ಇಂಥ ಶಾಲೆಗೆ ಮಕ್ಕಳನ್ನು ಹೇಗೆ ಕಳಿಸುವುದು? ತಾಯಿಯ ಆಕ್ರಂದನ
ಗುರ್ಗಾಂವ್, ಸೆಪ್ಟೆಂಬರ್ 09 : ಏಳು ವರ್ಷದ ಬಾಲಕನ ಹತ್ಯೆಗೆ ಸಾಕ್ಷಿಯಾದ ರಯನ್ ಅಂತಾರಾಷ್ಟ್ರೀಯ ಶಾಲೆಯ ವಿರುದ್ಧ ಪೋಷಕರೆಲ್ಲರೂ ದಂಗೆ ಎದ್ದಿದ್ದು, ಬಾಲಕನ ಕೊಲೆಯ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸುತ್ತಿದ್ದಾರೆ.
ಕಾಕ್ ಟೇಲ್ ಕುಡಿದ ಆತನ ಅರ್ಧ ಹೊಟ್ಟೆ ಕತ್ತರಿಸಿದ ವೈದ್ಯರು
ಎರಡನೇ ತರಗತಿಯಲ್ಲಿ ಓದುತ್ತಿದ್ದ ಪ್ರದ್ಯುಮನ್ ನನ್ನು ಶೌಚಾಲಯದಲ್ಲಿ ಅಮಾನುಷವಾಗಿ, ಕತ್ತು ಕತ್ತರಿಸಿ ಹತ್ಯೆಗೈದ ಬಸ್ ಕಂಡಕ್ಟರ್ ಅಶೋಕ್ ನನ್ನು ಬಂಧಿಸಲಾಗಿದ್ದು, ಆತನನ್ನು ನ್ಯಾಯಾಲಯ ಪೊಲೀಸ್ ವಶಕ್ಕೆ ನೀಡಿದೆ. ಕೊಲೆಗಡುಕ ಬಾಲಕನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದ ಎಂದೂ ತಿಳಿದುಬಂದಿದೆ.
ಶಾಲೆಗೆ ಬರುತ್ತಲೇ ಶೌಚಾಲಯಕ್ಕೆ ಹೋಗಿದ್ದ ಪ್ರದ್ಯುಮನ ಕೆಲವೇ ಕ್ಷಣಗಳಲ್ಲಿ ಹತ್ಯೆಗೀಡಾಗಿದ್ದ. ಶೌಚಾಲಯದಲ್ಲಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ಬಸ್ ಕಂಡಕ್ಟರ್ ಅಶೋಕ್, ಬಾಲಕನ ಕತ್ತು ಸೀಳೆ ಭೀಭತ್ಸವಾಗಿ ಹತ್ಯೆಗೈದಿದ್ದ. ಶಾಲೆಗೆ ಹೋದ ಹದಿನೈದೇ ನಿಮಿಷದಲ್ಲಿ ಬಾಲಕ ಸತ್ತ ಸುದ್ದಿ ತಂದೆಯನ್ನು ತಲುಪಿತ್ತು.
ಶುಕ್ರವಾರದಿಂದಲೇ ಬಾಲಕನ ಪೋಷಕರು ಮತ್ತು ನೂರಾರು ಮಕ್ಕಳ ತಂದೆತಾಯಿಯರು ಶಾಲೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಮಕ್ಕಳಿಗೆ ರಕ್ಷಣೆ ನೀಡಲು ವಿಫಲವಾದ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸುವುದು ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಶಾಲೆಯ ಪ್ರಿನ್ಸಿಪಾಲ್ ನೀರಜ್ ಬಾತ್ರಾನನ್ನು ಅಮಾನತುಗೊಳಿಸಲಾಗಿದ್ದರೂ, ಹತ್ಯೆ ಮಾಡಿದ ಅಶೋಕ್ ನನ್ನು ಬಂಧಿಸಲಾಗಿದ್ದರೂ, ಪ್ರತಿಭಟನೆಯನ್ನು ಬಿಡದ ಪೋಷಕರು ಇಡೀ ಮ್ಯಾನೇಜ್ಮೆಂಟ್ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಬಾಲಕನ ತಂದೆ ಗುರ್ಗಾಂವ್ ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿ ಮನವಿಯನ್ನು ಸಲ್ಲಿಸಿದರು.
ಹತ್ಯೆಯಾದ ಬಾಲಕನ ಅಕ್ಕ 5ನೇ ತರಗತಿಯಲ್ಲಿ ಇದೇ ಶಾಲೆಯಲ್ಲಿ ಓದುತ್ತಿದ್ದಾಳೆ. ಮಕ್ಕಳಿಗೆ ರಕ್ಷಣೆ ಸಿಗದಿದ್ದರೆ ಇಂಥ ಶಾಲೆಗೆ ಕಳಿಸುವುದು ಹೇಗೆ ಎಂಬುದು ಬಾಲಕನ ತಾಯಿ ಜ್ಯೋತಿಯವರ ಅಳಲು. ಮಗನನ್ನು ಕಳೆದುಕೊಂಡಿರುವ ಜ್ಯೋತಿಯವರು ಆರ್ತನಾದ ಕರಳು ಕಿತ್ತುಬರುವಂತಿತ್ತು.
ಶುಕ್ರವಾರವೇ ಶಾಲೆಗೆ ನುಗ್ಗಿದ್ದ ನೂರಾರು ಪೋಷಕರು ಶಾಲೆಯ ಪೀಠೋಪಕರಣವನ್ನು ಧ್ವಂಸ ಮಾಡಿದ್ದಾರೆ. ಶುಕ್ರವಾರ ಬೆಳಿಗ್ಗೆ ಘಟನೆ ನಡೆದ ನಂತರ ಹಲವಾರು ಪೋಷಕರು ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಶಿಕ್ಷಕರಿಗೆ ಫೋನ್ ಮಾಡಿ ವಿಚಾರಿಸಿದರೂ ಉತ್ತರ ಬರದಿರುವುದು ಅವರನ್ನು ಮತ್ತಷ್ಟು ಕ್ರೋಧಿತರನ್ನಾಗಿ ಮಾಡಿದೆ.
ನ್ಯಾಯಾಲಯದಲ್ಲಿ ಆರೋಪಿಯನ್ನು ಪ್ರತಿನಿಧಿಸದಿರಲು ನಿರ್ಧಾರ : ಆರೋಪಿ ಅಶೋಕ್ ನನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸದಿರಲು ಸೊಹನಾ ಬಾರ್ ಅಸೋಸಿಯೇಷನ್ ನಿರ್ಧರಿಸಿದೆ. ಈ ಕುರಿತು ಪತ್ರಿಕಾಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ.