ಸರ್ಕಾರದ ದುಡ್ಡಲ್ಲಿ ಕುರಾನ್ ಕಲಿಸಬೇಕೇ?: ಶಿಕ್ಷಣ ಸಚಿವ
ಗುವಾಹಟಿ, ಅಕ್ಟೋಬರ್ 14: ಏಕರೂಪತೆಯನ್ನು ತರುವ ಉದ್ದೇಶದಿಂದ ಸರ್ಕಾರಿ ಅನುದಾನಿತ ಮದರಸಾಗಳನ್ನು ಮುಚ್ಚುವ ನಿರ್ಧಾರಕ್ಕೆ ಬರಲಾಗಿದೆ ಎಂದು ಅಸ್ಸಾಂನ ಶಿಕ್ಷಣ ಸಚಿವ ಹಿಮಾಂತಾ ಬಿಸ್ವ ಶರ್ಮಾ ತಿಳಿಸಿದ್ದಾರೆ.
ಸರ್ಕಾರಿ ಅನುದಾನಿತ ಮದರಸಾಗಳನ್ನು ಮುಚ್ಚುವ ಮತ್ತು ಅವುಗಳನ್ನು ಸಾಮಾನ್ಯ ಶಾಲೆಗಳಾಗಿ ಪರಿವರ್ತಿಸುವ ರಾಜ್ಯ ಸರ್ಕಾರದ ನಿರ್ಧಾರ ಅಸ್ಸಾಂನಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ಶರ್ಮಾ ಈ ಸ್ಪಷ್ಟೀಕರಣ ನೀಡಿದ್ದಾರೆ.
'ಎಲ್ಲ ಸರ್ಕಾರಿ ಸ್ವಾಮ್ಯದ ಮದರಸಾಗಳನ್ನು ಸಾಮಾನ್ಯ ಶಾಲೆಗಳನ್ನಾಗಿ ಪರಿವರ್ತಿಸಲಾಗುತ್ತದೆ ಅಥವಾ ಕೆಲವು ಸಂದರ್ಭಗಳಲ್ಲಿ ಶಿಕ್ಷಕರನ್ನು ಸರ್ಕಾರ ಸ್ವಾಮ್ಯದ ಶಾಲೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ ಮತ್ತು ಮದರಸಾಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಈ ಬಗ್ಗೆ ನವೆಂಬರ್ನಲ್ಲಿ ಅಧಿಸೂಚನೆ ಬಿಡುಗಡೆ ಮಾಡಲಾಗುವುದು' ಎಂದು ಹೇಳಿದ್ದಾರೆ.
''ನನ್ನ ಅಭಿಪ್ರಾಯದ ಪ್ರಕಾರ 'ಕುರಾನ್' ಬೋಧನೆಯನ್ನು ಸರ್ಕಾರದ ಹಣದಲ್ಲಿ ಮಾಡಲು ಸಾಧ್ಯವಿಲ್ಲ. ನಾವು ಹಾಗೆ ಮಾಡುವುದಾದರೆ ಬೈಬಲ್ ಮತ್ತು ಭಗವದ್ಗೀತೆಗಳನ್ನೂ ನಾವು ಅದೇ ರೀತಿ ಕಲಿಸಬೇಕಾಗುತ್ತದೆ. ಹೀಗಾಗಿ ಏಕರೂಪತೆ ತರಲು ಬಯಸಿದ್ದೇವೆ ಮತ್ತು ಈ ಅಭ್ಯಾಸವನ್ನು ನಿಲ್ಲಿಸಲು ಉದ್ದೇಶಿಸಿದ್ದೇವೆ' ಎಂದು ತಿಳಿಸಿದ್ದಾರೆ. ಮುಂದೆ ಓದಿ.

ಕಲಿಕಾ ಕೇಂದ್ರಗಳ ಸ್ಥಗಿತ
ರಾಜ್ಯದಾದ್ಯಂತ ಸರ್ಕಾರಿ ಅನುದಾನದಲ್ಲಿ ನಡೆಯುತ್ತಿರುವ ಮದರಸಾಗಳು ಮತ್ತು ಸಂಸ್ಕೃತ ಕಲಿಕಾ ಕೇಂದ್ರಗಳನ್ನು ಮುಚ್ಚಿ, ಅವುಗಳನ್ನು ಸಾಮಾನ್ಯ ಕಲಿಕಾ ಶಾಲೆಗಳನ್ನಾಗಿ ಪರಿವರ್ತನೆ ಮಾಡಲು ನಿರ್ಧರಿಸಿರುವುದಾಗಿ ಬಿಜೆಪಿ ನೇತೃತ್ವದ ಸರ್ಕಾರದ ಶಿಕ್ಷಣ ಸಚಿವರು ಕಳೆದ ವಾರ ಘೋಷಿಸಿದ್ದರು.

ಅಧಿಕಾರಕ್ಕೆ ಬಂದ ಬಳಿಕ ಮತ್ತೆ ಅನುದಾನ
ಇದು ಮುಸ್ಲಿಂ ಸಮುದಾಯವನ್ನು ಶೋಷಿಸುವ ನಡೆ ಎಂದು ಅನೇಕರು ಆರೋಪಿಸಿದ್ದರು. ಬಿಜೆಪಿ ನೇತೃತ್ವದ ಸರ್ಕಾರವು ಸರ್ಕಾರಿ ಸ್ವಾಮ್ಯದ ಮದರಸಾಗಳನ್ನು ಮುಚ್ಚಿದರೆ, ನಾವು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅವುಗಳನ್ನು ಮತ್ತೆ ತೆರೆಯುತ್ತೇವೆ ಎಂದು ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಹೇಳಿದ್ದರು.

ಹಿಂದೂ ಹೆಸರಲ್ಲಿ ಮದುವೆ ವಂಚನೆ
''ಅನೇಕ ಮುಸ್ಲಿಂ ಹುಡುಗರು ಫೇಸ್ಬುಕ್ನಲ್ಲಿ ಹಿಂದೂ ಹೆಸರುಗಳಲ್ಲಿ ಖಾತೆಗಳನ್ನು ತೆರೆಯುತ್ತಾರೆ. ದೇವಸ್ಥಾನದಲ್ಲಿರುವ ತಮ್ಮ ಫೋಟೊಗಳನ್ನು ಹಾಕಿಕೊಳ್ಳುತ್ತಾರೆ. ಅಂತಹ ಹುಡುಗರೊಂದಿಗೆ ಹಿಂದೂ ಯುವತಿಯರು ಮದುವೆಯಾದ ಬಳಿಕ ಅವರು ತಮ್ಮದೇ ಧರ್ಮದವರಲ್ಲ ಎನ್ನುವುದು ಆಕೆಗೆ ಅರಿವಾಗುತ್ತದೆ. ಇದು ಮೋಸದ ಮದುವೆಯಲ್ಲ, ಆದರೆ ನಂಬಿಕೆಯ ಉಲ್ಲಂಘನೆ'' ಎಂದು ಶರ್ಮಾ ಹೇಳಿದ್ದಾರೆ.

ಮೋಸದ ಮದುವೆಗಳ ವಿರುದ್ಧ ಕ್ರಮ
ಆ ರೀತಿಯ ಯಾವುದೇ ಮದುವೆಗಳ ವಿರುದ್ಧ ರಾಜ್ಯ ಸರ್ಕಾರ ಹೋರಾಟ ನಡೆಸಲಿದೆ. ಅವುಗಳನ್ನು ವಂಚನೆ ಪ್ರಕರಣ ಎಂದು ಗಂಭೀರವಾಗಿ ಪರಿಗಣಿಸಲಾಗುವುದು ಎಂದಿದ್ದಾರೆ. ಅಂತಹ ಮದುವೆಗಳ ವಿರುದ್ಧ ರಾಜ್ಯ ಸರ್ಕಾರ ಕಠಿಣವಾಗಿ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ. ಮುಂದಿನ ಐದು ವರ್ಷಗಳಲ್ಲಿ ಎಲ್ಲ ಮದುವೆಗಳೂ ವಂಚನೆ ಮುಕ್ತವಾಗಿರುವಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.












Click it and Unblock the Notifications