್ದರು. ಶನಿವಾರ ಮೋದಿ ಇಲ್ಲಿಗೆ ಭೇಟಿ ನೀಡಿದ್ದು, ಕಾಂಗ್ರೆಸ್ ಮೇಲೆ ದೂರಿದ್ದಾರೆ.
"ನೀವು ಕಾಂಗ್ರೆಸ್ನ ಟೂಲ್ ಕಿಟ್ ಬಗ್ಗೆ ಕೇಳಿರಬಹುದು. ಇದು ಅಸ್ಸಾಂ ಚಹಾ ತೋಟಗಳನ್ನು ನಾಶಮಾಡಲು ಪ್ರಯತ್ನಿಸಿದೆ. ಯಾವುದೇ ಭಾರತೀಯ ಕೂಡ ಇದನ್ನು ಅನುಮತಿಸುವುದಿಲ್ಲ" ಎಂದು ಈಚೆಗೆ ರೈತರ ಪ್ರತಿಭಟನೆ ಕುರಿತು ಸ್ವೀಡನ್ ಮೂಲದ ಪರಿಸರವಾದಿ ಗ್ರೆಟಾ ಥನ್ಬರ್ಗ್ ಪ್ರಕರಣದ ವಿವಾದಾತ್ಮಕ ಟೂಲ್ಕಿಟ್ ಪದವನ್ನೇ ಉಲ್ಲೇಖಿಸಿದರು.
"ಕಾಂಗ್ರೆಸ್ ಅಂಥ ಶಕ್ತಿಗಳನ್ನು ಬೆಂಬಲಿಸುತ್ತಿದೆ. ಹಾಗೆ ಮಾಡುತ್ತಲೇ ಇಲ್ಲಿಗೆ ಬಂದು ಚಹಾ ತೋಟದ ಕಾರ್ಮಿಕರ ಮತಗಳನ್ನು ಪಡೆಯುವ ಪ್ರವೃತ್ತಿ ಹೊಂದಿದೆ. ಅಷ್ಟರ ಮಟ್ಟಿಗೆ ಕಾಂಗ್ರೆಸ್ ಕೆಳಕ್ಕಿಳಿದಿದೆ" ಎಂದಿದ್ದಾರೆ.
"ಚಹಾ ಮಾರುವವರಿಗಿಂತ ಚಹಾ ಕಾರ್ಮಿಕರ ಸಮಸ್ಯೆಗಳನ್ನು ಇನ್ಯಾರು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲರು" ಎಂದು ಪ್ರಶ್ನಿಸಿ, ತಾವು ಸಣ್ಣವರಾಗಿದ್ದಾಗ ಗುಜರಾತ್ನ ರೈಲ್ವೆ ನಿಲ್ದಾಣಗಳಲ್ಲಿ ಟೀ ಮಾರುತ್ತಿದ್ದುದನ್ನು ಉಲ್ಲೇಖಿಸಿದರು.
ಈ ಮುನ್ನ ಕಾಂಗ್ರೆಸ್ ಶ್ರೀಲಂಕಾ ಚಹಾ ತೋಟದ ಛಾಯಾಚಿತ್ರಗಳನ್ನೇ ಅಸ್ಸಾಂ ಚಹಾ ತೋಟಗಳೆಂದು ಹಾಕಿತ್ತು. ನಂತರ ಥೈವಾನ್ ಚಹಾ ತೋಟದ ಚಿತ್ರವನ್ನು ಹಾಕಿತ್ತು. ಈ ರೀತಿ ತಪ್ಪು ಒಮ್ಮೆಯಾಗುವುದು ಸಹಜ. ಅದು ಪುನರಾವರ್ತನೆಯಾದರೆ, ಅವರ ಮನಸ್ಥಿತಿಯನ್ನು ತೋರುತ್ತದೆ. ಅಸ್ಸಾಂನಂಥ ಸುಂದರ ಪ್ರದೇಶವನ್ನು ಅವಮಾನ ಮಾಡಿದಂತೆ" ಎಂದು ಟೀಕಿಸಿದ್ದಾರೆ.












Click it and Unblock the Notifications