ಪ್ರದ್ಯುಮ್ನ ಹತ್ಯೆ: ಆರೋಪಿಯ ನ್ಯಾಯಾಂಗ ಬಂಧನ ವಿಸ್ತರಣೆ
ಗುರ್ಗಾಂವ್, ಜನವರಿ 30: ಗುರ್ಗಾಂವ್ ನ ರಾಯನ್ ಇಂಟರ್ನ್ಯಾಶನಲ್ ಸ್ಕೂಲಿನಲ್ಲಿ ಹತ್ಯೆಯಾದ ಪ್ರದ್ಯಮ್ನ ಪ್ರಕರಣದ ಆರೋಪಿಯ ನ್ಯಾಯಾಂಗ ಬಂಧನದ ಅವಧಿಯನ್ನು ಗುರ್ಗಾಂವ್(ಗುರುಗ್ರಾಮ) ನ ಚಿಲ್ಡ್ರನ್ಸ್ ಸೆಶನ್ಸ್ ಕೋರ್ಟ್ ವಿಸ್ತರಿಸಿದೆ.
ಆರೋಪಿ, ಇದೇ ಶಾಲೆಯಲ್ಲಿ 11 ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯಾಘಿದ್ದು, ಆತನ ನ್ಯಾಯಾಂಗ ಬಂಧನದ ಅವಧಿಯನ್ನು ಫೆಬ್ರವರಿ 12 ರವರೆಗೆ ಮುಂದೂಡಲಾಗಿದೆ.
ಪ್ರದ್ಯುಮ್ನ ಕೊಲೆ : ಗುರ್ಗಾಂವ್ ಕೋರ್ಟ್ ನಿಂದ ಜಾಮೀನು ನಿರಾಕರಣೆ
ಹರ್ಯಾಣದ ಗುರ್ಗಾಂವ್ ನಲ್ಲಿರುವ ರಾಯನ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದ ಪ್ರದ್ಯುಮ್ನ ಠಾಕೂರ್ ನನ್ನು ಸೆಪ್ಟೆಂಬರ್ 8, 2017 ರಂದು ಶಾಲೆಯ ಶೌಚಾಲಯದಲ್ಲಿ ಕತ್ತು ಸೀಳಿ ಹತ್ಯೆಗೈಯಲಾಗಿತ್ತು.
ಈ ಸಂಬಂಧ ಇದೇ ಶಾಲೆಯಲ್ಲಿ ಓದುತ್ತಿದ್ದ 16 ವರ್ಷದ ವಿದ್ಯಾರ್ಥಿಯನ್ನು ಕೆಲ ದಿನಗಳ ನಂತರ ಬಂಧಿಸಲಾಗಿತ್ತು. ಪರೀಕ್ಷೆ ಮತ್ತು ಪಾಲಕರ ಮೀಟಿಂಗ್ ಮುಂದೂಡುವ ಸಲುವಾಗಿ ಆರೋಪಿಯೇ ಈ ಕೃತ್ಯ ಎಸಗಿರುವುದಾಗಿ ತನಿಖೆ ಸಂದರ್ಭದಲ್ಲಿ ತಿಳಿದುಬಂದಿತ್ತು.
ಈ ಪ್ರಕರಣವನ್ನು ಸದ್ಯಕ್ಕೆ ಸಿಬಿಐ ಗೆ ವಹಿಸಲಾಗಿದ್ದು, ಘಟನೆಯ ಸತ್ಯಾಸತ್ಯತೆ ಹೊರಬರಬೇಕಿದೆ. ಇತ್ತೀಚೆಗೆ ತಾನೇ ಆರೋಪಿ ಪರ ವಕೀಲರು ಎರಡು ಬಾರಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನೂ ನ್ಯಾಯಾಲಯ ತಿರಸ್ಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.