ಹರಿದ ತುಂಗಭದ್ರಾ ನದಿ ನೀರು, ಗದಗದ ಭೀಷ್ಮ ಕೆರೆ ಭರ್ತಿ
ಗದಗ, ಅಕ್ಟೋಬರ್ 04 : ಗದಗದ ಐತಿಹಾಸಿಕ ಭೀಷ್ಮ ಕೆರೆ ಭರ್ತಿಯಾಗಿದೆ. ತುಂಗಭದ್ರಾ ನದಿ ನೀರನ್ನು ಕೆರೆಗೆ ಹರಿಸಲಾಗಿದ್ದು, 103 ಎಕರೆ ವಿಸ್ತಿರ್ಣದ ಕೆರೆ ತುಂಬಿ ಜೀವಕಳೆ ಪಡೆದಿದೆ. ಗದಗ-ಬೆಟಗೇರಿಗೆ ಕುಡಿಯುವ ನೀರು ಪೂರೈಸುವ ಪ್ರಮುಖ ಕೆರೆ ಇದಾಗಿದೆ.
ಹಲವು ದಶಕಗಳ ಹಿಂದೆ ನೈಸರ್ಗಿಕವಾದ ಮಳೆ ನೀರಿನಿಂದ ಕೆರೆ ತುಂಬಿತ್ತು. ಒಟ್ಟು 0.22 ಟಿಎಂಸಿ ನೀರು ಕರೆಯಲ್ಲಿ ಶೇಖರಣೆಗೊಳ್ಳುತ್ತದೆ. ಕೆರಯಲ್ಲಿನ ಹೂಳು ತೆಗೆದು ಸ್ವಚ್ಛಗೊಳಿಸಲಾಗಿದ್ದು, ನದಿ ನೀರು ಹರಿಸಿದ ಬಳಿಕ ಕೆರೆ ತುಂಬಿಕೊಂಡಿದೆ.

ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಮೂರು ಹಂತಗಳಲ್ಲಿ ನೀರನ್ನು ಪಂಪ್ ಮಾಡಿ, ಭೀಷ್ಮ ಕೆರೆಗೆ ಹರಿಸಲಾಗಿದೆ. ಸುಮಾರು 60 ಕಿ.ಮೀ.ದೂರವಿರುವ ತುಂಗಭದ್ರಾ ನದಿ ನೀರನ್ನು ಹಮ್ಮಿಗೆ ಬ್ಯಾರೇಜ್ ಮಾರ್ಗವಾಗಿ ಪೈಪ್ ಮೂಲಕ ಗದಗಕ್ಕೆ ತರಲಾಗಿದೆ.
2017ರ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ತುಂಗಭದ್ರಾ ನದಿ ಮೂಲಕ ಭೀಷ್ಮ ಕೆರೆಗೆ ನೀರು ಹರಿಸಲಾಗಿದೆ. ಇದರಿಂದ ಕೆರೆ ತುಂಬಿದ್ದು, ಗದಗ-ಬೆಟಗೇರಿ ಅವಳಿ ನಗರದ ಜನರು ಸಂತಸ ಗೊಂಡಿದ್ದಾರೆ. 2006ರಲ್ಲಿಯೇ ನದಿಯಿಂದ ನೀರು ಹರಿಸುವ ಪ್ರಯತ್ನ ನಡೆಸಲಾಗಿತ್ತು. ಆದರೆ, ಅದು ವಿಫಲವಾಗಿತ್ತು. ಈ ಬಾರಿ ಯೋಜನೆ ಯಶಸ್ವಿಯಾಗಿದೆ.

ಕೆರೆ ತುಂಬಿರುವುದರಿಂದ ಕೆರೆ ಪಾತ್ರದ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟವೂ ಹೆಚ್ಚಿದೆ. ಇದರಿಂದ ಜನರು ಸಂತಸಗೊಂಡಿದ್ದಾರೆ. ಸ್ವಚ್ಚಗೊಂಡಿರುವ ಕೆರೆಗೆ ನೀರು ಹರಿಸಿರುವುದಕ್ಕೆ ಪರಿಸರ ಪ್ರೇಮಿಗಳು ಸಂತಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications