5920 ಕೋಟಿಯ ದೇಶದ ಅತಿ ದೊಡ್ಡ ಸೇತುವೆ ಬಳಕೆಗೆ ಸಿದ್ಧ, ಏನು ವಿಶೇಷ?
ಗುವಾಹತಿ (ಅಸ್ಸಾಂ), ಡಿಸೆಂಬರ್ 23: ಭಾರತದ ಅತಿ ದೊಡ್ಡ ರೈಲ್ ರಸ್ತೆ ಸೇತುವೆ ಬಳಕೆಗೆ ಸಿದ್ಧವಾಗಿದೆ. ಮಂಗಳವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂಚಾರಕ್ಕೆ ಮುಕ್ತಗೊಳಿಸಲಿದ್ದಾರೆ. 4.94 ಕಿ.ಮೀ. ವಿಸ್ತೀರ್ಣದ ಈ ಸೇತುವೆಯ ಕಾಮಗಾರಿ ಆರಂಭವಾಗಿದ್ದು 2002ನೇ ಇಸವಿಯಲ್ಲಿ. ಇನ್ನು ಶಂಕುಸ್ಥಾಪನೆ ಮಾಡಿದ್ದವರು ಆಗಿನ ಪ್ರಧಾನಿ ಎಚ್.ಡಿ.ದೇವೇಗೌಡರು, 1997ನೇ ಇಸವಿಯಲ್ಲಿ.
21 ವರ್ಷಗಳ ಕಾಲ ಅಸ್ಸಾಮ್ ಹಾಗೂ ಅರುಣಾಚಲ ಪ್ರದೇಶದ ಜನರು ಈ ಕನಸು ಸಾಕಾರಗೊಳ್ಳುವುದಕ್ಕಾಗಿ ಕಾದಿದ್ದಾರೆ. ಇದು ಡಬಲ್ ಡೆಕ್ಕರ್ ರೈಲು ಹಾಗೂ ರಸ್ತೆ ಸೇತುವೆ. ಬ್ರಹ್ಮಪುತ್ರಾ ನದಿಯ ಮೇಲೆ ನಿರ್ಮಿಸಲಾಗಿದೆ. ಇದರಿಂದ ಅಸ್ಸಾಂನ ತಿನ್ ಸುಕಿಯಾದಿಂದ ಅರುಣಾಚಲ ಪ್ರದೇಶದ ನಹರ್ಲಗನ್ ಪಟ್ಟಣಕ್ಕೆ ರೈಲು ಸಂಚಾರದ ಅವಧಿ ಹತ್ತು ಗಂಟೆಗೂ ಹೆಚ್ಚು ಉಳಿತಾಯ ಆಗುತ್ತದೆ.
"ನಾನು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ನಿರ್ಮಾಣ ಕಾರ್ಯದ ಉದ್ಘಾಟನೆಗಾಗಿ ಇಲ್ಲಿಗೆ ಬಂದಿದ್ದರು. ಹಲವು ವರ್ಷಗಳಿಂದ ಈ ಸೇತುವೆ ನಮ್ಮ ಕನಸಾಗಿತ್ತು. ಹಲವು ಪ್ರತಿಭಟನೆಗಳು, ಹೋರಾಟದ ಫಲವಾಗಿ ಇದು ಪೂರ್ಣಗೊಂಡಿದೆ. ಈಶಾನ್ಯ ರಾಜ್ಯದ ಮುಖ್ಯ ಬೆಳವಣಿಗೆ ಇದಾಗಲಿದೆ" ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

ದೇಶದಲ್ಲೇ ದೊಡ್ಡದಾದ ಸೇತುವೆ
ಈ ಬೊಗಿಬೀಲ್ ಸೇತುವೆ ಬಹಳ ಸುಂದರವಾಗಿ ನಿರ್ಮಾಣ ಮಾಡಲಾಗಿದೆ. ಈಶಾನ್ಯ ಗಡಿ ಭಾಗದ ಸುರಕ್ಷತೆ ವಿಚಾರದಲ್ಲೂ ತುಂಬ ಮುಖ್ಯವಾದ ಮೂಲಸೌಕರ್ಯವಿದು. "ಬ್ರಹ್ಮಪುತ್ರಾ ನದಿಯ ಮೇಲೆ ಸೇತುವೆ ನಿರ್ಮಿಸುವುದೇ ಸವಾಲಿನ ವಿಚಾರ. ಬಹಳ ಹೆಚ್ಚು ಮಳೆ ಬೀಳುವ ಪ್ರದೇಶ ಇದು. ಹಲವು ವಿಧದಿಂದ ವಿಶಿಷ್ಟವಾದ ಸೇತುವೆ. ದೇಶದಲ್ಲೇ ದೊಡ್ಡದಾದ ಸೇತುವೆ" ಎಂದು ಸಿಪಿಆರ್ ಒ ಪ್ರಣವ್ ಜ್ಯೋತಿ ಶರ್ಮಾ ಹೇಳಿದ್ದಾರೆ.

ಐನೂರರಿಂದ ನೂರು ಕಿಲೋಮೀಟರ್ ಗೆ ದೂರವು ಇಳಿಕೆ
ಭಾರತೀಯ ರೈಲ್ವೆ ನಿರ್ಮಿಸಿರುವ ಡಬಲ್-ಡೆಕ್ಕರ್ ಸೇತುವೆಯ ಕೆಳಭಾಗದಲ್ಲಿ ಎರಡು ರೈಲು ಹಳಿಗಳಿವೆ. ಮೇಲ್ಭಾಗದಲ್ಲಿ ಮೂರು ಪಥದ ರಸ್ತೆಗಳು ಕೂಡ ಇವೆ. ಭಾರಿ ದೊಡ್ಡ ಪ್ರಮಾಣದ ಸೇನಾ ಟ್ಯಾಂಕ್ ಗಳು ಕೂಡ ಯಾವುದೇ ತೊಂದರೆ ಇಲ್ಲದೆ ಇಲ್ಲಿ ಸಾಗಬಹುದು. ಈ ರೈಲ್ವೆ ಮಾರ್ಗದ ಮೂಲ್ಕ ಧೇಮಜ್ ಹಾಗೂ ದಿಬ್ರುಘರ್ ಮಧ್ಯೆ ದೂರವು ಐನೂರರಿಂದ ನೂರು ಕಿಲೋಮೀಟರ್ ಗೆ ಇಳಿಕೆ ಆಗಲಿದೆ. ಈ ಯೋಜನೆಗೆ ಒಟ್ಟಾರೆ 5920 ಕೋಟಿ ರುಪಾಯಿ ವೆಚ್ಚವಾಗಿದೆ.

ಗುವಾಹತಿ ನಂತರ ಅತಿ ದೊಡ್ಡ ವಾಣಿಜ್ಯ ಕೇಂದ್ರ
ಅಸ್ಸಾಮ್ ನಲ್ಲಿ ಗುವಾಹತಿ ನಂತರ ಅತಿ ದೊಡ್ಡ ವಾಣಿಜ್ಯ ಕೇಂದ್ರ ದಿಬ್ರುಘರ್. ಶಿಕ್ಷಣ, ಆರೋಗ್ಯ ಮತ್ತಿತರ ಕ್ಷೇತ್ರಗಳು ಇಲ್ಲಿ ಪ್ರಗತಿ ಸಾಧಿಸುತ್ತವೆ ಎಂದು ಸ್ಥಳೀಯ ವ್ಯಾಪಾರಿಯೊಬ್ಬರು ಅಭಿಪ್ರಾಯ ಪಡುತ್ತಾರೆ. ದಿಬ್ರುಘರ್ ನಗರವು ಈಶಾನ್ಯ ಭಾಗದ ಮೂರನೇ ಅತಿ ದೊಡ್ಡ ನಗರ. ಇಲ್ಲಿ ಮುಖ್ಯವಾದ ಆಸ್ಪತ್ರೆಗಳು, ಮೆಡಿಕಲ್ ಕಾಲೇಜುಗಳು ಹಾಗೂ ವಿಮಾನ ನಿಲ್ದಾಣ ದಿಬ್ರುಘರ್ ನಲ್ಲಿ ಇದ್ದು, ಈ ಸೇತುವೆ ಸಂಚಾರಕ್ಕೆ ಮುಕ್ತವಾದ ನಂತರ ಧೇಮಾಜಿಯ ಜನರಕ್ಕೂ ಅನುಕೂಲವಾಗಲಿದೆ.

ಅಟಲ್ ಜೀ ಜನ್ಮದಿನದಂದು ಸೇತುವೆಗೆ ಚಾಲನೆ
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನವನ್ನು ಕೇಂದ್ರ ಸರಕಾರ 'ಉತ್ತಮ ಆಡಳಿತ ದಿನ' ಎಂದು ಆಚರಿಸುತ್ತಿದ್ದು, ಆದೇ ದಿನ ಡಿಸೆಂಬರ್ ಇಪ್ಪತ್ತೈದನೇ ತಾರೀಕು ಪ್ರಧಾನಿ ನರೇಂದ್ರ ಮೋದಿ ಬೊಗಿಬೀಲ್ ಸೇತುವೆಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಅರುಣಾಚಲಪ್ರದೇಶಕ್ಕೆ ಸರಕು ಸೇವೆ ಸಾಗಣೆ ಸೇವೆ ಮೂಲಸೌಕರ್ಯ ವೃದ್ಧಿಗೆ ಈ ಯೋಜನೆ ದೊಡ್ಡ ಬಲವಾಗಲಿದೆ.











Click it and Unblock the Notifications