ಮೈತುಂಬಿದ ಬೆಣ್ಣೆಹಳ್ಳದಲ್ಲಿ ತೇಲಿಬರುತ್ತಿವೆ ಹೆಣಗಳು
ಗದಗ, ಅಕ್ಟೋಬರ್ 17 : ಉತ್ತರ ಕರ್ನಾಟಕ ಭಾಗದಲ್ಲಿ ಹಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮಳೆಯ ಅಬ್ಬರಕ್ಕೆ ಎಂಟು ವರ್ಷದ ನಂತರ ಬೆಣ್ಣೆಹಳ್ಳ ತುಂಬಿ ಹರಿಯುತ್ತಿದೆ. ಮಳೆ ಈಗ ಕಡಿಮೆಯಾಗಿದೆ. ಆದರೆ, ಹಳ್ಳದಲ್ಲಿ ಹೆಣಗಳು ತೇಲಿ ಬರುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಕಳೆದ ಹಲವು ದಿನಗಳಿಂದ ಗದಗ, ಧಾರವಾಡ, ಹಾವೇರಿ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಣ್ಣೆಹಳ್ಳ ಉಕ್ಕಿ ಹರಿಯುತ್ತಿದೆ. ಹಳ್ಳದಲ್ಲಿ ಮೃತದೇಹಗಳು ತೇಲಿ ಬರುತ್ತಿವೆ. ಇಂದು ಯಾವಗಲ್ ಗ್ರಾಮದ ಬಳಿ ಇಬ್ಬರು ಯುವಕರ ಶವಗಳು ಸಿಕ್ಕಿವೆ.
ಹರಿದ
ತುಂಗಭದ್ರಾ
ನದಿ
ನೀರು,
ಗದಗದ
ಭೀಷ್ಮ
ಕೆರೆ
ಭರ್ತಿ
ಈ ಮೃತ ದೇಹಗಳು ಯಾರದ್ದು? ಎನ್ನುವ ಮಾಹಿತಿ ಸಿಕ್ಕಿಲ್ಲ. ನೀರಿನ ರಭಸಕ್ಕೆ ತೇಲಿ ಬಂದ ಶವಗಳೇ ಅಥವ ಆತ್ಮಹತ್ಯೆ ಮಾಡಿಕೊಂಡಿರಬಹುದೇ?, ಕೊಲೆ ಮಾಡಿ ಹಳ್ಳಕ್ಕೆ ಎಸೆದಿರಬಹುದೇ? ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.
ರೋಣ: ನಿರಂತರ ಮಳೆಯಿಂದಾಗಿ ಉಕ್ಕಿ ಹರಿದ ಬೆಣ್ಣೆಹಳ್ಳ, ಪ್ರವಾಹದ ಭೀತಿ
ನಿರಂತರ ಮಳೆಯಿಂದಾಗಿ ಬೆಣ್ಣೆಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹಾವೇರಿ ಜಿಲ್ಲೆಯ ದುಂಡಿಸಿಯಿಂದ ಗದಗ, ಧಾರವಾಡ, ಬಾಗಲಕೋಟೆ ಜಿಲ್ಲೆಯಲ್ಲಿ ಬೆಣ್ಣೆಹಳ್ಳ ಹರಿಯುತ್ತದೆ. ಎಂಟು ವರ್ಷದ ಹಿಂದೆ ಬೆಣ್ಣೆಹಳ್ಳದಲ್ಲಿ ಪ್ರವಾಹ ಹೆಚ್ಚಾಗಿ ಸಾವಿರಾರು ಕುಟುಂಬಗಳು ಬೀದಿಗೆ ಬಂದಿದ್ದವು.
ಇದುವರೆಗೂ ಹಳ್ಳದಲ್ಲಿ ಕಾಣಿಸಿಕೊಂಡ ಶವಗಳ ಗುರುತು ಪತ್ತೆಯಾಗಿಲ್ಲ. ಯಾವಗಲ್ ಗ್ರಾಮದ ಬಳಿ ಪ್ರವಾಹ ಹೆಚ್ಚಿರುವ ಕಾರಣ ಶವ ತೆಗೆಯಲು ಸಾಧ್ಯವಾಗುತ್ತಿಲ್ಲ. ರೋಣ ತಾಲೂಕಿನ ಹೊಳೆ ಆಲೂರು ಬಳಿ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ನೇತೃತ್ವದಲ್ಲಿ ಶವಗಳಿಗಾಗಿ ಶೋಧಕಾರ್ಯ ನಡೆದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗದಗ ಎಸ್ಪಿ ಸಂತೋಷ ಬಾಬು ಅವರು, 'ತೇಲಿಬಂದ ಶವಗಳ ಬಗ್ಗೆ ಸುತ್ತಮುತ್ತಲಿನ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಲಾಗಿದೆ. ಯಾವ ಠಾಣೆಯಲ್ಲೂ ಕಾಣೆಯಾದ ಪ್ರಕರಣಗಳು ದಾಖಲಾಗಿಲ್ಲ. ಬೇರೆ ಜಿಲ್ಲೆಯಿಂದ ಶವಗಳು ತೇಲಿ ಬಂದಿರುವ ಶಂಕೆ ಇದೆ' ಎಂದು ಹೇಳಿದ್ದಾರೆ.