ಬಾಲಕಿಯರ ಅತ್ಯಾಚಾರ, ಕೊಲೆ; ಇಪ್ಪತ್ತು ವರ್ಷದ ಈ ಕ್ರೂರಿ ಬಾಯ್ಬಿಟ್ಟ ಭಯಾನಕ ಸತ್ಯ
ಈ ನಿರುದ್ಯೋಗಿ, ಇಪ್ಪತ್ತು ವರ್ಷದ ಯುವಕ ತಾನು ಮೂರರಿಂದ ಏಳು ವರ್ಷದ ಕನಿಷ್ಠ ಒಂಬತ್ತು ಬಾಲಕಿಯರನ್ನು ನವದೆಹಲಿ ಹಾಗೂ ಇತರ ನಗರಗಳಲ್ಲಿ ಕೊಂದಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಕಳೆದ ಎರಡು ವರ್ಷಗಳಲ್ಲಿ ಈ ಕೃತ್ಯಗಳನ್ನು ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗುರ್ ಗಾಂವ್ ನ ಕೊಳೆಗೇರಿ ಪ್ರದೇಶದಲ್ಲಿ ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಹಾಗೂ ಹತ್ಯೆ ಮಾಡಿದ ಆರೋಪದಲ್ಲಿ ಸುನೀಲ್ ಕುಮಾರ್ ಎಂಬಾತನನ್ನು ಸೋಮವಾರ ಬಂಧಿಸಲಾಗಿತ್ತು. "ಆತ ಅತ್ಯಾಚಾರ ಎಸಗುವ ಮುನ್ನ ಸಂತ್ರಸ್ತರ ಕಾಲು ಮುರಿಯುತ್ತಿದ್ದ" ಎಂದು ಎಎಸ್ ಐ ಸುಭಾಷ್ ಬೊಕೆನ್ ತಿಳಿಸಿದ್ದಾರೆ.
ಆರೋಪಿಯನ್ನು ಎಂಟು ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಿ, ಮಂಗಳವಾರ ಕೋರ್ಟ್ ಆದೇಶ ನೀಡಿದೆ. ಸುನೀಲ್ ಕುಮಾರ್ ಗೆ ಇನ್ನೂ ವಕೀಲರು ಸಿಕ್ಕಿಲ್ಲ. ಮೂರು ಮಕ್ಕಳ ಕೊಲೆಗೆ ಸಂಬಂಧಿಸಿದಂತೆ ಆತನ ಹೇಳಿಕೆ ತಾಳೆ ಆಗುತ್ತಿರುವ ಬಗ್ಗೆ ಪೊಲೀಸರು ತಿಳಿಸಿದ್ದು, ಇತರ ಪ್ರಕರಣಗಳ ತನಿಖೆ ನಡೆಸುತ್ತಿದ್ದಾರೆ.

ದೆಹಲಿಯಲ್ಲಿ ನಾಲ್ಕು, ಗುರ್ ಗಾಂವ್ ನಲ್ಲಿ ಮೂರು, ಝಾನ್ಸಿ ಹಾಗೂ ಗ್ವಾಲಿಯರ್ ನಲ್ಲಿ ತಲಾ ಒಂದು ಪ್ರಕರಣಕ್ಕೆ ಆತ ಕಾರಣ ಆಗಿರುವ ಬಗ್ಗೆ ಪೊಲೀಸರಿಗೆ ಗುಮಾನಿ ಇದೆ. ಸುನೀಲ್ ನ ವಿರುದ್ಧ ಅಧಿಕೃತವಾಗಿ ಆರೋಪ ಪಟ್ಟಿ ದಾಖಲಿಸಿಲ್ಲ. ಸುನೀಲ್ ನಿರುದ್ಯೋಗಿ ಆಗಿದ್ದು, ಆಗಾಗ ದಿನಗೂಲಿ ಕಾರ್ಮಿಕನಾಗಿ ತೆರಳುತ್ತಿದ್ದ. ಬಡವರಿಗೆ ಪುಕ್ಕಟೆಯಾಗಿ ಊಟ ಹಂಚುವ ಕಡೆ ಆಹಾರಕ್ಕಾಗಿ ತೆರಳುತ್ತಿದ್ದ.
ಆಹಾರವನ್ನು ತೆಗೆದುಕೊಂಡು ಹೋಗಲು ತೆರಳುತ್ತಿದ್ದ ಪುಟ್ಟ ವಯಸ್ಸಿನ ಬಾಲಕಿಯರೇ ಈತನಿಗೆ ಬಲಿಯಾಗುತ್ತಿದ್ದರು. ಅವರಿಗೆ ಸಿಹಿ ಅಥವಾ ಹಣದ ಆಮಿಷ ತೋರಿಸುತ್ತಿದ್ದ. ಆ ನಂತರ ಅವರನ್ನು ಅಪಹರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ
ಭಾರತದಲ್ಲಿ ಈಗಲೂ ಇಂಥ ಪ್ರಕರಣಗಳು ನಡೆಯುತ್ತಿರುವುದು ದುರದೃಷ್ಟ. ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ರೂಪಿಸಿದರೂ ಏನು ಪ್ರಯೋಜನ ಆಗುತ್ತಿಲ್ಲ ಎಂಬ ಬೇಸರ ಆಗುತ್ತದೆ ಎಂದು ಮಕ್ಕಳ ಹಕ್ಕುಗಳ ಸಂಸ್ಥೆಯ ಅಧಿಕಾರಿ ಪ್ರೀತಿ ಮಹರ ಹೇಳಿದ್ದಾರೆ.












Click it and Unblock the Notifications