ಗಲಭೆಗೆ ಹೆಸರಾಗಿದ್ದ ಅಸ್ಸಾಂ ಚಿತ್ರಣವನ್ನೇ ಬದಲಾಯಿಸಿದ್ದು ಮೋದಿ; ಅಮಿತ್ ಶಾ
ಗುವಾಹಟಿ, ಫೆಬ್ರವರಿ 25: ಒಂದು ಕಾಲದಲ್ಲಿ ಅಸ್ಸಾಂ ಗಲಭೆ, ಹಿಂಸಾಚಾರಕ್ಕೆ ಹೆಸರಾಗಿತ್ತು. ಪ್ರಧಾನಿ ಮೋದಿ ಎಲ್ಲವನ್ನೂ ಬದಲಾಯಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ನರೇಂದ್ರ ಮೋದಿಯವರನ್ನು ಹೊಗಳಿದ್ದಾರೆ.
ಅಸ್ಸಾಂನ ನಾಗೌನ್ನಲ್ಲಿ ಗುರುವಾರ ಪ್ರಚಾರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಅಮಿತ್ ಶಾ, ತಮ್ಮ ಆಡಳಿತದಲ್ಲಿನ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿದರು. ಮೋದಿ ಅವರ ನಾಯಕತ್ವದಲ್ಲಿ ಅಸ್ಸಾಂನಲ್ಲಿ ಮಾತ್ರವಲ್ಲ, ಇಡೀ ಈಶಾನ್ಯ ರಾಜ್ಯಗಳಲ್ಲಿಯೇ ಹೊಸ ಅಭಿವೃದ್ಧಿ ಆರಂಭವಾಗಲಿದೆ ಎಂದು ಭರವಸೆ ನೀಡಿದರು.
ಗಲಭೆಗೆ, ಹಿಂಸಾಚಾರಕ್ಕೆ ಹೆಸರಾದ ಅಸ್ಸಾಂ ಅನ್ನು ಮೋದಿ ಬದಲಾಯಿಸಿದರು. ಅಸ್ಸಾಂಗೆ ಒಂದು ಪ್ರತಿಷ್ಠೆ ತಂದುಕೊಡಲು ಏನೆಲ್ಲಾ ಸಾಧ್ಯವೋ ಎಲ್ಲಾ ಪ್ರಯತ್ನಗಳನ್ನು ಮಾಡಿದರು. ಅಸ್ಸಾಂ ಈಗ ಅಭಿವೃದ್ಧಿ, ಕೈಗಾರಿಕಾ ಹೂಡಿಕೆ, ಶಿಕ್ಷಣ ಹಾಗೂ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಭೂಪೇನ್ ಹಜಾರಿಕಾ ಅವರಿಗೆ ಭಾರತ ರತ್ನ ನೀಡಿದ್ದೂ ಮೋದಿ ಸರ್ಕಾರವೇ ಎಂದು ವಿವರಿಸಿದರು.

ಕಾಂಗ್ರೆಸ್ ನಾಯಕ ತರುಣ್ ಗೋಗೊಯ್ ಅವರು ಸಮಾಜಕ್ಕೆ ಕೊಡುಗೆ ನೀಡಿದ್ದು, ಅವರಿಗೂ ಮೋದಿ ಸರ್ಕಾರದಲ್ಲಿ ಪದ್ಮಭೂಷಣ ನೀಡಲಾಗಿದೆ ಎಂದರು.
ಪ್ರಚಾರ ಸಂದರ್ಭ ಕಾಂಗ್ರೆಸ್ ಸ್ಪರ್ಧೆಯ ಕುರಿತು ಮಾತನಾಡಿದ ಅವರು, "ಚುನಾವಣೆ ಸಮಯಗಳಲ್ಲಿ ಮಾತ್ರ ಕಾಣಿಸಿಕೊಳ್ಳುವುದು ಕಾಂಗ್ರೆಸ್ ವ್ಯವಸ್ಥೆಗಳಲ್ಲಿ ಒಂದಾಗಿದೆ. ದೆಹಲಿಯಲ್ಲಿಯೇ ಸುತ್ತಾಡಿಕೊಂಡಿರುವ ಅವರು, ಚುನಾವಣೆ ಸಮಯದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ" ಎಂದು ಟೀಕಿಸಿದರು.
ಕಾಂಗ್ರೆಸ್ ಗೆಲ್ಲಿಸಬೇಕೆಂದು ಬೇರೆ ಬೇರೆ ಹೆಸರಿನಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರ ಗುರಿ ಕಾಂಗ್ರೆಸ್ ಗೆಲುವು. ಆದರೆ ಕಾಂಗ್ರೆಸ್ ಸರ್ಕಾರ ರಚನೆ ಮಾಡುವುದು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಕಾಂಗ್ರೆಸ್ನವರಿಗೂ ಈ ಸತ್ಯ ತಿಳಿದಿದೆ ಎಂದರು.












Click it and Unblock the Notifications